ಆ್ಯಪ್ನಗರ

ಗ್ರಾಹಕರಿಗೆ ಕಣ್ಣೀರು ತಂದ ಈರುಳ್ಳಿ

ಸಗಟು ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆಯಾಗಿರುವ ಈರುಳ್ಳಿ ದರ, ಗ್ರಾಹಕರ ಕಣ್ಣೀರಿಗೆ ಕಾರಣವಾಗಿದೆ.

Vijaya Karnataka 27 Aug 2019, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web the onion that brought tears to customers
ಗ್ರಾಹಕರಿಗೆ ಕಣ್ಣೀರು ತಂದ ಈರುಳ್ಳಿ


ಸಗಟು ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆಯಾಗಿರುವ ಈರುಳ್ಳಿ ದರ, ಗ್ರಾಹಕರ ಕಣ್ಣೀರಿಗೆ ಕಾರಣವಾಗಿದೆ.

ಕಳೆದ ಎಂಟು ತಿಂಗಳಿನಲ್ಲಿಯೇ ಈರುಳ್ಳಿ, ಗರಿಷ್ಠ ದರಕ್ಕೆ ತಲುಪಿದ್ದು, ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ. ಸ್ಥಳೀಯ ಹಾಗೂ ಹೊರರಾಜ್ಯಗಳಿಂದಲೂ ಈರುಳ್ಳಿ ಆವಕದಲ್ಲಿ ಇಳಿಕೆಯಾಗಿರುವುದು ಬೆಲೆ ಏರಿಕೆಗೆ ಮೂಲ ಕಾರಣವಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲೂ ತಿಂಗಳಾರಂಭದಿಂದ ಈರುಳ್ಳಿ ದರ ನಿಧಾನವಾಗಿ ಏರಿಕೆಯಾಗುತ್ತಿದ್ದು, ಸದ್ಯ ದರ ಗರಿಷ್ಠ ಮಟ್ಟ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿಯೇ ದರವು ಕೈಗೆಟುಕದ ಪರಿಸ್ಥಿತಿಗೆ ತಲುಪಿರುವುದರಿಂದ ಚಿಲ್ಲರೆ ಮಾರುಕಟ್ಟೆಯ ಮೇಲೂ ಅದರ ಪ್ರಭಾವ ಉಂಟಾಗಿದೆ.

ಆವಕ ಕುಸಿತ:
ಜಿಲ್ಲೆಯ ಮಾರುಕಟ್ಟೆಗೆ ಸ್ಥಳೀಯ ಹಾಗೂ ಹೊರರಾಜ್ಯಗಳಿಂದಲೂ ಈರುಳ್ಳಿ ಆವಕದ ಪ್ರಮಾಣ ಗಣನೀಯ ಕುಗ್ಗಿದೆ. ಆವಕ ಕುಸಿತದಿಂದ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಈರುಳ್ಳಿ ಬೆಲೆ ಏರುಮುಖವಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ತೀರದಲ್ಲಿ ಅಲ್ಲಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ನದಿ ತೀರದಲ್ಲಿ ಕಳೆದ ಬೇಸಿಗೆ ವೇಳೆ ನೀರಿನ ಅಭಾವದಿಂದ ರೈತರು ಈರುಳ್ಳಿ ಬೆಳೆಯಲು ಮುಂದಾಗಲಿಲ್ಲ. ನದಿ ಪ್ರವಾಹ ಇಳಿಕೆಯಾದ ನಂತರ ಇದೀಗ ತುಂಗಭದ್ರಾ ನದಿ ತೀರದ ಗದ್ದೆಗಳಲ್ಲಿ ರೈತರು ಈರುಳ್ಳಿ ಬೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಸ್ಥಳೀಯ ಈರುಳ್ಳಿ ಉತ್ಪನ್ನ, ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿಲ್ಲ ಎಂಬ ಮಾತು ಕೇಳಿಬಂದಿದೆ.

‘ಮಹಾ’ ಹೊಡೆತ:ಅದೇ ರೀತಿ ನೆರೆಯ ಮಹಾರಾಷ್ಟ್ರದಿಂದ ಜಿಲ್ಲೆಗೆ ಆವಕವಾಗುತ್ತಿದ್ದ ಈರುಳ್ಳಿಯ ಪ್ರಮಾಣ ಅಲ್ಲಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಳಿಕೆಯಾಗಿರುವುದೂ ಪ್ರಭಾವ ಬೀರಿದೆ. ಕಳೆದೊಂದು ವಾರದಲ್ಲಿ ರಾಯಚೂರಿನ ಎಪಿಎಂಸಿ ಮಾರುಕಟ್ಟೆಗೆ 365ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆ ಉಂಟಾಗಿದ್ದರಿಂದ ಬೆಲೆ ಗಗನಕ್ಕೇರಿದೆ. ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ಪ್ರತಿ ಕ್ವಿಂಟಾಲ್‌ಗೆ 2300 ರೂ.ಗಳಿಂದ 3ಸಾವಿರ ರೂ.ವರೆಗೆ ಬಂದು ಸೇರಿದ್ದು, ಖರೀದಿದಾರರ ಜೇಬಿಗೆ ಕತ್ತರಿ ಬಿದ್ದಿದೆ.

ಕಳೆದ ಜನವರಿಯಲ್ಲಿ ಪ್ರತಿ ಕ್ವಿಂಟಾಲ್ ಈರುಳ್ಳಿ ಸರಾಸರಿ ದರವು 583 ರೂ. ಆಗಿತ್ತು. ಫೆಬ್ರವರಿಯಲ್ಲಿ 495 ರೂ., ಮಾರ್ಚ್‌ನಲ್ಲಿ 550 ರೂ., ಏಪ್ರಿಲ್- 660, ಮೇ-792 ರೂ., ಜೂನ್-1315 ರೂ., ಜುಲೈ-1340 ರೂ., ಆಗಿತ್ತು. ಕಳೆದ ಜೂನ್‌ನಿಂದಲೇ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ನೀರಾವರಿ ಪ್ರದೇಶದಲ್ಲಿಯೂ ಈರುಳ್ಳಿ ಬೆಳೆ ಲಭ್ಯವಾಗದಿರುವುದು ಕೊರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಜೂನ್‌ನಿಂದಲೇ ಏರಿಕೆಕಂಡಿದ್ದ ಈರುಳ್ಳಿ ಬೆಲೆಯು ಆಗಸ್ಟ್ ಹೊತ್ತಿಗೆ ಭಾರಿ ಎತ್ತರ ತಲುಪಿದೆ. ಜೂನ್‌ನಲ್ಲಿ ಪ್ರತಿ ಕ್ವಿಂಟಾಲ್‌ಗೆ 1300 ರೂ. ಸರಾಸರಿ ದರ ಕಂಡಿದ್ದ ಈರುಳ್ಳಿಯು ಆಗಸ್ಟ್ ಅಂತ್ಯದಲ್ಲಿ ಪ್ರತಿ ಕ್ವಿಂಟಾಲ್‌ಗೆ 2300 ರೂ.ಗಳಿಂದ 3 ಸಾವಿರ ರೂ. ತಲುಪಿರುವುದು ಗ್ರಾಹಕರ ಕಣ್ಣೀರು ಸುರಿಸುವಂತೆ ಮಾಡಿದೆ.

...........
ಈರುಳ್ಳಿ ಆವಕದಲ್ಲಿ ತೀವ್ರ ಕುಸಿತವಾಗಿದೆ. ಸ್ಥಳೀಯವಾಗಿ ಈರುಳ್ಳಿ ಬೆಳೆ ಬೆಳೆಯದಿರುವುದು ಹಾಗೂ ನೆರೆಯ ರಾಜ್ಯಗಳಿಂದಲೂ ಮಾರುಕಟ್ಟೆಗೆ ಉತ್ಪನ್ನ ಬಾರದಿರುವುದರಿಂದ ಬೆಲೆ ಏರಿಕೆಯಾಗಿದೆ.

-ಬಂಡೇಶ್ ವಲ್ಕಂದಿನ್ನಿ, ವರ್ತಕರು, ಎಪಿಎಂಸಿ ಮಾರುಕಟ್ಟೆ, ರಾಯಚೂರು

...........
ಮಳೆಯ ಕೊರತೆಯಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. ಈರುಳ್ಳಿ ನಾಟಿ ಮಾಡಿದ್ದರೂ ನೀರಿಲ್ಲದ ಸ್ಥಿತಿಯಿದೆ. ಹೀಗಾಗಿ ಮಾರುಕಟ್ಟೆಗೆ ಸ್ಥಳೀಯವಾಗಿ ಈರುಳ್ಳಿ ಆವಕವಾಗುತ್ತಿರುವ ಪ್ರಮಾಣ ತೀವ್ರ ಕುಸಿದಿದೆ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗಿದೆ.

-ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾಧ್ಯಕ್ಷರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ