ಆ್ಯಪ್ನಗರ

ಪ್ರವಾಹಪೀಡಿತ ನಿರಾಶ್ರಿತರಿಗೆ ನೆರವು

ಉತ್ತರ ಕರ್ನಾಟಕ ಭಾಗದ ಪ್ರವಾಹಪೀಡಿತ ನಿರಾಶ್ರೀತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಅವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದ ಮುಖಂಡರು ಸುಮಾರು 30 ಲಕ್ಷ ರೂ ಪ್ರಮಾಣದ ಅಗತ್ಯ ವಸ್ತುಗಳನ್ನು ರವಾನಿಸಿದರು.

Vijaya Karnataka 12 Aug 2019, 3:34 pm
30 ಲಕ್ಷ ರೂ ಪ್ರಮಾಣದ ಅಗತ್ಯ ವಸ್ತು ರವಾನೆ
Vijaya Karnataka Web assistance to flood hit refugees
ಪ್ರವಾಹಪೀಡಿತ ನಿರಾಶ್ರಿತರಿಗೆ ನೆರವು


ಬಿಡದಿ: ಉತ್ತರ ಕರ್ನಾಟಕ ಭಾಗದ ಪ್ರವಾಹಪೀಡಿತ ನಿರಾಶ್ರೀತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಅವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದ ಮುಖಂಡರು ಸುಮಾರು 30 ಲಕ್ಷ ರೂ ಪ್ರಮಾಣದ ಅಗತ್ಯ ವಸ್ತುಗಳನ್ನು ರವಾನಿಸಿದರು.

ಬಿಸ್ಕತ್ತು ಪ್ಯಾಕೆಟ್‌ಗಳು, ಶುದ್ಧ ಕುಡಿಯುವ ನೀರಿನ ಬಾಟಲಿಗಳು, ಹೊದಿಕೆಗಳು ಮತ್ತು ಸೀರೆಗಳನ್ನು ತುಂಬಿದ 4 ವಾಹನಗಳು ಮಾಯಗಾನಹಳ್ಳಿಯ ಎ ಒನ್‌ ಸರ್ವಿಸ್‌ ಸ್ಟೇಷನ್‌ ಆವರಣದಿಂದ ಭಾನುವಾರ ಬೆಳಗಾವಿ ಜಿಲ್ಲೆಗೆ ಪ್ರಯಾಣ ಬೆಳೆಸಿದವು.

ಈ ಸಂದರ್ಭದಲ್ಲಿ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ''ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿನ ಜನರ ಸ್ಥಿತಿ-ಗತಿ ಘೋರವಾಗಿದೆ, ಪ್ರವಾಹ ಪೀಡಿತ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷ ರು, ಸದಸ್ಯರು ಹಾಗೂ ಕಾರ್ಯದರ್ಶಿಗಳು, ಸಹಕಾರ ಕ್ಷೇತ್ರದ ಸ್ನೇಹಿತರು 30 ಲಕ್ಷ ರೂ. ಮೊತ್ತದ ಅಗತ್ಯ ವಸ್ತುಗಳನ್ನು ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ,'' ಎಂದರು.

''ಕನ್ನಡ ನಾಡಿನ ಭಾಗವಾಗಿರುವ ಉತ್ತರ ಕರ್ನಾಟಕ ಭಾಗದ ನಮ್ಮ ಸಹೋದರರು ಇಂದು ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಇಂತಹ ಸಮಯದಲ್ಲಿ ಸಣ್ಣ ಸಹಾಯ ನೀಡಲು ನಿರ್ಧರಿಸಲಾಗಿದೆ, ಮೊದಲ ಹಂತವಾಗಿ 2 ಲೋಡ್‌ ಬಿಸ್ಕತ್‌ ಪ್ಯಾಕೆಟ್‌ಗಳು, ಶುದ್ಧ ಕುಡಿಯುವ ನೀರು(ಬಿಸ್ಲೆರಿ) ಬಾಟಲ್‌ಗಳು ಹಾಗೂ ಹೊದಿಕೆ(ಬೆಡ್‌ಶಿಟ್‌)ಗಳು, ಸೀರೆಗಳನ್ನು 2 ವಾಹನಗಳಲ್ಲಿ ಕಳುಹಿಸಲಾಗುತ್ತಿದೆ. ಈ ಅಗತ್ಯ ವಸ್ತುಗಳನ್ನು ಬೆಳಗಾಂ ಜಿಲ್ಲೆಯಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಲಾಗುತ್ತಿದೆ,'' ಎಂದು ತಿಳಿಸಿದರು.

ಸಹಕಾರ ಕ್ಷೇತ್ರ ಸ್ವಪ್ರೇರಣೆಯಿಂದ ಸ್ಪಂದಿಸಬೇಕು: ನಿಲ್ಲದ ಮಳೆಯಿಂದಾಗಿ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ರಣಭೀಕರ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಜನರು ಮನೆ ಮಠ ತೊರೆದು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ಪಂದಿಸಬೇಕಾಗಿದೆ. ರಾಜ್ಯದಲ್ಲಿರುವ ಸುಮಾರು 13 ಸಾವಿರ ಸಹಕಾರ ಸಂಘಗಳ ಪೈಕಿ ಪ್ರತಿ ಸಂಘದಿಂದ ತಲಾ 5 ಸಾವಿರ ರೂ ನೆರವು ನೀಡಿದರೂ ಕೂಡ ಸುಮಾರು 6.50 ಕೋಟಿ ಹಣ ಸಂಗ್ರಹವಾಗುತ್ತದೆ. ಇದು ಪ್ರವಾಹ ಪೀಡಿತರ ನೆರವಿಗೆ ಸಹಕಾರಿಯಾಗಲಿದೆ,'' ಎಂದರು.

ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗಿ: ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದಿಂದ ಸಂಗ್ರಹವಾಗುವ ಹಣದಿಂದ ಆಹಾರ ಪದಾರ್ಥಗಳು, ಸೋಪು, ಪೇಸ್ಟ್‌, ಬ್ರಶ್‌, ಬಟ್ಟೆಗಳು, ಚಾಪೆ, ಬ್ಲಾಂಕೆಟ್‌, ನೀರಿನ ಬಾಟೆಲ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲಾಗುವುದು, ಸಂಕಷ್ಟದಲ್ಲಿ ಸಿಲುಕಿರುವ ಜೀವಗಳಿಗೆ ಉದಾರವಾಗಿ ನೆರವು ನೀಡಲು ಎಲ್ಲರೂ ಸ್ವಯಂ ಪ್ರೇರಿತರಾಗಿ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು,'' ಎಂದು ಪಿ.ನಾಗರಾಜು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಿ.ಜೆ.ಹೊನ್ನಶೆಟ್ಟಿ(ರಾಜಣ್ಣ), ಗ್ರಾಪಂ ಸದಸ್ಯ ಶ್ರೀಧರ್‌(ಶಿರಿ), ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಶಿವಣ್ಣ(ಲಿಂಗೇಗೌಡನದೊಡ್ಡಿ), ರಾಮಚಂದ್ರಯ್ಯ(ಮಾದಾಪುರ), ಚನ್ನಯ್ಯ(ಸಂಗನಬಸವನದೊಡ್ಡಿ), ಕಾರ್ಯದರ್ಶಿಗಳಾದ ಎಸ್‌.ರಾಮಚಂದ್ರಯ್ಯ(ಎಸ್‌.ಬಿ ದೊಡ್ಡಿ), ವೆಂಕಟೇಶ್‌ಮೂರ್ತಿ(ಮಾದಾಪುರ), ಶಿವರಾಜು(ತಿಮ್ಮಸಂದ್ರ), ಮಂಜು(ಮಾಯಗಾನಹಳ್ಳಿ), ಪ್ರಭಾಕರ್‌(ವಡೇರಹಳ್ಳಿ), ವೀರಭದ್ರಯ್ಯ(ಲಕ್ಷ್ಮೀಪುರ), ವೆಂಕಟೇಶ್‌(ಕೃಷ್ಣಪ್ಪನದೊಡ್ಡಿ), ಮುಖಂಡರಾದ ಶಿವಕುಮಾರಸ್ವಾಮಿ, ರೇಣುಕಪ್ಪ, ಮಹದೇವಯ್ಯ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ