ಆ್ಯಪ್ನಗರ

‘ಸ್ವರ್ಣ ಮಂದಿರದ ಮಾದರಿ ಕವಚ ನಿರ್ಮಾಣ’

ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪ್ರಾಕಾರದಲ್ಲಿರುವ ಶಿಲಾಮಂಟಪವನ್ನು ಮತ್ತಷ್ಟೂ ಶ್ರೀಮಂತವಾಗಿ ಕಂಗೊಳಿಸುವಂತೆ ಮಾಡುವುದು ನಮ್ಮ ಇಚ್ಛೆ.

Vijaya Karnataka 30 Aug 2018, 12:00 am
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪ್ರಾಕಾರದಲ್ಲಿರುವ ಶಿಲಾಮಂಟಪವನ್ನು ಮತ್ತಷ್ಟೂ ಶ್ರೀಮಂತವಾಗಿ ಕಂಗೊಳಿಸುವಂತೆ ಮಾಡುವುದು ನಮ್ಮ ಇಚ್ಛೆ. ಸ್ವರ್ಣ ಮಂದಿರದ ಮಾದರಿಯಲ್ಲಿ ಶಿಲಾ ಮಂಟಪವನ್ನು ನಿರ್ಮಿಸಲು ಸಂಕಲ್ಪ ಮಾಡಿರುವೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು ಹೇಳಿದರು.
Vijaya Karnataka Web RAC-RCH29JD04


ಅವರು ಬುಧವಾರ ಮಂತ್ರಾಲಯದಲ್ಲಿ ಮಹಾರಥೋತ್ಸವದ ಸಂದರ್ಭ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಮಂತ್ರಾಲಯ ಮಠ ವಿಶ್ವಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿದೆ. ಮಠ ಮತ್ತಷ್ಟೂ ಶ್ರೀಮಂತಗೊಳ್ಳಬೇಕೆಂಬುದು ತಮ್ಮ ಆಶಯ. ಮುಂದಿನ ದಿನಗಳಲ್ಲಿ ಶಿಲಾಮಂಟಪಕ್ಕೆ ಚಿನ್ನದ ಕವಚದ ಹೊದಿಕೆ ನಿರ್ಮಾಣ ಮಾಡುವುದು ನಮ್ಮ ಕನಸು ಎಂದರು.

ಸಂಕಷ್ಟ ನಿವಾರಣೆಯಾಗಲಿ: ದೇಶದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಾಕಷ್ಟು ರೈತರು ಬಿಕ್ಕಟ್ಟಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೊಡಗು ಮತ್ತು ಕೇರಳದಲ್ಲಿ ಬಡವರು ಶ್ರೀಮಂತರು ಎನ್ನದೇ ಎಲ್ಲರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಎಲ್ಲರ ಬದುಕಿನಲ್ಲಿ ಮತ್ತೆ ಸಮೃದ್ಧಿ ತುಂಬಲೆಂದು ರಾಯರಲ್ಲಿ ಪ್ರಾರ್ಥಿಸಿರುವೆ. ಶ್ರೀಮಠದಿಂದ ಎರಡೂ ಪ್ರದೇಶಗಳಿಗೆ ತಲಾ 15 ಲಕ್ಷ ರೂ.ತುರ್ತು ಪರಿಹಾರ ಕಳಿಸಲಾಗಿದೆ. ಚಾತುರ್ಮಾಸ ವೃತ ಪೂರ್ಣಗೊಂಡ ನಂತರದಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ಪ್ರವಾಸ ಕೈಗೊಂಡು ಪರಿಹಾರ ಕಾರ್ಯಗಳಿಗೆ ಚುರುಕು ಮೂಡಿಸಲಾಗುತ್ತದೆ ಎಂದರು.

ರಾಯರು ವಿಶ್ವ ಗುರು: ಮಂತ್ರಾಲಯದ ಪ್ರಭು ಶ್ರೀಗುರುರಾಘವೇಂದ್ರರು ವಿಶ್ವಗುರುವಾಗಿದ್ದಾರೆ. ವಿಶ್ವದಲ್ಲಿರುವ ಎಲ್ಲ ಜಾತಿ ಜನಾಂಗದವರಿಂದ ಪೂಜಿತ ಏಕೈಕ ಗುರು. ಈ ದಿನ ರಾಯರು ಭಕ್ತರ ಬಳಿಯೇ ಬಂದು ಹರಸುತ್ತಾರೆಂಬ ನಂಬಿಕೆಯಿದೆ. ಮಹಾರಥೋತ್ಸವದಲ್ಲಿ ಪಾಲ್ಗೊಂಡ ಎಲ್ಲರ ಬದುಕಿನಲ್ಲಿ ಕಷ್ಟಗಳು ಕಳೆದು ಸನ್ಮಂಗಳವಾಗಲಿ. ನಂಬಿದವರನ್ನು ರಾಘವೇಂದ್ರತೀರ್ಥರು ಎಂದಿಗೂ ಕೈಬಿಡುವುದಿಲ್ಲ. ಭಕ್ತರ ತಪ್ಪು ತಿದ್ದಿ ಸನ್ಮಾನರ್ಗದಲ್ಲಿ ಎಲ್ಲರನ್ನೂ ಮುನ್ನಡೆಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಮಠದ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರಿದ್ದರು.

ಹಲವು ಸೌಲಭ್ಯ: ಶ್ರೀಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರೀಮಠ ನಿರಂತರ ಶ್ರಮಿಸುತ್ತಿದೆ. ಶ್ರೀಮಠದ ಪ್ರತಿಯೊಂದೂ ಕಾರ್ಯಕ್ರಮದಲ್ಲಿ ಹಗಲಿರುಳು ದುಡಿಯುವ ಸಿಬ್ಬಂದಿಗೆ ತುಟ್ಟಿ ಭತ್ಯೆ ಹೆಚ್ಚಿಸಲಾಗಿದೆ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀಸುಬಧೇಂದ್ರ ತೀರ್ಥರು ಸಿಹಿ ಸುದ್ದಿ ಪ್ರಕಟಿಸಿದರು.

ಉತ್ತರಾರಾಧನೆಯ ದಿನ ಮಾತನಾಡಿ, ಭಕ್ತರಿಗೆ ಹೆಚ್ಚೆಚ್ಚು ಸೌಲಭ್ಯ ಒದಗಿಸಲಾಗುತ್ತಿದೆ. ಮಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ರಾಯರ ಕ್ಷೇತ್ರದ ಪ್ರಗತಿಯಲ್ಲಿ ಸಮಾಜದಲ್ಲಿರುವ ಪ್ರತಿಯೊಬ್ಬ ಭಕ್ತರ ಕೊಡುಗೆಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ