ಸೋಲೂರು : ತೋಟಗಾರಿಕೆ ಬೆಳೆ ದಾಳಿಂಬೆ ಹಣ್ಣಿನ ಮೇಲೆ ಈ ವರ್ಷ ಹೆಚ್ಚಾಗಿ ಮಳೆಹನಿಗಳು ಬಿದ್ದಕಾರಣ ದಾಳಿಂಬೆ ಹಣ್ಣಿಗೆ ಶಿಲೀಂದ್ರ ಸೋಂಕಿನ ಆಂಥ್ರಾಕ್ನೋಸ್ ಎಂಬ ಹಣ್ಣು ಕೊಳೆಯುವ ರೋಗ ಆವರಿಸಿದೆ. ಇದರಿಂದ ಕೃಷಿಕರ ಬಾಳಲ್ಲಿ ಸಂಕಷ್ಟ ಆವರಿಸಿದೆ.
ಏನಿದು ಆಂಥ್ರಾಕ್ನೋಸ ?: ಮಂಗಾರು ಮಳೆನೀರು ಹೆಚ್ಚಾದ್ದರಿಂದ ದಾಳಿಂಬೆ ಗಿಡದಲ್ಲಿ ಮತ್ತು ಹಣ್ಣಿನ ಕವಚದಲ್ಲಿ ತೇವಾಂಶ ಹೆಚ್ಚಾಗಿ ಆಂಥ್ರಾಕ್ನೋಸ ಎಂಬ ಶಿಲೀಂದ್ರ ಉತ್ಪತ್ತಿಯಾಗುತ್ತದೆ. ಇದು ಕಾಯಿ, ಹಣ್ಣು, ಎಲೆಯ ಮೇಲೆ ಕೆಂಪು ಮಚ್ಚೆ ಕಂಡುಬರುತ್ತಾ ಕ್ರಮೇಣ ಇಡೀ ಹಣ್ಣು ಕೊಳೆಯಲಾರಂಭಿಸಿದೆ.
ರೋಗನಿಯಂತ್ರಣಕ್ಕೆ ತೋಟಗಾರಿಕೆಯ ಇಲಾಖೆಯ ವಿಜ್ಞಾನಿಗಳು ಥಯೋಫಿನೈಟ್ ಮಿಥೈನ್, ಕ್ಲೋರೊಥಲೋನಿನ್ ರಾಸಾಯನಿಕವನ್ನು ಸಿಂಪಡಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ ತಾಲೂಕಿನ ರೈತರು ತೀವ್ರ ಆತಂಕಗೊಂಡಿದ್ದಾರೆ.
ಅಂಗಾಂಶ ಕೃಷಿ ತಂತ್ರ: ದಾಳಿಂಬೆ ಹಣ್ಣಿಗೆ ರೋಗಬಾರದಿಲು ಬಯೋಟೆಕ್ನಾಲಜಿಯ ಅಂಗಂಶ ಕೃಷಿ (ಟಿಷ್ಯು ಕಲ್ಚರ್) ತಂತ್ರಜ್ಞಾನ ವರವಾಗಿತ್ತು. ಈ ತಂತ್ರಜ್ಞಾನದಿಂದ ಪ್ರಯೋಗಾಲದಲ್ಲಿ ಬೆಳೆದ ಆರೋಗ್ಯವಂತ ಸಸಿಗಳನ್ನು ರೈತರು ತಂದು ತಮ್ಮ ತೋಟದಲ್ಲಿ ನಾಟಿ ಮಾಡುತ್ತಿದ್ದರು. ಆದರೆ ದಾಳಿಂಬೆ ಬೆಳೆಗಾರರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಕುಸಿಯುತ್ತಿದೆ ಎನ್ನುತ್ತಾರೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.
ಅನುಕರಣೆಯಾಗದ ಇಸ್ರೇಲ್ ಮಾದರಿ : ರಾಜ್ಯ ಸರಕಾರ ಸಾರ್ವಜನಿಕರ ಸಹಭಾಗಿತ್ವದಲ್ಲಿ ದಾಳಿಂಬೆ ಕೃಷಿ ಪುನಶ್ಚೇತನಕ್ಕೆ ಇಸ್ರೇಲ್ ದೇಶವನ್ನು ಮಾದರಿಯಾಗಿರಿಸಿಕೊಂಡಿತ್ತು. ದಾಳಿಂಬೆ ಬೆಳೆಯುವ ವಿಧಾನ ಮತ್ತು ದಾಳಿಂಬೆ ಸಂಸ್ಕರಣ ಘಟಕವನ್ನು ರಾಜ್ಯದ ದಾಳಿಂಬೆ ಬೆಳೆ ಹೆಚ್ಚಿರುವ ಕಡೆ 5 ವಿಭಾಗಗಳಲ್ಲಿ ದಾಳಿಂಬೆ ತಳಿ ಸುಧಾರಣಾ ಕೇಂದ್ರ ಸ್ಥಾಪನೆ ಮಾಡಬೇಕು ಎಂದು 95 ಕೋಟಿ ರೂ ವೆಚ್ಚವನ್ನು ಅಂದಾಜಿಸಲಾಗಿತ್ತು. ಆದರೆ ಬಂಡವಾಳ ಹೂಡಿಕೆದಾರರು ಮುಂದೆ ಬರದ ಕಾರಣ ಯೋಜನೆ ಯೋಜನೆಯಾಗಿಯೇ ಉಳಿದಿದೆ. ಇದರಿಂದ ದಾಳಿಂಬೆ ಘಟಕ ಸ್ಥಾಪಿಸಿ ದಿನಕ್ಕೆ 40ರಿಂದ 50 ಲಕ್ಷ ರೂ ವಹಿವಾಟು ಮಾಡಬೇಕೆಂದಿದ್ದ ತೋಟಗಾರಿಕೆ ಇಲಾಖೆಯ ಆಸೆ ಕಮರಿದೆ.
194 ಕೋಟಿ ಪರಿಹಾರಕ್ಕೆ ಮೊರೆ: ಅಧಿಕ ಮಳೆಯಿಂದ ನಷ್ಟಅನುಭವಿಸಿರು ರಾಜ್ಯದ ಅಡಿಕೆ, ದಾಳಿಂಬೆ, ದ್ರಾಕ್ಷಿ ಬೆಳೆಯುವ ರೈತರಿಗೆ ಪರಿಹಾರ ಮತ್ತು ಬೆಳೆಗಾರರ ವಿಶೇಷ ಸಂಕಷ್ಟ ಸಂದರ್ಭ ಎಂದು ಪರಿಗಣಿಸಬೇಕು. ಅಡಿಕೆಗೆ 186 ಕೋಟಿ, ದ್ರಾಕ್ಷಿ -ದಾಳಿಂಬೆ ಬೆಳೆಗಾರರಿಗೆ 194 ಕೋಟಿ ಪರಿಹಾರ ಮತ್ತು ಸಾಲ ಸೌಲಭ್ಯ ನೀಡುವಂತೆ ಸಚಿವ ಟಿ.ಬಿ ಜಯಚಂದ್ರ ಬ್ಯಾಂಕ್ಗಳ ಜತೆ ಮಾತುಕತೆ ನಡೆಸಿ ಕೇಂದ್ರಕ್ಕೆ ಮನವಿ ನೀಡಿರುವುದಾಗಿ ವಿಕಕ್ಕೆ ತಿಳಿಸಿದ್ದಾರೆ.
ರಾಜ್ಯದ ದಾಳಿಂಬೆ ಬೆಳೆಗಾರರಿಗೂ ನಡುಕ..!: ರಾಜ್ಯದಲ್ಲಿ 16,620 ಹೆಕ್ಟೇರ್ನಲ್ಲಿ ದಾಳಿಂಬೆ ಬೆಳಯಲಾಗುತ್ತಿದೆ. ವಾರ್ಷಿಕ 1,34 ಲಕ್ಷ ಟನ್ ಹಣ್ಣು ಉತ್ಪಾದನೆಯಾಗಿ ಕೇರಳ, ತಮಿಳುನಾಡು, ಮುಂಬೈಗೆ ಹೆಚ್ಚು ರಫ್ತಾಗುತ್ತಿದೆ. ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ ಹಾಗೂ ರಾಜ್ಯದಲ್ಲಿ ದಾಳಿಂಬೆ ಬೆಳೆಯುವ ಪ್ರದೇಶಗಳಾದ ಹೊಸದುರ್ಗ, ಬೆಂಗಳೂರು ಗ್ರಾಮಾಂತರ, ವಿಜಯಪುರ, ದಾವಣಗೆರೆ, ತುಮಕೂರು ಗ್ರಾಮಾಂತರ, ಬಾಗಲಕೋಟೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ದಾಳಿಂಬೆ ಬೇಳೆಗಾರರಿದ್ದಾರೆ. ಈಗ ದಾಳಿಂಬೆಗೆ ಅಂಟಿರುವ ರೋಗದ ಭೀತಿಯಿಂದ ಬಳಲಿದ್ದಾರೆ.
ದಾಳಿಂಬೆ ಬೆಳೆಯ ಬೆಲೆ ಹೆಚ್ಚಳ ..?: ರಾಜ್ಯದಲ್ಲಿ 2013 - 14 ರಲ್ಲಿ ದಾಳಿಂಬೆ ಬೆಳೆಯುವ ಕ್ಷೇತ್ರ ಹೆಚ್ಚಾಗಿದೆ. 2017 ರಲ್ಲಿ ದಾಳಿಂಬೆ ಕೆಜಿಗೆ 180 ರೂ ಇದ್ದ ದಾಳಿಂಬೆ 120 ಕ್ಕೆ ಇಳಿದಿತ್ತು. ಈಗ ಫಸಲು ಕೈ ಜಾರಿರುವುದರಿಂದ ಬೆಲೆ ಏರಿಕೆಯಾಗುವ ಲಕ್ಷ ಣಗಳು ನಿಚ್ಚಳವಾಗಿದೆ.