ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗೆ ಅಧಿಕಾರಿ ಮನೆಯ ಬೀಗ ಒಡೆದರು

ಸಿಂಧನೂರಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದ್ದ ಖಜಾನೆಯ ಕೀ ಹೊಂದಿರುವ ಅಧಿಕಾರಿ ಅಮರೇ ಗೌಡ ಯಾರಿಗೂ ಹೇಳದೆ ಬೇರೆಡೆ ಹೋಗಿದ್ದರಿಂದ ಕಚೇರಿ ಕೀ ಸಿಗದೆ ಪರದಾಡಬೇಕಾಯಿತು

ವಿಕ ಸುದ್ದಿಲೋಕ 4 Apr 2017, 7:29 am

ಸಿಂಧನೂರು (ರಾಯಚೂರು): ಸಿಂಧನೂರು ತಾಲೂಕಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ತಡವಾಗಿ ಆರಂಭವಾದವು. ಇದಕ್ಕೆ ಕಾರಣ ಉಪ ಖಜಾನಾಧಿಕಾರಿಯ ಬೇಜವಾಬ್ದಾರಿ.

ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದ್ದ ಖಜಾನೆಯ ಕೀ ಹೊಂದಿರುವ ಅಧಿಕಾರಿ ಅಮರೇ ಗೌಡ ಯಾರಿಗೂ ಹೇಳದೆ ಬೇರೆಡೆ ಹೋಗಿದ್ದರಿಂದ ಸೋಮವಾರ ಬೆಳಗ್ಗೆ ಕಚೇರಿ ಕೀ ಸಿಗದೆ ಪರದಾಡಬೇಕಾಯಿತು. ಕೊನೆಗೆ ಅವರ ಮನೆಯ ಬೀಗ ಒಡೆದು ಕೀ ತೆಗೆದು ಪ್ರಶ್ನೆಪತ್ರಿಕೆ ಹೊರತರಲಾಯಿತು. ಅಷ್ಟು ಹೊತ್ತಿಗೆ ಪರೀಕ್ಷೆ ಸಮಯ ಆರಂಭಗೊಂಡು 15 ನಿಮಿಷ ಕಳೆದಿತ್ತು.

ಏನಾಯಿತು

Vijaya Karnataka Web sslc exam question paper
ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗೆ ಅಧಿಕಾರಿ ಮನೆಯ ಬೀಗ ಒಡೆದರು

ಸಿಂಧನೂರು ತಾಲೂಕು ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಉಪ ಖಜಾನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭಾನುವಾರದ ರಜೆ ಕಾರಣ ಉಪ ಖಜಾನೆ ಅಧಿಕಾರಿ ಅಮರೇಗೌಡ, ಪರೀಕ್ಷಾ ಉಸ್ತುವಾರಿ ಅಧಿಕಾರಿಗಳ ಗಮನಕ್ಕೆ ತಾರದೇ ಬೇರೆಡೆ ತೆರಳಿದ್ದರು. ಸೋಮವಾರ ಬೆಳಗ್ಗೆ 7ಕ್ಕೆ ಖಜಾನೆ ಕಚೇರಿಗೆ ಬಂದ ಬಿಇಒ ಮತ್ತಿತರ ಅಧಿಕಾರಿಗಳು, ಕಚೇರಿಯ ಕೀಲಿಕೈ ದೊರೆಯದೇ ಗೊಂದಲಕ್ಕೀಡಾದರು.

7.30ಕ್ಕೆ ತಹಸೀಲ್ದಾರ್‌ ಶಂಕರಪ್ಪ ಕೂಡಾ ಸ್ಥಳಕ್ಕೆ ಬಂದರು, ಆದರೆ ಕೀಲಿ ಕೈ ಹೊಂದಿದ್ದ ಅಮರೇಗೌಡ ಬಾರದಿರುವುದರಿಂದ ಎಲ್ಲರೂ ಕಂಗಾಲಾದರು. ನಗರ ಸೇರಿದಂತೆ ತಾಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳಿದ್ದು, 8.30ಕ್ಕೆ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರ ತಲುಪಿಸಬೇಕಾಗಿತ್ತಾದರೂ 8.30ರವರೆಗೂ ಖಜಾನೆ ಅಧಿಕಾರಿ ಅಮರೇಗೌಡ ಅವರ ಮೊಬೈಲ್‌ ಸಂಪರ್ಕಕ್ಕೂ ಸಿಗದೇ ಪರದಾಡಿದರು. 8.35ಕ್ಕೆ ಖಜಾನೆ ಇಲಾಖೆಯ ಸಿಬ್ಬಂದಿಯೊಬ್ಬರ ಸಂಪರ್ಕಕ್ಕೆ ಅಮರೇಗೌಡ ಸಿಕ್ಕರಾದರೂ ಅವರ ಬಳಿ ಖಜಾನೆ ಕೀಲಿ ಕೈ ಇರಲಿಲ್ಲ. ಅವರ ಮನೆಯಲ್ಲಿ ಖಜಾನೆ ಕೀಲಿ ಕೈ ಇತ್ತು ಆದರೆ ಮನೆಯ 'ಕೀ' ಯನ್ನು ಗೌಡರ ಮಡದಿ ತವರು ಮನೆಗೆ ಕೊಂಡೊಯ್ದಿದ್ದರು. ಕೊನೆಗೆ ಧಾವಿಸಿ ಬಂದಿದ್ದ ಅಮರೇಗೌಡ ಅವರ ಸಮ್ಮುಖದಲ್ಲೇ ಬೆಳಗ್ಗೆ 8.40ಕ್ಕೆ ಮನೆಯ ಬೀಗ ಒಡೆದು, ಖಜಾನೆ ಕಚೇರಿಯ ಕೀಲಿ ತರಲಾಯಿತು. 8.45ಕ್ಕೆ ಖಜಾನೆ ಕಚೇರಿಯ ಬೀಗ ತೆರೆದು, ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ಕಳುಹಿಸಿದ ತಹಸೀಲ್ದಾರ್‌ ಹಾಗೂ ಬಿಇಒ ಗಳು ನಿಟ್ಟುಸಿರು ಬಿಟ್ಟರು.

ಗೊಂದಲಕ್ಕೆ ಕಾರಣ
ಉಪಖಜಾನೆ ಅಧಿಕಾರಿ ಅಮರೇಗೌಡ ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದವರು. ಸಿಂಧನೂರಿನ ಆದರ್ಶ ಕಾಲೊನಿಯಲ್ಲೂ ಸ್ವಂತ ಮನೆಯಿದೆ. ಭಾನುವಾರ ರಜೆಯಾಗಿದ್ದರಿಂದ ಅವರು ಸ್ವಗ್ರಾಮಕ್ಕೆ ತೆರಳಿದ್ದರು. ಅವರ ಪತ್ನಿ, ತವರೂರು ಕೊಪ್ಪಳಕ್ಕೆ ತೆರಳಿದ್ದರು. ಊರಿಗೆ ಹೋಗುವ ಭರದಲ್ಲಿ ಅವರ ಪತ್ನಿ, ಸಿಂಧನೂರಿನ ಮನೆಯ ಬೀಗದ ಕೀ ಯನ್ನು ತಮ್ಮ ಜತೆ ತೆಗೆದುಕೊಂಡುಹೋಗಿದ್ದರು. ಈ ಮನೆಯಲ್ಲಿ ಉಪಖಜಾನೆ ಕಚೇರಿಯ ಬೀಗದ ಕೀ ಇತ್ತು. ಸೋಮವಾರ ಬೆಳಗ್ಗೆ ಅಮರೇಗೌಡ ಅವರಿಗೆ ಶಿಕ್ಷ ಣ ಇಲಾಖೆ ಅಧಿಕಾರಿಗಳು ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಅನಾರೋಗ್ಯ ನಿಮಿತ್ತ ಅವರು ಸಕಾಲಕ್ಕೆ ಬರಲಾಗಲಿಲ್ಲ ಎನ್ನಲಾಗುತ್ತಿದೆ.

ನಾನು ಬೆಳಗ್ಗೆ 7 ಗಂಟೆಗೆ ಉಪ ಖಜಾನೆ ಕಚೇರಿಗೆ ತೆರಳಿದ್ದೆ. ಆದರೆ, ಕಚೇರಿಯ ಕೀಲಿಕೈ ಇಲ್ಲ ಎಂಬ ಕಾರಣಕ್ಕೆ ಪ್ರಶ್ನೆಪತ್ರಿಕೆ ಪಡೆಯುವುದು ವಿಳಂಬವಾಯಿತು. ಕೆಲ ಹೊತ್ತಿನ ನಂತರ ಖಜಾನೆ ಸಿಬ್ಬಂದಿಯೊಬ್ಬರು ಕೀಲಿಕೈ ತಂದುಕೊಟ್ಟರು. ಪ್ರತ್ಯೇಕ ವಾಹನದಲ್ಲಿ ನಿಗದಿತ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲಾಯಿತು. 10 ನಿಮಿಷ ವಿಳಂಬವಾಗಿದೆ. ಈ ಕುರಿತು ಡಿಡಿಪಿಐಗೆ ವರದಿ ನೀಡಲಾಗಿದೆ.

-ಸೋಮಶೇಖರಗೌಡ, ಬಿಇಒ, ಸಿಂಧನೂರು

ತಹಸೀಲ್ದಾರ್‌ ಸಮ್ಮುಖದಲ್ಲೇ ಹೊರತೆಗೆಯಲು ನಿರ್ಧಾರ

ಬೆಂಗಳೂರು: ಸಿಂಧನೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮಂಗಳವಾರದಿಂದ ಸಂಬಂಧಪಟ್ಟ ತಹಸೀಲ್ದಾರ್‌ಗಳ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಹೊರ ತೆಗೆಯಲು ನಿರ್ಧರಿಸಿದೆ. ''ರಾಜ್ಯದ ಇತರೆಡೆ ಇಂತಹ ಲೋಪವಾಗುವುದನ್ನು ತಪ್ಪಿಸಲು ಉಪ ಖಜಾನಾಧಿಕಾರಿಗಳ ಬದಲಿಗೆ ಆಯಾ ತಾಲೂಕಿನ ತಹಸೀಲ್ದಾರ್‌ ಸಮ್ಮುಖದಲ್ಲಿಯೇ ಉಪ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಹೊರ ತೆಗೆಯಲು ತೀರ್ಮಾನಿಸಲಾಗಿದೆ,'' ಎಂದು ಮಂಡಳಿಯ ನಿರ್ದೇಶಕಿ ಯಶೋದಾ ಬೋಪಣ್ಣ 'ವಿಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ