ಆ್ಯಪ್ನಗರ

ರಾಮನಗರದಲ್ಲಿ ರಾಗಿ ಖರೀದಿಗೆ ತಯಾರಿ ಮಾಡಿಕೊಳ್ಳಲು ಎಡಿಸಿ ಸೂಚನೆ

ಜಿಲ್ಲೆಯಲ್ಲಿ ರೈತರು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಸಂಗ್ರಹಣೆ ಮಾಡಲು ಸರಕಾರ ನೀಡಿರುವ ಮಾರ್ಗಸೂಚಿ ಅನ್ವಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka Web 24 Dec 2020, 9:48 pm
ರಾಮನಗರ: ಜಿಲ್ಲೆಯಲ್ಲಿ ರೈತರು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಸಂಗ್ರಹಣೆ ಮಾಡಲು ಸರಕಾರ ನೀಡಿರುವ ಮಾರ್ಗಸೂಚಿ ಅನ್ವಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web ragi


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶಾಲ ಸ್ಥಳದಲ್ಲಿ ಖರೀದಿ ಕೇಂದ್ರ: ಕನಿಷ್ಟ ಬೆಂಬಲ ಬೆಲೆ ಯೋಜನೆಯ ಖರೀದಿ ಏಜೆನ್ಸಿಯಾಗಿ ಜಿಲ್ಲೆಗೆ ಇದೇ ಮೊದಲನೇ ಬಾರಿಗೆ ಸರ್ಕಾರವು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲವನ್ನು ನಿಯೋಜಿಸಿದ್ದು, ಸ್ಥಳೀಯ ರೈತರ ಅಗತ್ಯತೆಗೆ ಅನುಸಾರವಾಗಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕಾಗಿರುತ್ತದೆ. ರಾಗಿ ಖರೀದಿಸಲು ಅನುಕೂಲವಾಗುವಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಅಥವಾ ಇತರೆ ವಿಶಾಲವಾದ ಸಗಟು ಮಳಿಗೆಗಳಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮೈಸೂರು: ರಸ್ತೆಯನ್ನೇ ಕಣ ಮಾಡಿಕೊಂಡ ರೈತರು..! ವಾಹನ ಸವಾರರು ಹೈರಾಣ, ಹೆಚ್ಚುತ್ತಿವೆ ಅಪಘಾತ

ಎಕರೆಗೆ 10 ಕ್ವಿಂಟಾಲ್‌ ಮಿತಿ: ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ರೈತರು ರಾಗಿ ಬೆಳೆದಿರುವ ಬಗ್ಗೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೋಟ್ಸ್‌ ದತ್ತಾಂಶದಿಂದ ರೈತರ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲಾಗುವುದು. ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ರೈತರಿಂದ ರಾಗಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್‌ವರೆಗೆ ಖರೀದಿಸಲಾಗುವುದು ಎಂದರು.

ಜನದಟ್ಟಣೆ ಏರ್ಪಡದಂತೆ ಎಚ್ಚರಿಕೆ: ರಾಗಿ ಬೆಳೆಯ ಫಸಲು ಜಿಲ್ಲೆಯಲ್ಲಿ ಉತ್ತಮವಾಗಿದ್ದು, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಪ್ರಮಾಣದ ರಾಗಿ ಖರೀದಿಯಾಗುವುದರಿಂದ ರೈತರು ಖರೀದಿ ಕೇಂದ್ರದ ಮುಂದೆ ಜನ ದಟ್ಟಣೆಯಾಗದಂತೆ ರೈತರಿಗೆ ಟೋಕನ್‌ಗಳನ್ನು ನೀಡಿ, ಯಾವುದೇ ದೂರಿಗೆ ಆಸ್ಪದ ನೀಡದಂತೆ ಕ್ರಮಕೈಗೊಳ್ಳಲು ತಿಳಿಸಿದರು.

ವಾತಾವರಣ ವೈಪರೀತ್ಯದಿಂದ ನೆಲಕಚ್ಚಿದ ರಾಗಿ; ಯಂತ್ರಗಳಿಂದ ರಾಗಿ ಪೈರುಗಳಿಗೆ ಹಾನಿ, ದಾರಿ ಕಾಣದಾದ ರೈತರು..!

ಬ್ಯಾಂಕ್‌ ಖಾತೆಗೆ ನೇರ ಜಮೆ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸುವ ಪ್ರತಿ ಕ್ವಿಂಟಾಲ್‌ ರಾಗಿಗೆ ರೂ. 3,295 ದರವನ್ನು ಕೇಂದ್ರ ಸರ್ಕಾರದಿಂದ ನಿಗದಿಪಡಿಸಲಾಗಿದೆ. ಕೃಷಿ ಇಲಾಖೆಯಿಂದ ನಿಯೋಜಿಸಲ್ಪಟ್ಟ ಗ್ರೇಡರ್‌ಗಳು ಕೃಷಿ ಉತ್ಪನ್ನವನ್ನು ಪರೀಕ್ಷಿಸಿ ಖರೀದಿಗೆ ಒಪ್ಪಿಗೆ ಸೂಚಿಸಿದ ನಂತರ ಖರೀದಿ ಏಜೆನ್ಸಿಯ ವ್ಯವಸ್ಥಾಪಕರು ರೈತರಿಗೆ ಖರೀದಿ ಟೋಕನ್‌ ನೀಡಲು ಹಾಗೂ ಟೋಕನ್‌ನಲ್ಲಿ ರೈತನ ಹೆಸರು/ಗ್ರಾಮ/ಬೆಳೆ ಪ್ರಮಾಣ/ಖರೀದಿ ದಿನಾಂಕಗಳನ್ನು ಸ್ವಷ್ಟವಾಗಿ ನಮೂದಿಸಬೇಕು. ರೈತರಿಂದ ಬೆಂಬಲ ಬೆಲೆಯಡಿಯಲ್ಲಿ ರಾಗಿ ಖರೀದಿಸಿದ ನಂತರ ರೈತರ ಬ್ಯಾಂಕ್‌ ಖಾತೆಗಳಿಗೆ ಆರ್‌.ಟಿ.ಜಿ.ಎಸ್‌. ಮೂಲಕ ಹಣ ಪಾವತಿಸಿ ಪಾರದರ್ಶಕತೆ ಕಾಪಾಡಲು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್‌, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಅಧಿಕಾರಿ ವಿನಯ್‌ ಕುಮಾರ್‌ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ