ರಾಜಶೇಖರ ಎಚ್., ಮಾನ್ವಿ
ತುಂಗಭದ್ರಾ ನದಿಪಾತ್ರ ಹಾಗೂ ಎಡದಂಡೆ ನಾಲಾ ವ್ಯಾಪ್ತಿಯ ರೈತರು, ತಮ್ಮ ಗದ್ದೆಗಳ ಕಸ, ಕಡ್ಡಿ ತೆಗೆಯುವ ಜತೆಗೆ ನಾಟಿಗೆ ಹದಗೊಳಿಸುತ್ತಿದ್ದಾರೆ. ಕಾಲುವೆ ಮೇಲ್ಭಾಗದಲ್ಲಿ ಭತ್ತದ ನಾಟಿಗೆ ಉತ್ಸಾಹ ಕಂಡುಬಂದರೆ, ಕೊನೆಭಾಗದಲ್ಲಿ ಈಗಲೂ ನೀರಿಗಾಗಿ ಕನವರಿಕೆ ಮುಂದುವರಿದಿದೆ.
ಬೆಳಗಾಗುತ್ತಲೇ ಜಮೀನುಗಳ ಮಾಲೀಕರು ಕೂಲಿಯಾಳುಗಳನ್ನು ಟ್ರ್ಯಾಕ್ಟರ್, ಟಂಟಂಗಳಲ್ಲಿ ನಾಟಿಗೆ ಕರೆದೊಯ್ಯುವ ದೃಶ್ಯಗಳು ನೀರಾವರಿ ಪ್ರದೇಶದಲ್ಲಿ ಸಾಮಾನ್ಯವಾಗಿವೆ. ಗದ್ದೆಗಳಿಗೆ ಇಳಿಯುತ್ತಿದ್ದಂತೆ ಕೃಷಿ ಕೂಲಿಕಾರ್ಮಿಕರ ಕೈಚಳಕ ಬೆರಗುಹುಟ್ಟಿಸುತ್ತಿದೆ. ಸಸಿ ಕಿತ್ತು ಗುಡ್ಡೆ ಹಾಕುವುದು, ಸಸಿಗಳನ್ನು ಗದ್ದೆಗಳಿಗೆ ಸಾಗಣೆ ಮಾಡುವುದು, ನಾಟಿಗೆ ಅನುಕೂಲವಾಗುವಂತೆ ಹಿಡಿಯಗಲದ ಕಟ್ಟು ಕಟ್ಟುವುದು, ಸರಳ ರೇಖೆ ಎಳೆದಂತೆ ನೀರಿನಿಂದ ಆವೃತವಾದ ಗದ್ದೆಗಳಲ್ಲಿ ಸಸಿ ಹಚ್ಚುವ ಚಟುವಟಿಕೆಗಳು ಕಣ್ಮನಸೆಳೆಯುತ್ತಿವೆ.
ಈ ಬಾರಿ ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಮಳೆಯನ್ನೇ ಕಾಯುತ್ತಿದ್ದ ರೈತರಿಗೆ ತುಂಗಭದ್ರೆ ಕೈಹಿಡಿದಿದ್ದಾಳೆ. ಕಳೆದ ನಾಲ್ಕು ವರ್ಷ ನಿರಾಸೆ ಮೂಡಿಸಿದ್ದ ತುಂಗಭದ್ರಾ ಜಲಾಶಯ, ಅವಧಿ ಪೂರ್ವದಲ್ಲೇ ತುಂಬಿ ಭರವಸೆ ಮೂಡಿಸಿದೆ. ಎಡದಂಡೆ ನಾಲೆ ಹಾಗೂ ನದಿ ಪಾತ್ರದ ರೈತರ ಖುಷಿ ಇಮ್ಮುಡಿಗೊಂಡಿದೆ.
ನದಿ ವ್ಯಾಪ್ತಿಯ ಯಡಿವಾಳ, ಚೀಕಲಪರ್ವಿ, ರಾಜಲಬಂಡಾ, ಮದ್ಲಾಪುರ, ಕಾತರಕಿ, ದದ್ದಲಪನ್ನೂರು, ರಾಜೊಳ್ಳಿ ಭಾಗದಲ್ಲಿ ಭತ್ತದ ನಾಟಿಯ ಸಂಭ್ರಮ ಮನೆಮಾಡಿದೆ. ಕೃಷಿ ಕೂಲಿಕಾರ್ಮಿಕರು ತಂಡೋಪತಂಡವಾಗಿ ಗದ್ದೆಗಳಿಗೆ ತೆರಳುತ್ತಿರುವ, ನಾಟಿ ಮಾಡುತ್ತಿರುವ ದೃಶ್ಯಗಳು ಪ್ರಕೃತಿಯ ಸೊಬಗು ಹೆಚ್ಚಿಸಿವೆ.
ಇಷ್ಟು ಕೃಷಿ ಪ್ರದೇಶ: ತಾಲೂಕಿನಲ್ಲಿ ಒಟ್ಟು 37,191ಹೆಕ್ಟೇರ್ ನೀರಾವರಿ ಹಾಗೂ 31,275 ಹೆಕ್ಟೇರ್ ಖುಷ್ಕಿ ಪ್ರದೇಶವಿದೆ. 3150 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 2395 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 5133 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 105 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 705 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 5840 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಕೂರಿಗೆ ಭತ್ತ ಬಿತ್ತನೆ ಪೂರ್ಣವಾಗಿದೆ. ಈ ಬೆಳೆಗೆ ನೀರುಣಿಸಲು ರೈತರು ಅಣಿಯಾಗಿದ್ದಾರೆ. ತೇವಾಂಶ ಕೊರತೆಯಿಂದ ಬಾಡುವ ಸ್ಥಿತಿಯಲ್ಲಿದ್ದ ಹತ್ತಿ, ಸೂರ್ಯಕಾಂತಿ, ಸಜ್ಜೆ, ತೊಗರಿ ಬೆಳೆಗಳಿಗೆ ಕಾಲುವೆ ನೀರು ಮರುಜೀವ ತಂದಿದೆ.
ಉತ್ತಮ ಇಳುವರಿ ನಿರೀಕ್ಷೆ: ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಬಿತ್ತನೆ ಮಾಡಿದ್ದ ಬಹುತೇಕ ಬೆಳೆಗಳು ಕೈಕೊಟ್ಟು, ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಒಂದು ಎಕರೆ ಹತ್ತಿಗೆ 30 ರಿಂದ 35 ಸಾವಿರ ರೂ. ಖುರ್ಚು ಮಾಡಲಾಗಿತ್ತು. ಆದರೆ, ಇಳುವರಿ ಮಾತ್ರ 40 ಸಾವಿರ ರೂ. ಕೈಸೇರಿತು. ಈ ಬಾರಿ 15 ದಿನ ಮುಂಚಿತವಾಗಿ ಕಾಲುವೆಗೆ ನೀರು ಬಿಟ್ಟಿದ್ದರಿಂದ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಮೂಡಿದೆ. ಸಮರ್ಪಕ ವಿದ್ಯುತ್ ಹಾಗೂ ಕಾಲುವೆ ನೀರು ಕಳ್ಳತನ ತಡೆದರೆ, ಮೊದಲ ಬೆಳೆ ಬೆಳೆಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬುದು ತಾಲೂಕಿನ ರೈತರ ಅಂತರಾಳದ ಮಾತಾಗಿದೆ.
...............
ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ರೈತರಿಗೆ ಅನುಕೂಲವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 15 ದಿನ ಮುಂಚಿತವಾಗಿ ಭತ್ತ ನಾಟಿ ನಿರೀಕ್ಷಿಸಲಾಗಿದೆ. ಮೊದಲ ಬೆಳಗೆ ಸಮರ್ಪಕ ನೀರು ಸಿಗುವುದರಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಭತ್ತ ಸಸಿ ಹಚ್ಚುವ ಕಾರ್ಯ ಕೆಲವು ದಿನಗಳಿಂದ ಆರಂಭಗೊಂಡಿದೆ. ಈಗಾಗಲೇ ನಾಟಿ ಮಾಡಿರುವ ಕೂರಿಗೆ ಭತ್ತದ ಬೆಳೆಗೆ ನೀರುಣಿಸಲು ರೈತರು ಕಾಯುತ್ತಿದ್ದಾರೆ.
-ನಜೀರ್ ಅಹ್ಮದ್, ಸಹಾಯಕ ಕೃಷಿ ನಿರ್ದೇಶಕ, ಮಾನ್ವಿ
.................
ತುಂಗಭದ್ರಾ ಜಲಾಶಯದಿಂದ ನಾಲೆಗಗಳಿಗೆ ನೀರು ಹರಿಸಲಾಗಿದೆ. ಕಾಲುವೆಗಳ ಮೂಲಕ ಕೊನೆ ಭಾಗದ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
-ಕೆ.ವೈ.ಬಸವರಾಜ ನಾಯಕ, ತಾಲೂಕಾಧ್ಯಕ್ಷ , ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಮಾನ್ವಿ
...............
ನದಿ ತುಂಬ್ಯಾದ. ನದಿ ನೀರು ನೋಡಿ ನಾಟಿ ಶುರುಮಾಡೀವಿ. ಕರೆಂಟ್ ಸರಿಗಿದ್ರ ಬೆಳೆಗೆ ನೀರು ಹರಿಸಲು ಅನುಕೂಲ ಆಗ್ತಾದ. ಇಲ್ಲಂದ್ರ ಮತ್ತೆ ಲಾಸ್ ಆಗ್ಬೇಕು.
-ಜಂಬಯ್ಯ, ರೈತ, ಕಾತರಕಿ
............
ಮೊದಲೆಲ್ಲ ಎಕರೆ ಭತ್ತ ನಾಟಿಗೆ ಪ್ರತಿಯೊಬ್ಬರಿಗೆ ಮೂನ್ನೂರು ರೂಪಾಯಿ ಕೊಡ್ತಿದ್ರು. ಇವಾಗ ಗುತ್ತಿಗೆ ಆಧಾರದ ಮೇಲೆ ಕೆಲಸ ಹಿಡಿತಾರ. ಎಕರೆಗೆ ಎರಡು ಸಾವಿರ ರೂಪಾಯಿ ಕೊಡ್ತಾರ. ಅದರಲ್ಲಿ ಪ್ರತಿಯೊಬ್ಬರಿಗೂ 150 ರೂಪಾಯಿ ಬಂದರೆ ಹೆಚ್ಚು.
-ಹನುಮಂತ, ಕೃಷಿ ಕೂಲಿಕಾರ, ನೀರಮಾನ್ವಿ
ತುಂಗಭದ್ರಾ ನದಿಪಾತ್ರ ಹಾಗೂ ಎಡದಂಡೆ ನಾಲಾ ವ್ಯಾಪ್ತಿಯ ರೈತರು, ತಮ್ಮ ಗದ್ದೆಗಳ ಕಸ, ಕಡ್ಡಿ ತೆಗೆಯುವ ಜತೆಗೆ ನಾಟಿಗೆ ಹದಗೊಳಿಸುತ್ತಿದ್ದಾರೆ. ಕಾಲುವೆ ಮೇಲ್ಭಾಗದಲ್ಲಿ ಭತ್ತದ ನಾಟಿಗೆ ಉತ್ಸಾಹ ಕಂಡುಬಂದರೆ, ಕೊನೆಭಾಗದಲ್ಲಿ ಈಗಲೂ ನೀರಿಗಾಗಿ ಕನವರಿಕೆ ಮುಂದುವರಿದಿದೆ.
ಬೆಳಗಾಗುತ್ತಲೇ ಜಮೀನುಗಳ ಮಾಲೀಕರು ಕೂಲಿಯಾಳುಗಳನ್ನು ಟ್ರ್ಯಾಕ್ಟರ್, ಟಂಟಂಗಳಲ್ಲಿ ನಾಟಿಗೆ ಕರೆದೊಯ್ಯುವ ದೃಶ್ಯಗಳು ನೀರಾವರಿ ಪ್ರದೇಶದಲ್ಲಿ ಸಾಮಾನ್ಯವಾಗಿವೆ. ಗದ್ದೆಗಳಿಗೆ ಇಳಿಯುತ್ತಿದ್ದಂತೆ ಕೃಷಿ ಕೂಲಿಕಾರ್ಮಿಕರ ಕೈಚಳಕ ಬೆರಗುಹುಟ್ಟಿಸುತ್ತಿದೆ. ಸಸಿ ಕಿತ್ತು ಗುಡ್ಡೆ ಹಾಕುವುದು, ಸಸಿಗಳನ್ನು ಗದ್ದೆಗಳಿಗೆ ಸಾಗಣೆ ಮಾಡುವುದು, ನಾಟಿಗೆ ಅನುಕೂಲವಾಗುವಂತೆ ಹಿಡಿಯಗಲದ ಕಟ್ಟು ಕಟ್ಟುವುದು, ಸರಳ ರೇಖೆ ಎಳೆದಂತೆ ನೀರಿನಿಂದ ಆವೃತವಾದ ಗದ್ದೆಗಳಲ್ಲಿ ಸಸಿ ಹಚ್ಚುವ ಚಟುವಟಿಕೆಗಳು ಕಣ್ಮನಸೆಳೆಯುತ್ತಿವೆ.
ಈ ಬಾರಿ ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಮಳೆಯನ್ನೇ ಕಾಯುತ್ತಿದ್ದ ರೈತರಿಗೆ ತುಂಗಭದ್ರೆ ಕೈಹಿಡಿದಿದ್ದಾಳೆ. ಕಳೆದ ನಾಲ್ಕು ವರ್ಷ ನಿರಾಸೆ ಮೂಡಿಸಿದ್ದ ತುಂಗಭದ್ರಾ ಜಲಾಶಯ, ಅವಧಿ ಪೂರ್ವದಲ್ಲೇ ತುಂಬಿ ಭರವಸೆ ಮೂಡಿಸಿದೆ. ಎಡದಂಡೆ ನಾಲೆ ಹಾಗೂ ನದಿ ಪಾತ್ರದ ರೈತರ ಖುಷಿ ಇಮ್ಮುಡಿಗೊಂಡಿದೆ.
ನದಿ ವ್ಯಾಪ್ತಿಯ ಯಡಿವಾಳ, ಚೀಕಲಪರ್ವಿ, ರಾಜಲಬಂಡಾ, ಮದ್ಲಾಪುರ, ಕಾತರಕಿ, ದದ್ದಲಪನ್ನೂರು, ರಾಜೊಳ್ಳಿ ಭಾಗದಲ್ಲಿ ಭತ್ತದ ನಾಟಿಯ ಸಂಭ್ರಮ ಮನೆಮಾಡಿದೆ. ಕೃಷಿ ಕೂಲಿಕಾರ್ಮಿಕರು ತಂಡೋಪತಂಡವಾಗಿ ಗದ್ದೆಗಳಿಗೆ ತೆರಳುತ್ತಿರುವ, ನಾಟಿ ಮಾಡುತ್ತಿರುವ ದೃಶ್ಯಗಳು ಪ್ರಕೃತಿಯ ಸೊಬಗು ಹೆಚ್ಚಿಸಿವೆ.
ಇಷ್ಟು ಕೃಷಿ ಪ್ರದೇಶ: ತಾಲೂಕಿನಲ್ಲಿ ಒಟ್ಟು 37,191ಹೆಕ್ಟೇರ್ ನೀರಾವರಿ ಹಾಗೂ 31,275 ಹೆಕ್ಟೇರ್ ಖುಷ್ಕಿ ಪ್ರದೇಶವಿದೆ. 3150 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 2395 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 5133 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 105 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 705 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 5840 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಕೂರಿಗೆ ಭತ್ತ ಬಿತ್ತನೆ ಪೂರ್ಣವಾಗಿದೆ. ಈ ಬೆಳೆಗೆ ನೀರುಣಿಸಲು ರೈತರು ಅಣಿಯಾಗಿದ್ದಾರೆ. ತೇವಾಂಶ ಕೊರತೆಯಿಂದ ಬಾಡುವ ಸ್ಥಿತಿಯಲ್ಲಿದ್ದ ಹತ್ತಿ, ಸೂರ್ಯಕಾಂತಿ, ಸಜ್ಜೆ, ತೊಗರಿ ಬೆಳೆಗಳಿಗೆ ಕಾಲುವೆ ನೀರು ಮರುಜೀವ ತಂದಿದೆ.
ಉತ್ತಮ ಇಳುವರಿ ನಿರೀಕ್ಷೆ: ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಬಿತ್ತನೆ ಮಾಡಿದ್ದ ಬಹುತೇಕ ಬೆಳೆಗಳು ಕೈಕೊಟ್ಟು, ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಒಂದು ಎಕರೆ ಹತ್ತಿಗೆ 30 ರಿಂದ 35 ಸಾವಿರ ರೂ. ಖುರ್ಚು ಮಾಡಲಾಗಿತ್ತು. ಆದರೆ, ಇಳುವರಿ ಮಾತ್ರ 40 ಸಾವಿರ ರೂ. ಕೈಸೇರಿತು. ಈ ಬಾರಿ 15 ದಿನ ಮುಂಚಿತವಾಗಿ ಕಾಲುವೆಗೆ ನೀರು ಬಿಟ್ಟಿದ್ದರಿಂದ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಮೂಡಿದೆ. ಸಮರ್ಪಕ ವಿದ್ಯುತ್ ಹಾಗೂ ಕಾಲುವೆ ನೀರು ಕಳ್ಳತನ ತಡೆದರೆ, ಮೊದಲ ಬೆಳೆ ಬೆಳೆಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬುದು ತಾಲೂಕಿನ ರೈತರ ಅಂತರಾಳದ ಮಾತಾಗಿದೆ.
...............
ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ರೈತರಿಗೆ ಅನುಕೂಲವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 15 ದಿನ ಮುಂಚಿತವಾಗಿ ಭತ್ತ ನಾಟಿ ನಿರೀಕ್ಷಿಸಲಾಗಿದೆ. ಮೊದಲ ಬೆಳಗೆ ಸಮರ್ಪಕ ನೀರು ಸಿಗುವುದರಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಭತ್ತ ಸಸಿ ಹಚ್ಚುವ ಕಾರ್ಯ ಕೆಲವು ದಿನಗಳಿಂದ ಆರಂಭಗೊಂಡಿದೆ. ಈಗಾಗಲೇ ನಾಟಿ ಮಾಡಿರುವ ಕೂರಿಗೆ ಭತ್ತದ ಬೆಳೆಗೆ ನೀರುಣಿಸಲು ರೈತರು ಕಾಯುತ್ತಿದ್ದಾರೆ.
-ನಜೀರ್ ಅಹ್ಮದ್, ಸಹಾಯಕ ಕೃಷಿ ನಿರ್ದೇಶಕ, ಮಾನ್ವಿ
.................
ತುಂಗಭದ್ರಾ ಜಲಾಶಯದಿಂದ ನಾಲೆಗಗಳಿಗೆ ನೀರು ಹರಿಸಲಾಗಿದೆ. ಕಾಲುವೆಗಳ ಮೂಲಕ ಕೊನೆ ಭಾಗದ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
-ಕೆ.ವೈ.ಬಸವರಾಜ ನಾಯಕ, ತಾಲೂಕಾಧ್ಯಕ್ಷ , ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಮಾನ್ವಿ
...............
ನದಿ ತುಂಬ್ಯಾದ. ನದಿ ನೀರು ನೋಡಿ ನಾಟಿ ಶುರುಮಾಡೀವಿ. ಕರೆಂಟ್ ಸರಿಗಿದ್ರ ಬೆಳೆಗೆ ನೀರು ಹರಿಸಲು ಅನುಕೂಲ ಆಗ್ತಾದ. ಇಲ್ಲಂದ್ರ ಮತ್ತೆ ಲಾಸ್ ಆಗ್ಬೇಕು.
-ಜಂಬಯ್ಯ, ರೈತ, ಕಾತರಕಿ
............
ಮೊದಲೆಲ್ಲ ಎಕರೆ ಭತ್ತ ನಾಟಿಗೆ ಪ್ರತಿಯೊಬ್ಬರಿಗೆ ಮೂನ್ನೂರು ರೂಪಾಯಿ ಕೊಡ್ತಿದ್ರು. ಇವಾಗ ಗುತ್ತಿಗೆ ಆಧಾರದ ಮೇಲೆ ಕೆಲಸ ಹಿಡಿತಾರ. ಎಕರೆಗೆ ಎರಡು ಸಾವಿರ ರೂಪಾಯಿ ಕೊಡ್ತಾರ. ಅದರಲ್ಲಿ ಪ್ರತಿಯೊಬ್ಬರಿಗೂ 150 ರೂಪಾಯಿ ಬಂದರೆ ಹೆಚ್ಚು.
-ಹನುಮಂತ, ಕೃಷಿ ಕೂಲಿಕಾರ, ನೀರಮಾನ್ವಿ