ಸಿಂಧನೂರು: ಶೋಷಿತ-ಶೋಷಕರ ನಡುವೆ ನಡೆದ ಕೋರೆಗಾಂವ್ ಯುದ್ಧವು ಇತಿಹಾಸದ ಪುಟ ಸೇರಿದ್ದು, ಶೋಷಣೆಯ ವಿರುದ್ಧದ ಗೆಲುವಾಗಿದೆ ಎಂದು ಬಹುಜನ ಚಳವಳಿಗಾರ್ತಿ ಅನುಸೂಯ ಸಿ.ವೈ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ 'ಭೀಮಾ ಕೋರೆಗಾಂವ್ 200ನೇ ವರ್ಷದ ವಿಜಯೋತ್ಸವ' ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೋಷಿತರು, ಶೋಷಕರ ವಿರುದ್ಧ ಅವರ ಶೋಷಣೆಯ ನಡವಳಿಕೆ ವಿರುದ್ಧ ಯುದ್ಧ ಘೋಷಿಸಿದ್ದರು. ಈ ಯುದ್ಧ ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಯುದ್ಧ ಮತ್ತು ಕೋರೆಗಾಂವ್ ದಿ ಗ್ರೇಟ್ ಫೈಟ್ ಎಂದು ಕರೆಯಲ್ಪಡುತ್ತಿದೆ ಎಂದು ವಿವರಿಸಿದರು.
ಜಾತಿ ನಿರ್ಮೂಲನಾ ಚಳವಳಿ ರಾಜ್ಯ ಘಟಕದ ಸಂಚಾಲಕ ಎಚ್.ಎನ್.ಬಡಿಗೇರ್ ಮಾತನಾಡಿ, ಅಂಬೇಡ್ಕರ್ ತಾವು ಬದುಕಿರುವವರೆಗೂ ಪ್ರತಿವರ್ಷ ಜನವರಿ 1 ರಂದು ಕೋರೆಗಾಂವ್ ಸ್ಮಾರಕಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಶೋಷಿತರ ಬದುಕಿನ ಆಶಾಕಿರಣವಾಗಿದ್ದ ಕೋರೆಗಾಂವ್ ಘಟನೆಯು ಅಂಬೇಡ್ಕರ್ ಅವರ ಹೋರಾಟದ ಬದುಕಿನ ಮೇಲೆ ಅಗಾಧ ಪ್ರಭಾವ ಬೀರಿತ್ತು ಎಂದರು.
ಬಹುಜನ ಸಮಾಜ ಪಾರ್ಟಿಯ ಮುಖಂಡ ಎಂ.ಕೆ.ಜಗ್ಗೇಶ ಮಾತನಾಡಿ, ದಲಿತ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ವ್ಯವಸ್ಥೆಯ ವಿರುದ್ಧ. ಚರಿತ್ರೆಯಲ್ಲಿ ಹೂತು ಹೋಗಿದ್ದ ಕೋರೆಗಾಂವ್ ಕದನದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಗೋನಾಳ ಪ್ರಾಸ್ತಾವಿಕ ಮಾತನಾಡಿದರು. ಲೇಖಕ ನರಸಿಂಹಪ್ಪ ಜನತಾಕಾಲೊನಿ, ಭಾರತೀಯ ಪ್ರಜಾಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಹೆಡಗಿನಾಳ, ಬಹುಜನ ಸಮಾಜ ಪಾರ್ಟಿ ಕಾರ್ಯದರ್ಶಿ ವೀರೇಶ, ದಲಿತ ಮುಖಂಡ ಎಚ್.ರೆಡ್ಡಿ ತುರವಿಹಾಳ ಇದ್ದರು. ದೇವರಾಜ, ನಾಗರಾಜ ತುರವಿಹಾಳ ನಿರ್ವಹಿಸಿದರು.