ಆ್ಯಪ್ನಗರ

ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ರೇಷ್ಮೆ ಬೆಲೆ ಕುಸಿತದ ಬಿಸಿ..!

ರಾಮನಗರ ಉಪ ಚುನಾವಣೆಯ ಅಭ್ಯರ್ಥಿ ಅನಿತಾಕುಮಾರಸ್ವಾಮಿಯವರಿಗೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯಲ್ಲಿ ಗುರುವಾರ ರೇಷ್ಮೆ ಬೆಳೆ ಬೆಲೆ ಕುಸಿತದ ಬಿಸಿ ತಾಕಿದ ಘಟನೆ ನಡೆಯಿತು..!

Vijaya Karnataka 26 Oct 2018, 3:14 pm
ಮರಳವಾಡಿ: ರಾಮನಗರ ಉಪ ಚುನಾವಣೆಯ ಅಭ್ಯರ್ಥಿ ಅನಿತಾಕುಮಾರಸ್ವಾಮಿಯವರಿಗೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯಲ್ಲಿ ಗುರುವಾರ ರೇಷ್ಮೆ ಬೆಳೆ ಬೆಲೆ ಕುಸಿತದ ಬಿಸಿ ತಾಕಿದ ಘಟನೆ ನಡೆಯಿತು..!
Vijaya Karnataka Web anita kumaraswamy promotes hot silk price hike
ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ರೇಷ್ಮೆ ಬೆಲೆ ಕುಸಿತದ ಬಿಸಿ..!


ಕನಕಪುರ ತಾಲೂಕಿನ ಮರಳವಾರಿ ಹೋಬಳಿಯ ತಟ್ಟೆಕೆರೆ ಬಳಿಯ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯದಂತೆ ದೇವಮೂಲೆಯಿಂದಲೇ ಪ್ರಚಾರ ಆರಂಭಿಸಿದ ಅನಿತಾಕುಮಾರಸ್ವಾಮಿಯವರನ್ನು ಕಂಡ ಕೂಡಲೇ ಮಾತಿಗಿಳಿದ ಕಲ್ಲನಕುಪ್ಪೆ ಗ್ರಾಮದ ರೈತರು,''ಮುಖ್ಯಮಂತ್ರಿಗಳ ಕ್ಷೇತ್ರದ ರೈತರ ರೇಷ್ಮೆ ಬೆಲೆ ಕುಸಿತವಾಗಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಚುನಾವಣೆ ಗೆದ್ದ ಬಳಿಕ ಅಧಿಕಾರ ಸಿಕ್ಕರೂ, ಇತ್ತ ತಿರುಗಿಯೂ ನೊಡಿಲ್ಲ,''ಎಂದು ಪ್ರಚಾರಕ್ಕೆ ಅಡ್ಡಿಪಡಿಸಲು ಬಯತ್ನಿಸಿದರು. ಈ ವೇಳೆ ಅನಿತಾ ಅವರು ಪ್ರತಿಕ್ರಿಯೆ ನೀಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು.

ಏತನ್ಮಧ್ಯೆ ಸಂಸದ ಡಿ.ಕೆ. ಸುರೇಶ್‌ ಅವರುಮಾತನಾಡಲು ಮುಂದಾದರು. ಈ ವೇಳೆ ರೈತರು ಒಂದೆಡೆ ಸೇರಿ ಪ್ರಚಾರ ವಾಹನದ ಬಳಿ ಬಂದು,''ಕುಮಾರಸ್ವಾಮಿಯವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಜಿಲ್ಲೆಯ ರೈತರ ಸಮಸ್ಯೆ ನೀಗಲಿಲ್ಲ. ಇಂದು ಮತ್ತೆ ಚುನಾವಣೆ ಪ್ರಚಾರಕ್ಕೆ ಯಾಕೆ ಬಂದಿರಿ,'' ಎಂದು ಪ್ರಶ್ನಿಸಿದರು. ಇದರಿಂದ ಅನಿತಾ ಅವರು ಗಲಿಬಿಲಿಗೊಂಡರೂ ಡಿ.ಕೆ.ಸುರೇಶ್‌ ಮಾತ್ರ ನಯವಾಗಿಯೇ ರೈತರನ್ನು ಮಾತಿಗೆಳೆದರು.

ಮಹಿಳೆಯರ ಪ್ರತಿ ನಿಧಿ: ರೈತರನ್ನು ಸುಮ್ಮನಾಗಿಸುವ ಯತ್ನ ಮಾಡಿದ ಡಿ.ಕೆ. ಸುರೇಶ್‌,''ರಾಜ್ಯದಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ. ಕೆಲವು ಕ್ಷೇತ್ರಗಳ ಚುನಾವಣೆಗಳನ್ನು ಹೊಂದಾಣಿಕೆಯಿಂದಲೇ ನಡೆಸುತ್ತಿದ್ದೇವೆ. ಈಕ್ಷೇತ್ರದ ಮಹಿಳೆಯರನ್ನು ಪ್ರತಿನಿಧಿಸಲು ಅನಿತಾಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಅನಿತಾ ಅವರೇ ಹೊಂಮಿನಿಸ್ಟರ್‌. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸುತ್ತಾರೆ,''ಎಂದು ಚಟಾಕಿ ಹಾರಿಸಿದರು.

ಇದಕ್ಕೂ ಜಗ್ಗದ ರೈತರು,''ಮುಖ್ಯಮಂತ್ರಿ ಜಿಲ್ಲೆಯಲ್ಲಿ ರೈತರ ಸಮಸ್ಯೆ ಆಲಿಸದ ನೀವು,ಚುನಾವಣೆ ಬಂದಾಗ ಮಾತ್ರ ಇಲ್ಲಿಗೆ ಬಂದಿದ್ದೀರಿ. ಮೊದಲು ರೇಷ್ಮೆ ಬೆಲೆ ಕುಸಿತದ ಬಗ್ಗೆ ಮಾತನಾಡಿ,'' ಎಂದು ಪಟ್ಟುಹಿಡಿದರು..! ಇದಕ್ಕೆ ಪ್ರತಿಕ್ರಿಯಿಸಿ ಸಂಸದ ಡಿ.ಕೆ. ಸುರೇಶ್‌,''ಬಸವರಾಜು ಸಮಿತಿಯಿಂದ ವರದಿ ಬಂದಿದೆ. ರೇಷ್ಮೆ ಬೆಲೆ ಕುಸಿತ ತಡೆಯಲು ರಾಜ್ಯಸರಕಾರ ನಿರ್ಧರಿಸಿದೆ. ಆದರೀಗ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದು, ಇದಾದ ಬಳಿಕ ರೈತರ ಸಮಸ್ಯೆ ಪರಿಹರಿಸಲಾಗುವುದು,''ಎಂದು ಭರವಸೆ ನೀಡಿದರು.

ಸಮಸ್ಯೆಗೆ ಪರಿಹಾರ ಶೀಘ್ರ: ಸಂಸದರ ಮಾತನ್ನೂ ರೈತರು ಕೇಳದೆ, ಪ್ರಚಾರಕ್ಕೆ ಅಡ್ಡಿಮಾಡುತ್ತಲೇ ಇದ್ದಾಗ ಮಧ್ಯೆ ಪ್ರವೇಶಿಸಿದ ಅನಿತಾಕುಮಾರಸ್ವಾಮಿ ಮಾತನಾಡಿ,'' ನಾಲ್ಕು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿದ್ದು, ಈ ಹಿಂದೆ ಅಧಿಕಾರದಲ್ಲಿದ್ದಾಗ ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿಗಳು ರಾಮನಗರ ಕ್ಷೇತ್ರವ್ಯಾಪ್ತಿಗೆ ಸೇರ್ಪಡೆಯಾಗಿರಲಿಲ್ಲ. ಅಂದಿನಿಂದ ಇಂದಿನವರೆಗೂ ಈ ಹೋಬಳಿಗಳು ಅಭಿವೃದ್ಧಿ ಹಿಂದೆ ಉಳಿದಿವೆ. ಪ್ರಸ್ತುತ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಚುನಾವಣೆ ಮುಗಿದ ಬಳಿಕ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು,'' ಎಂದು ಭರವಸೆ ನೀಡಿದರು. ಅಷ್ಟಕ್ಕೂ ಸುಮ್ಮನಾಗದ ರೈತರಿಗೆ ರೇಷ್ಮೆಖಾತೆ ಸಚಿವ ಸಾ.ರಾ. ಮಹೇಶ್‌ಅವರನ್ನೇ ಪ್ರಚಾರದ ವೇದಿಕೆಗೆ ಕರೆದು ಭರವಸೆ ಕೊಡಿಸಿದರು.

ಸೂಕ್ತ ಪರಿಹಾರದ ಭರವಸೆ: ಅನಿತಾಕುಮಾರಸ್ವಾಮಿಯವರ ಮಾತಿನಂತೆ ಪ್ರಚಾರದ ವೇದಿಕೆಗೆ ಬಂದ ರೇಷ್ಮೆಖಾತೆ ಸಚಿವ ಸಾ.ರಾ ಮಹೇಶ್‌ ಮಾತನಾಡಿ,''ಈ ಜಿಲ್ಲೆಯಲ್ಲೇ ಮುಖ್ಯಮಂತ್ರಿಗಳಿದ್ದಾರೆ. ಪ್ರಭಾವಿ ಸಚಿವರಿದ್ದಾರೆ. ಈ ಇಬ್ಬರು ನನಗೆ ಈಗಾಗಲೇ ಬಸವರಾಜು ಅವರ ವರದಿಯಂತೆ ಸೂಚನೆ ನೀಡಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಆಲಿಸಬಹುದು. ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ನೀತಿ ಸಂಹಿತೆ ಅಡ್ಡಿಯಾಗಿದೆ. ಚುನವಣೆ ಮುಗಿದ ಬಳಿಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ,'' ಎಂದು ಅಭಯ ನೀಡಿದರು.

ಪ್ರಚಾರದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾದ ಎಮ್‌.ಎನ್‌ ನಾಗರಾಜು, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ, ಸದಸ್ಯರಾದ ಬಸಪ್ಪ, ಮುಖಂಡರಾದ ಇಕ್ಬಾಲ್‌ಹುಸೇನ್‌, ಗೇರಹಳ್ಳಿ ರಾಜೇಶ್‌, ಬುಜಂಗಯ್ಯ, ರಾಮಕೃಷ್ಣ, ಮಾಜಿ ಶಾಸಕ ಸುಧಾಕರ್‌ಲಾಲ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ರಾದ ನಾಗರಾಜು, ಡಿ.ಎಂ. ವಿಶ್ವನಾಥ್‌, ಲಕ್ಷ ್ಮಣ್‌, ಕಬ್ಬಡಿ ಬಾಬು, ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ