ಆ್ಯಪ್ನಗರ

ತನಿಖೆಯಲ್ಲಿ ಶೂನ್ಯ ಫಲ, ಆತಂಕ ಹೆಚ್ಚಳ

ಹೊಸ ವರ್ಷಾಚರಣೆಗೂ ಮುನ್ನ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ವರ್ಷ ತುಂಬಿದ್ದು, ತನಿಖೆಯಲ್ಲಿ ಈವರೆಗೂ ಯಾವುದೇ ಯಶಸ್ಸು ಕಾಣದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Vijaya Karnataka 30 Dec 2017, 7:29 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web zero results in an investigation an increase in anxiety
ತನಿಖೆಯಲ್ಲಿ ಶೂನ್ಯ ಫಲ, ಆತಂಕ ಹೆಚ್ಚಳ


ಹೊಸ ವರ್ಷಾಚರಣೆಗೂ ಮುನ್ನ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ವರ್ಷ ತುಂಬಿದ್ದು, ತನಿಖೆಯಲ್ಲಿ ಈವರೆಗೂ ಯಾವುದೇ ಯಶಸ್ಸು ಕಾಣದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ರಾಜ್ಯವ್ಯಾಪಿ ಸಂಚಲನ ಮೂಡಿಸಿದ್ದ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳ ಸುಳಿವೇ ಈವರೆಗೆ ಸಿಗದಿರುವುದು ಅಚ್ಚರಿಗೆ ಆಸ್ಪದ ನೀಡಿದೆ. ಸಂಭ್ರಮ ಆಚರಿಸಲು ಜನರೆಲ್ಲ ತಯಾರಿಯಲ್ಲಿರುವ ಹೊತ್ತಿನಲ್ಲಿ ಸ್ಫೋಟಕ ಸಾಗಣೆ ಪತ್ತೆಯಾಗಿದ್ದರಿಂದ ಆಗ ರಾಜ್ಯವ್ಯಾಪಿ ಪೊಲೀಸ್ ಇಲಾಖೆ ಹೈ ಅಲಾರ್ಟ್ ಘೋಷಿಸಿತ್ತು. ತನಿಖೆಗೂ ವಿಶೇಷ ಆಸಕ್ತಿ ಪ್ರದರ್ಶಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸ್ಫೋಟಕ ಗುರುತಿಸಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಿದ ತೃಪ್ತಿಯೂ ಪೊಲೀಸರಲ್ಲಿ ಕಾಣಿಸಿತ್ತು. ದುಷ್ಕರ್ಮಿಗಳನ್ನು ಸೆರೆಹಿಡಿಯುವ ವಿಷಯದಲ್ಲಿ ನಿರೀಕ್ಷಿತ ಪ್ರಗತಿ ದಾಖಲಾಗದಿರುವುದು, ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಏನಿದು ಪ್ರಕರಣ?: ಹೈದರಾಬಾದ್‌ನಿಂದ ರಾಯಚೂರಿಗೆ 2016, ಡಿ.30 ರ ಸಂಜೆ ಆಗಮಿಸುತ್ತಿದ್ದ ರಾಯಚೂರು ಘಟಕ-1 ರ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 2 ಸಾವಿರ ರೂ. ಮುಖಬೆಲೆಯ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರ ಮೊಬೈಲ್‌ಗೆ ಕರೆ ಬಂದಿತ್ತು. ಮಾಹಿತಿ ಆಧರಿಸಿ ಶಕ್ತಿನಗರದಲ್ಲಿ ಡಿಎಸ್ಪಿ ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ಬಸ್ ತಪಾಸಣೆಗೆ ಮುಂದಾಗಿತ್ತು. ತಪಾಸಣೆ ವೇಳೆ ವಾರಸುದಾರರಿಲ್ಲದ ಎರಡು ಬ್ಯಾಕ್ ಪ್ಯಾಕ್(ಲ್ಯಾಪ್‌ಟಾಪ್ ಕೊಂಡೊಯ್ಯಲು ಬಳಸುವ ಮಾದರಿಯ) ಬ್ಯಾಗ್‌ಗಳು ಬಸ್ ಕಡೆಯ ಸೀಟಿನ ಮೇಲ್ಭಾಗದ ಲಗೇಜ್ ಇರಿಸುವ ಸ್ಥಳದಲ್ಲಿ ಪತ್ತೆಯಾಗಿದ್ದವು. ತಲಾ ಸುಮಾರು 300 ರಿಂದ 400 ಗ್ರಾಂ.ತೂಕದಷ್ಟಿದ್ದ ಬ್ಯಾಗ್ ಪರೀಕ್ಷಿಸಿದಾಗ ಟೇಬಲ್ ಗಡಿಯಾರವನ್ನು ವಯರ್ ಮೂಲಕ ಪೇಸ್ಟ್ ಮಾಡಿದ ರೀತಿಯ ರಾಸಾಯನಿಕ ವಸ್ತು ಕಾಣಿಸಿತ್ತು. ಸ್ಫೋಟವಾಗಲು ಸಂಪರ್ಕ ಕಲ್ಪಿಸಿ ಎರಡು ಬ್ಯಾಗ್‌ನಲ್ಲಿ ಬಾಕ್ಸ್ ರೂಪದಲ್ಲಿ ಇರಿಸಲಾಗಿತ್ತು. ಕಲಬುರಗಿ ಈಶಾನ್ಯವಲಯದಿಂದ ಬಾಂಬ್‌ನಿಷ್ಕ್ರಿಯ ದಳ ಆಗಮಿಸಿ, ಸ್ಫೋಟಕಗಳಿರುವುದನ್ನು ಖಚಿತಪಡಿಸಿತು. ರಟ್ಟಿನ ಬಾಕ್ಸ್‌ಗಳಲ್ಲಿದ್ದ ಸ್ಫೋಟಕವನ್ನು ಡಿ.31 ರಂದು ನಿರ್ಜನ ಪ್ರದೇಶಕ್ಕೆ ಸಾಗಿಸಿ ನಿಷ್ಕ್ರಿಯಗೊಳಿಸಿದ್ದರು.

ನಕಲಿ ಸಿಮ್‌ನಿಂದ ಕರೆ: ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಬಸ್‌ನಲ್ಲಿ ಅಕ್ರಮವಾಗಿ ಹಣ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ ಮೊಬೈಲ್ ಸಂಖ್ಯೆಯ ಜಾಡು ಹಿಡಿದಿದ್ದರು. ಫೋನ್ ಸ್ವಿಚ್ಡ್ ಆಫ್ ಎನ್ನುತ್ತಿತ್ತು. ಸಿಮ್ ವಿಳಾಸ ಜಾಲಾಡಿದಾಗ, ಸುಳ್ಳು ದಾಖಲೆ ನೀಡಿ ಖರೀದಿಸಿರುವುದು ತಿಳಿಯಿತು. ಆಗ ಸಿಪಿಐ ಸುರೇಶ್ ತಳವಾರ್ ಮತ್ತು ಸಿಪಿಐ ಚಂದ್ರಶೇಖರ್ ಅವರಿದ್ದ ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ಎಸ್ಪಿ ಡಾ.ಚೇತನ್‌ಸಿಂಗ್ ರಾಥೋರ್ ರಚಿಸಿದ್ದರು.

ಸುಳಿವೇ ಇಲ್ಲ: ಹೈದಾರಾಬಾದ್‌ನಿಂದ ರಾಯಚೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಶಕ್ತಿನಗರದ ಬಳಿ ಅದೇ ದಿನ ತಪಾಸಣೆಗೆ ಒಳಪಡಿಸಿದಾಗ ಇಬ್ಬರು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ರಾಯಚೂರಿಗೆ ಟಿಕೆಟ್ ತೆಗೆಸಿದ್ದರೂ ಇಬ್ಬರು ಮಾರ್ಗ ನಡುವೆ ಇಳಿದಿದ್ದರು. ಮಹೆಬೂಬ್ ನಗರದಲ್ಲಿ ಇಳಿದಿರಬೇಕೆಂದು ನಿರ್ವಾಹಕ ಶಂಕಿಸಿದ್ದರು. ಇದೇ ಸುಳಿವು ಆಧರಿಸಿ ಅಧಿಕಾರಿಗಳು, ಹೈದರಾಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಸಿಸಿ ಟಿವಿ ದೃಶ್ಯಾವಳಿ ಪಡೆದು ವೀಕ್ಷಿಸಿದ್ದರು. ಏನೆಲ್ಲ ಕಸರತ್ತುಗಳು ನಡೆದರೂ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸುಳಿವೇ ಸಿಗದಿರುವುದು, ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ. ಆಂಧ್ರ ಮತ್ತು ತೆಲಂಗಾಣ ಗಡಿಯಲ್ಲಿ ಕಟ್ಟೆಚ್ಚರ ಅವಶ್ಯ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

----

ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಿರಂತರವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಜಾಲ ಹರಡಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ನೇಮಿಸಿದ್ದ ತನಿಖಾ ತಂಡಗಳ ಮಾಹಿತಿ ಆಧರಿಸಿ ಶೋಧ ಕಾರ್ಯ ಜಾರಿಯಲ್ಲಿ ಇರಿಸಲಾಗಿದೆ.

-ಎಸ್.ಬಿ.ಪಾಟೀಲ್, ಹೆಚ್ಚುವರಿ ಎಸ್ಪಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ