ಆ್ಯಪ್ನಗರ

ರಾಜ್ಯ ರಾಜಕಾರಣದಲ್ಲಿ ಎಚ್‌ಡಿಕೆ ಮಹಾ ಸುಳ್ಳುಗಾರ: ಸಿಎಂ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್‌ ವಾಗ್ದಾಳಿ

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅತಿದೊಡ್ಡ ಸುಳ್ಳುಗಾರ ಮನುಷ್ಯರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಆರೋಪಿಸಿದರು.

Vijaya Karnataka 11 Apr 2019, 5:00 am
ಹಾರೋಹಳ್ಳಿ (ಕನಕಪುರ ತಾ.): ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅತಿದೊಡ್ಡ ಸುಳ್ಳುಗಾರ ಮನುಷ್ಯರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಆರೋಪಿಸಿದರು.
Vijaya Karnataka Web bjp leader m rudresh waghdali against cm
ರಾಜ್ಯ ರಾಜಕಾರಣದಲ್ಲಿ ಎಚ್‌ಡಿಕೆ ಮಹಾ ಸುಳ್ಳುಗಾರ: ಸಿಎಂ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್‌ ವಾಗ್ದಾಳಿ


ಹಾರೋಹಳ್ಳಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ಅಕ್ರಮ ಆಸ್ತಿ, ಹಣ ಇಟ್ಟಿದ್ದವರ ಮತ್ತು ಗುತ್ತಿಗೆದಾರರ ವಿರುದ್ಧ ಐಟಿ ಇಲಾಖೆ ದಾಳಿ ನಡೆಸಿದರೆ ಸ್ವಂತ ಮನೆಯ ಮೇಲೆಯಯೇ ದಾಳಿ ಮಾಡಿರುವ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಇವರೇ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ರೀತಿಯಲ್ಲಿ ಪ್ರತಿಭಟನೆಗೆ ಇಳಿದು ಅತಿದೊಡ್ಡ ನಾಟಕವಾಡುತ್ತಿದ್ದಾರೆ. ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೆ ಐಟಿ ದಾಳಿ ನನಗೆ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಜತೆಗೆ ಪುಲ್ವಾಮಾ ಉಗ್ರರ ದಾಳಿಯೂ ಕೂಡ ಮೊದಲೇ ಗೊತ್ತಿತ್ತು ಎನ್ನುವ ಮುಖ್ಯಮಂತ್ರಿಗಳು ದೇಶದ ಯೋಧರ ಸಾವಿಗೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯದಲ್ಲಿ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ. ಕೂಡಲೇ ರಾಜೀನಾಮೆ ನೀಡಿ ಪ್ರಸಕ್ತ ಚುನಾವಣೆ ಎದುರಿಸಬೇಕು,'' ಎಂದು ಆಗ್ರಹಿಸಿದರು.

''ಚಿತ್ರನಟರಾದ ಯಶ್‌ ಹಾಗೂ ದರ್ಶನ್‌, ಸುದೀಪ್‌ ಅವರ ಮನೆಗಳ ಮೇಲೆ ಐಟಿ ದಾಳಿ ನಡೆದಾಗ ಅದು ಐಟಿ ಇಲಾಖೆಯ ಕರ್ತವ್ಯ ಎಂದು ಹೇಳುವ ಸಿಎಂ, ತಮ್ಮ ಹಿಂಬಾಲಕರ ಮನೆಗಳ ಮೇಲೆ ದಾಳಿ ನಡೆಸಿದರೆ ಅದು ಬಿಜೆಪಿ ಕುತಂತ್ರ ಮತ್ತು ಐಟಿ ಇಲಾಖೆಯ ಅಧಿಕಾರಿಗಳ ಬಿಜೆಪಿಯವರ ಏಜೆಂಟರುಗಳೆಂದು ಟೀಕಿಸುತ್ತಿರುವುದು ಇವರ ಪಾರದರ್ಶಕತೆಗೆ ಹಿಡಿದ ಕೈಗನ್ನಡಿ,'' ಎಂದರು.

ಬೂಟಾಟಿಕೆ ಸಿಎಂ: ''ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿಗಳು ಬೋಗಸ್‌ ಮಾತುಗಳನ್ನು ಆಡುತ್ತಿದ್ದಾರೆ. 48 ಸಾವಿರ ಕೋಟಿ ಸಾಲಮನ್ನಾ ಆಗಿದೆ ಎನ್ನುತ್ತಿದ್ದಾರೆ. ಆದರೆ ಕೇವಲ ಒಂದೂವರೆ ಸಾವಿರ ಕೋಟಿ ರೂ. ಮಾತ್ರ ಸಾಲಮನ್ನಾ ಆಗಿದೆ ಎಂದು ದಾಖಲಾತಿಗಳು ಹೇಳುತ್ತಿವೆ. ಈ ವಿಚಾರದಲ್ಲಿ ಅತಿದೊಡ್ಡ ನಾಟಕವಾಡುತ್ತಿರುವ ಇವರು ಸಾಲಮನ್ನಾ ವಿಚಾರದಲ್ಲಿ ಬೂಟಾಟಿಕೆ ಮಾತುಗಳನ್ನು ಆಡಿ ರೈತರನ್ನೇ ದಾರಿತಪ್ಪಿಸುತ್ತಿದ್ದಾರೆ,'' ಎಂದು ಟೀಕಿಸಿದರು.

ಹೆಣ್ಣುಮಕ್ಕಳ ಮೇಲೆ ಕಿಂಚಿತ್ತೂ ಗೌರವವಿಲ್ಲ: ''ಮುಖ್ಯಮಂತ್ರಿಗಳು ತಾವೊಬ್ಬರೇ ಸತ್ಯ ಹರಿಶ್ಚಂದ್ರರೆಂದು ಬಿಂಬಿಸಿಕೊಳ್ಳುವ ಮೂಲಕ ಜನರನ್ನು ನಿಂದಿಸಲು ಹೊರಟಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ ಎನ್ನುವುದಕ್ಕೆ ಬೆಳಗಾವಿ ಅಧಿವೇಶನದ ವೇಳೆ ರೈತ ಮಹಿಳೆಯರು ಪ್ರತಿಭಟನೆಗೆ ಮುಂದಾದಾಗ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ. ಇಂದು ಮಂಡ್ಯದಲ್ಲಿ ತಮ್ಮ ಪಕ್ಷ ದ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾರನ್ನು ಹೀನಾಯವಾಗಿ ಟೀಕಿಸುವ ಇವರು ಹೆಣ್ಣುಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ,'' ಎಂದು ದೂರಿದರು.

ಜೆಡಿಎಸ್‌ ಮುಳುಗುವ ದೋಣಿ: ''ಇಂದಿನ ಚುನಾವಣಾ ಕಣದಲ್ಲಿ ಜೆಡಿಎಸ್‌ ಪಕ್ಷ ಮುಳುಗುವ ದೋಣಿಯಂತೆ ಕಾಣುತ್ತಿದೆ. ಆದ್ದರಿಂದ ಹತಾಶರಾಗಿರುವ ಸಿ.ಎಂ. ದೇಶದ ಪ್ರಧಾನಮಂತ್ರಿಯವರನ್ನೇ ಏಕವಚನದಲ್ಲಿ ಟೀಕಾ ಪ್ರಹಾರ ಮಾಡಲು ಹೊರಟಿದ್ದಾರೆ. ಹಾಸನ, ಮಂಡ್ಯ, ತುಮಕೂರಿನಲ್ಲಿ ಮೈತ್ರಿ ಪಕ್ಷ ದ ಅಭ್ಯರ್ಥಿಗಳೇ ಗೌಡರ ವಿರುದ್ಧ ತಿರುಗಿ ಬಿದ್ದು ನೇರ ದಾಳಿ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಮನಗಂಡು ಹತಾಶರಾಗಿ ಮುಖ್ಯಮಂತ್ರಿ ಬಾಯಿಗೆ ಬಂದಂತೆ ಹತಾಶ ನುಡಿಯಾಡಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ,'' ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್‌, ಪದ್ಮನಾಭ, ನಾಗರಾಜು, ಪ್ರವೀಣ್‌ ಕುಮಾರ್‌ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ