ಆ್ಯಪ್ನಗರ

ಯಾರ ಮುಡಿಗೆ ಎಡೆ‘ದೊರೆ’ ನಾಡು?

ಲೋಕಸಭೆ ಚುನಾವಣೆಯ ಕದನ ಕುತೂಹಲಕ್ಕೆ ಗುರುವಾರ ತೆರೆಬೀಳಲಿದೆ. ಎಡೆದೊರೆ ನಾಡಿನ ಜನರ ಚಿತ್ತ, ಮತಗಳ ಎಣಿಕೆ ನಡೆಯಲಿರುವ ನಗರದ ಎಲ್‌ವಿಡಿ-ಎಸ್‌ಆರ್‌ಪಿಎಸ್ ಕಾಲೇಜಿನತ್ತ ಹರಿದಿದೆ.

Vijaya Karnataka 23 May 2019, 5:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web RAC-RCH22JD01


ಲೋಕಸಭೆ ಚುನಾವಣೆಯ ಕದನ ಕುತೂಹಲಕ್ಕೆ ಗುರುವಾರ ತೆರೆಬೀಳಲಿದೆ. ಎಡೆದೊರೆ ನಾಡಿನ ಜನರ ಚಿತ್ತ, ಮತಗಳ ಎಣಿಕೆ ನಡೆಯಲಿರುವ ನಗರದ ಎಲ್‌ವಿಡಿ-ಎಸ್‌ಆರ್‌ಪಿಎಸ್ ಕಾಲೇಜಿನತ್ತ ಹರಿದಿದೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡ, ರಾಯಚೂರು ಲೋಕಸಭೆ ಕ್ಷೇತ್ರದ ಫಲಿತಾಂಶ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೂ ಹೆಚ್ಚು ಕಾಯಬೇಕಿಲ್ಲ. ಕಾಂಗ್ರೆಸ್, ಬಿಜೆಪಿ ಸೇರಿ ಒಟ್ಟು ಐವರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ.

ಕಾಂಗ್ರೆಸ್ ಭದ್ರಕೋಟೆಯಲ್ಲಿ ಈ ಸಲ ಪ್ರಬಲ ಪ್ರತಿಪಕ್ಷ ಎಂದೇ ಚುನಾವಣೆಯಲ್ಲಿ ಕರೆಯಿಸಿಕೊಂಡಿದ್ದ ಬಿಜೆಪಿ ತನ್ನ ಬಾವುಟ ಹಾರಿಸಲಿದೆಯೇ? ಕಾಂಗ್ರೆಸ್ ತನ್ನ ಅಧಿಪತ್ಯ ಮುಂದುವರಿಸಲಿದೆಯೇ? ಪ್ರಧಾನಿ ಮೋದಿಯವರ ಅಲೆ ಕೆಲಸ ಮಾಡಿದೆಯೇ? ಹೀಗೆ ಹಲವು ಪ್ರಶ್ನೆಗಳಿಗೂ ಉತ್ತರ ಸಿಗಲಿದ್ದು, ತಿಂಗಳ ಕಾಯುವಿಕೆ ಕೊನೆಯಾಗಲಿದೆ.

ರಾಯಚೂರಿನ ಐದು ಮತ್ತು ಯಾದಗಿರಿ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಶೇ.57.91ರಷ್ಟು ಮತದಾನ ದಾಖಲಾಗಿದೆ. ಒಟ್ಟು 19,27,758 ಮತದಾರರಲ್ಲಿ 11,15,886 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 5,70,963 ಪುರುಷರು ಮತ್ತು 5,44,914 ಮಹಿಳಾ ಮತದಾರರು ಹಾಗೂ ಇತರ 9 ಜನರು ಬರೆದ, ಐವರು ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ. ಮತದಾನದ ಮರುದಿನವೇ ನಗರದ ಮತ ಎಣಿಕೆ ಕೇಂದ್ರ ಎಲ್‌ವಿಡಿ ಕಾಲೇಜು ಮತ್ತು ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಮತಯಂತ್ರಗಳನ್ನು ಭದ್ರವಾಗಿರಿಸಲಾಗಿದೆ.

ಇವರೇ ಅಭ್ಯರ್ಥಿಗಳು:ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಗೆ ಕೇವಲ ಐವರು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಹಾಲಿ ಸಂಸದ ಬಿ.ವಿ.ನಾಯಕ, ಬಿಜೆಪಿಯಿಂದ ರಾಜಾ ಅಮರೇಶ್ವರ ನಾಯಕ, ಬಿಎಸ್ಪಿ ಯಿಂದ ವೆಂಕನಗೌಡ, ಉತ್ತಮ ಪ್ರಜಾಕೀಯ ಪಕ್ಷದಿಂದ ನಿರಂಜನ ನಾಯಕ, ಎಸ್‌ಯುಸಿಐ(ಸಿ)ಯಿಂದ ಸೋಮಶೇಖರ್ ಯಾದಗಿರಿ ಅವರು ಕಣದಲ್ಲಿದ್ದಾರೆ.

ಐವರು ಕಣದಲ್ಲಿದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಮಧ್ಯೆಯೇ ಅಂತಿಮವಾಗಿ ಪ್ರಬಲ ಪೈಪೋಟಿಯಿದೆ. ಬಿರುಬಿಸಿಲ ತಾಪ ಮತ್ತು ಸಾವಿರಾರು ಕೂಲಿಕಾರರ ಗುಳೆಯಿಂದ ಮತದಾನ ಪ್ರಮಾಣ ನಿರೀಕ್ಷೆಯಂತೆ ನಡೆಯದಿರುವುದು ರಾಜಕೀಯ ಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ಈ ಎರಡೂ ಅಂಶಗಳನ್ನು ಮುಂದಿರಿಸಿಕೊಂಡೇ ಎಲ್ಲ ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿವೆ.

ಮತ ಎಣಿಕೆ ನಿಧಾನ:ನಗರದ ಎಲ್‌ವಿಡಿ ಕಾಲೇಜು ಮತ್ತು ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಮೇ 23ರಂದು ಬೆಳಗ್ಗೆ 8 ರಿಂದ ಮತಗಳ ಎಣಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಜಿಲ್ಲಾಡಳಿತವು ಭರದ ಸಿದ್ಧತೆ ಕೈಗೊಂಡಿದ್ದು, ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಗುತ್ತದೆ. ಆನಂತರ ಮತಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎಣಿಸಲಾಗುತ್ತದೆ.

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಈ ಸಲ ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಲಾಟರಿ ಮೂಲಕ ಆಯ್ದ ಐದು ಮತಗಟ್ಟೆಗಳ ವಿವಿ ಪ್ಯಾಟ್ ಯಂತ್ರಗಳಲ್ಲಿನ ಮತಗಳು ಮತ್ತು ಮತಯಂತ್ರದಲ್ಲಿದಾಖಲಾದ ಮತಗಳನ್ನು ತಾಳೆ ಮಾಡಬೇಕಿದೆ. ಹೀಗಾಗಿ ಅಂತಿಮ ಫಲಿತಾಂಶ ತಡವಾಗಿಯೇ ಪ್ರಕಟವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

............

ಮತದಾನಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಮತಗಳ ಎಣಿಕೆಗೆ ನಿಯೋಜಿಸಲಾದ ಸಿಬ್ಬಂದಿಗೆ ತರಬೇತಿ ಈಗಾಗಲೇ ನೀಡಲಾಗಿದೆ. ಮತಗಳ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಶಾಂತಿ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

-ಶರತ್ ಬಿ., ಡಿಸಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ