ಆ್ಯಪ್ನಗರ

ರಾಜ್ಯಪಾಲರ ಮರ್ಜಿಗೆ ಮೂವರ ಹೆಸರು

ಕಳೆದ ಏಳು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರಕಾರ ಕೊನೆಗೂ ಚುರುಕು ನೀಡಿದೆ. ಮೂವರ ಹೆಸರು ಶಿಫಾರಸುಮಾಡಿರುವ ಶೋಧನಾ ಸಮಿತಿಯ ಕಡತ, ಸದ್ಯ ರಾಜ್ಯಪಾಲರ ಅಂಗಳಲ್ಲಿದ್ದು, ಮುಂದಿನ 10 ದಿನಗಳೊಳಗೆ ಹೊಸ ಕುಲಪತಿ ನೇಮಕ ಆದೇಶ ಹೊರಬೀಳುವ ಸಾಧ್ಯತೆಯಿದೆ.

Vijaya Karnataka 5 Sep 2018, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web RAC-RCH04JD04


ಕಳೆದ ಏಳು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರಕಾರ ಕೊನೆಗೂ ಚುರುಕು ನೀಡಿದೆ. ಮೂವರ ಹೆಸರು ಶಿಫಾರಸುಮಾಡಿರುವ ಶೋಧನಾ ಸಮಿತಿಯ ಕಡತ, ಸದ್ಯ ರಾಜ್ಯಪಾಲರ ಅಂಗಳಲ್ಲಿದ್ದು, ಮುಂದಿನ 10 ದಿನಗಳೊಳಗೆ ಹೊಸ ಕುಲಪತಿ ನೇಮಕ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಕುಲಪತಿ ಹುದ್ದೆಗೆ ಅರ್ಹರನ್ನು ಆಯ್ಕೆಮಾಡಲು ನಿವೃತ್ತ ಕುಲಪತಿ ಡಾ.ಶೀಲವಂತರ್ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿಯೊಂದನ್ನು ರಚಿಸಿ ರಾಜ್ಯ ಸರಕಾರ ಕಳೆದ ತಿಂಗಳ ಹಿಂದೆಯಷ್ಟೇ ಆದೇಶ ಹೊರಡಿಸಿತ್ತು. ಆ ಸಮಿತಿಗೆ ತಿಂಗಳೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಿತ್ತು. ಈಗಾಗಲೇ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಅರ್ಹರನ್ನು ಆಯ್ಕೆ ಪ್ರಕ್ರಿಯೆ ಮುಗಿಸಿರುವ ಸಮಿತಿಯು, ಸೆ.2ರಂದು ಬೆಂಗಳೂರಿನಲ್ಲಿ ಸರಕಾರದ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜತೆ ಸಭೆ ನಡೆಸಿತು. ಈ ಸಭೆಯಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಿ ಸರಕಾರಕ್ಕೆ ಕಡತ ಕಳುಹಿಸಿಕೊಡಲಾಯಿತು.

ಅದೇ ದಿನವೇ ಕೃಷಿ ಸಚಿವರ ಅನುಮೋದನೆ ಪಡೆದು, ಸಿಎಂ ಕುಮಾರಸ್ವಾಮಿ ಅವರ ಮೂಲಕ ಸರಕಾರದ ಪರವಾಗಿ ರಾಜ್ಯಪಾಲರ ಕಚೇರಿಗೆ ಕಡತವನ್ನು ರವಾನಿಸಲಾಗಿದೆ. ರಾಯಚೂರು ಕೃಷಿ ವಿವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಬ್ಬರು, ಬೆಂಗಳೂರು ಹಾಗೂ ಧಾರವಾಡದ ತಲಾ ಒಬ್ಬರ ಹೆಸರನ್ನು ಕುಲಪತಿ ಹುದ್ದೆಗಾಗಿ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಡಳಿತಾತ್ಮಕ ತೊಂದರೆ: ಕೃಷಿ ವಿವಿ ಕುಲಪತಿಯಾಗಿದ್ದ ಡಾ.ಪಿ.ಎಂ.ಸಾಲಿಮಠ ಅವರು 2018, ಫೆ.28ರಂದೇ ನಿವೃತ್ತರಾಗಿದ್ದಾರೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿತು. 40ಕ್ಕೂ ಹೆಚ್ಚು ಅರ್ಜಿಗಳು ಬಂದವು. ಶೋಧನಾ ಸಮಿತಿ ಸಭೆ ನಡೆಯುವ ಮೊದಲೇ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ರಾಯಚೂರು ಕೃಷಿ ವಿವಿ ಕುಲಪತಿ ಹುದ್ದೆಗೆ ನೇಮಕಾತಿಯಲ್ಲಿ ಕಳೆದ ಸರಕಾರ ತೋರಿದ ವಿಳಂಬದಿಂದ ಈಗಾಗಲೇ ಸಾಕಷ್ಟು ಆಡಳಿತಾತ್ಮಕ ತೊಂದರೆಗಳು ಎದುರಾಗಿವೆ. ಪ್ರಸಕ್ತ ಸರಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದರೂ ಕುಲಪತಿ ನೇಮಕಾತಿ ಪ್ರಕ್ರಿಯೆ ಮತ್ತೊಮ್ಮೆ ನನೆಗುದಿಗೆ ಬಿತ್ತು.

ಸಾಲಿಮಠ ಅವರು ನಿವೃತ್ತರಾಗುತ್ತಿದ್ದಂತೆಯೇ ವಿವಿ ರಿಜಿಸ್ಟ್ರಾರ್ ಗುತ್ತಿ ಜಂಬುನಾಥ್ ಅವರನ್ನು ಹಂಗಾಮಿ ಕುಲಪತಿಯಾಗಿ ರಾಜ್ಯ ಸರಕಾರ ನೇಮಿಸಿತು. ಹಂಗಾಮಿ ಕುಲಪತಿಯಾಗಿದ್ದ ಗುತ್ತಿ ಜಂಬುನಾಥ ಅವರ ಆರು ತಿಂಗಳ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ಆ.30 ರಂದು ಶಿಕ್ಷಣ ನಿರ್ದೇಶಕ ಡಾ.ಎಸ್.ಕೆ.ಮೇಟಿ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಲಾಯಿತು. ಇವರ ಅವಧಿ ಮುಂದಿನ ಆರು ತಿಂಗಳು ಇರಲಿದೆ.

ಅಂಕಿತವೊಂದೇ ಬಾಕಿ: ರಾಜ್ಯ ಸರಕಾರವು ರಾಯಚೂರು ಕೃಷಿ ವಿವಿ ಕುಲಪತಿ ಹುದ್ದೆಗೆ ಸೂಕ್ತ ವ್ಯಕ್ತಿಯ ನೇಮಕಕ್ಕೆ ಮುಂದಾಗಿದೆ. ಇದರಲ್ಲಿ ಜಾತಿ, ರಾಜಕೀಯ ಪ್ರಭಾವವೂ ನುಸುಳಿದೆ ಎನ್ನಲಾಗುತ್ತಿದೆ. ಕುಲಪತಿ ನೇಮಕಾತಿಗೆ ಸಂಬಂಧಿಸಿ ಮೂವರು ಅರ್ಹರ ಹೆಸರಿರುವ ಕಡತ, ಸದ್ಯ ರಾಜಭವನ ಸೇರಿದೆ. ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆಯೇ ಹೊಸ ಕುಲಪತಿಯ ಹೆಸರು ಪ್ರಕಟಿಸಿ, ಸರಕಾರ ಆದೇಶ ಹೊರಡಿಸಲಿದೆ. ಕಳೆದ ಏಳು ತಿಂಗಳಿಂದ ಹಿಡಿದ ಗ್ರಹಣದಿಂದ ರಾಯಚೂರು ಕೃಷಿ ವಿವಿ ಮುಕ್ತವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ