ಆ್ಯಪ್ನಗರ

ಕುರಿಗಾಹಿಗಳಿಂದ 16ನೇ ಶತಮಾನದ ದೇಗುಲ ಪತ್ತೆ: ಪೊದೆಗಳಲ್ಲಿ ಮರೆಯಾಗಿತ್ತು ನರಸಿಂಹ ಸ್ವಾಮಿ ದೇಗುಲ!

ಕೆಳದಿಯ ಶಿವಪ್ಪನಾಯಕನ ಕಾಲದ್ದು ಎನ್ನಲಾದ ನರಸಿಂಹ ಸ್ವಾಮಿ ದೇಗುಲವನ್ನು ಕುರಿಗಾಹಿಗಳು ಪತ್ತೆ ಹಚ್ಚಿದ್ದಾರೆ. ಶ್ರೀ ಕಂಬದ ನರಸಿಂಹ ಸ್ವಾಮಿ ದೇಗುಲದಲ್ಲಿ 16ನೇ ಶತಮಾನದ ಕುರುಹುಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಸಮಗ್ರ ಅಧ್ಯಯನ ನಡೆಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

Vijaya Karnataka Web 18 Sep 2020, 2:45 pm
ಮಾಗಡಿ: ಮಾಗಡಿ ತಾಲೂಕಿನ ಕಲ್ಯಾ ಗ್ರಾಮದ ಹೊನ್ನಾಪುರ ಬೆಟ್ಟಕ್ಕೆ ನಿತ್ಯ ಕುರಿ ಮೇಯಿಸಲು ಹೋಗುತ್ತಿದ್ದ ಲಿಖಿತ್‌ ನಾಯಕ್‌ ಮತ್ತವರ ಗುಂಪಿಗೆ ಬೆಟ್ಟದ ಬುಡದಲ್ಲಿ ಸುಮಾರು ಏಳು ಅಡಿ ಎತ್ತರದ ಒಂದು ದೊಡ್ಡ ಗಾತ್ರದ ವಿಗ್ರಹ ಕಾಣಿಸಿತ್ತು. ಗಿಡಗಂಟಿಗಳು ಮಣ್ಣಿನಿಂದ ಮುಚ್ಚಿ ಹೋಗಿದ್ದ ವಿಗ್ರವನ್ನು ಸ್ವಚ್ಛಗೊಳಿಸಿ ನೋಡಿದಾಗ ನಾಲ್ಕು ಕೈಗಳನ್ನು ಹೊಂದಿರುವ ದೇವತೆಯ ವಿಗ್ರಹವಾಗಿತ್ತು. ಕೈಗಳಲ್ಲಿ ತ್ರಿಶೂಲ, ಡಮರುಗ, ಗದೆ ಹೊಂದಿರುವ ವಿಗ್ರಹದಲ್ಲಿ ಇನ್ನೊಂದು ಕೈ ಸೊಂಟದ ಮೇಲೆ ಇರಿಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಇದರಿಂದ ಕುತೂಹಲಗೊಂಡ ಯುವಕರ ತಂಡ ಗುಡ್ಡದಲ್ಲಿನ ಎಲ್ಲ ಪೊದೆಗಳನ್ನೂ ಹುಡುಕಾಡಿದಾಗ ಪಾಳುಬಿದ್ದ ದೇಗುಲ ಪತ್ತೆಯಾಯಿತು. ಸುತ್ತಮುತ್ತಲಿನ ಕಾಡು ಸವರಿ ಸ್ವಚ್ಛಗೊಳಿಸಿದಾಗ ದೇಗುಲದ ಮುಂಭಾಗದಲ್ಲಿ ದ್ವಾರಪಾಲಕರಾದ ಜಯ-ವಿಜಯರ ವಿಗ್ರಹ ಪತ್ತೆಯಾಯಿತು. ದೇಗುಲವನ್ನು ಒಳ ಪ್ರದೇಶಿಸಿದಾಗ ನಾಗರ ಹಾವೊಂದು ಹೆಡೆ ಬಿಚ್ಚಿ ನಿಂತಿರುವುದನ್ನು ನೋಡಿ ಹೆದರಿದ ಯುವಕರು ವಾಪಸ್‌ ಬಂದರು. ಮರುದಿನ ಮತ್ತೆ ಅದೇ ಸ್ಥಳಕ್ಕೆ ಹೋಗಿ ದೇಗಲವನ್ನು ಸಂಪೂರ್ಣ ಸ್ವಚ್ಛಗೊಳಿಸಿ ನೋಡಿದಾಗ ಕಂಬದ ನರಸಿಂಹ ಸ್ವಾಮಿ ವಿಗ್ರಹ ಪತ್ತೆಯಾಯಿತು.

ಕಂಬದ ನರಸಿಂಹ ಸ್ವಾಮಿಯ ಚಿತ್ರವನ್ನು ಕಲ್ಲಿನ ಕಂಬದ ಮೇಲೆ ಬಿಡಿಸಲಾಗಿದ್ದು, ಶಂಖ, ಚಕ್ರ ಹಾಗೂ ಗದಾಧಾರಿಯಾದ ಶ್ರೀ ನರಸಿಂಹ ಸ್ವಾಮಿಯ ಚಿತ್ರವಿದೆ. ಇಡೀ ದೇಗುಲವನ್ನು ಕಲ್ಲಿನಿಂದ ನಿರ್ಮಿಸಲಾಗಿದೆ.

ದಕ್ಷಿಣಾಭಿಮುಖ ದೇಗುಲ
ದೇಗುಲವು ದಕ್ಷಿಣಾಭಿಮುಖವಾಗಿದ್ದು, ಸಂಜೆ ವೇಳೆ ಸೂರ‍್ಯನ ಕಿರಣಗಳು ಕಂಬದ ನರಸಿಂಹ ಸ್ವಾಮಿಯನ್ನು ಸ್ಪರ್ಶಿಸುವುದು ವಿಶೇಷ. ಇದೇ ಬೆಟ್ಟದ ಒಂದು ಬಂಡೆಯಲ್ಲಿ ನಂದಿಯ ವಿಗ್ರಹವನ್ನು ಕೆತ್ತಲಾಗಿದ್ದು. ಹಿಂಬದಿಯಲ್ಲಿ ಮಲಗಿರುವ ಶ್ರೀರಂಗನಾಥ ಸ್ವಾಮಿಯ ಚಿತ್ರವಿದೆ. ದೇಗುಲದ ಸುತ್ತಲೂ ಆವರಣ ಗೋಡೆಯ ಅಡಿಪಾಯ ಕಂಡು ಬರುತ್ತಿದೆ.

ಶಿವಪ್ಪ ನಾಯಕ ಸ್ಥಾಪಿಸಿದ್ದು

16ನೇ ಶತಮಾನದ ಶಿವಪ್ಪ ನಾಯಕ ಸ್ಥಾಪಿಸಿರುವ ಕಂಬದ ನರಸಿಂಹಸ್ವಾಮಿ ದೇಗುಲವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರ ಮನವಿ. ಶಿವಪ್ಪ ನಾಯಕರು ಮಾಗಡಿಯ ಕಲ್ಯಾ ಗ್ರಾಮ ಬಂದಾಗ ಹೊನ್ನಾಪುರ ಬೆಟ್ಟಕ್ಕೆ ಬಂದು ವಿಶ್ರಾಂತಿ ಪಡೆದಿದ್ದರು. ಆಗ ಪೂಜಿಸಲೆಂದು ಕಂಬದ ನರಸಿಂಹ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದರು ಎಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಮುಚ್ಚಿ ಹೋಗಿದ್ದ ದೇಗುಲವನ್ನು ಪತ್ತೆ ಹಚ್ಚಿ ಬೆಳಕಿಗೆ ತಂದ ಹೊನ್ನಪುರದ ಯುವಕರಾದ ಮೋಹನ್‌, ದೀಪಕ್‌, ಹರ್ಷ, ರಾಜೇಶ್‌. ಶಿವಶಂಕರ್‌ ಅವರ ಕಾರ‍್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ