ಆ್ಯಪ್ನಗರ

ವರದಕ್ಷಿಣೆ ಸಾವು ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

''ಎಂ ಕೆ ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂನ್‌ 1ರಂದು ನಡೆದಿದ್ದ ಪವಿತ್ರಾ ಎಂಬ ನವ ವಿವಾಹಿತೆಯ ಸಂಶಯಾಸ್ಪದ ಸಾವಿನ ತನಿಖೆಯಲ್ಲಿ ಪೊಲೀಸ್‌ ಅಧಿಕಾರಿಗಳು ಆರೋಪಿಗಳ ರಕ್ಷ ಣೆಗೆ ನಿಂತಂತೆ ವರ್ತಿಸುತ್ತಿದ್ದಾರೆ,'' ಎಂದು ಪೋಷಕರು ದೂರಿದರು.

Vijaya Karnataka 22 Jul 2018, 4:10 pm
ರಾಮನಗರ: ''ಎಂ ಕೆ ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂನ್‌ 1ರಂದು ನಡೆದಿದ್ದ ಪವಿತ್ರಾ ಎಂಬ ನವ ವಿವಾಹಿತೆಯ ಸಂಶಯಾಸ್ಪದ ಸಾವಿನ ತನಿಖೆಯಲ್ಲಿ ಪೊಲೀಸ್‌ ಅಧಿಕಾರಿಗಳು ಆರೋಪಿಗಳ ರಕ್ಷ ಣೆಗೆ ನಿಂತಂತೆ ವರ್ತಿಸುತ್ತಿದ್ದಾರೆ,'' ಎಂದು ಪೋಷಕರು ದೂರಿದರು.
Vijaya Karnataka Web caso de muerte de dowry cbi quiere sondeo
ವರದಕ್ಷಿಣೆ ಸಾವು ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ


ಹತ್ತು ಲಕ್ಷ ತರಲು ಬೇಡಿಕೆ: ಈ ಕುರಿತು ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೃತ ಪವಿತ್ರಾಳ ಅಣ್ಣ ತಿಲಕ್‌ ಮಾತನಾಡಿ,'' ಪೊಲೀಸ್‌ ತನಿಖೆಯಲ್ಲಿ ವಿಶ್ವಾಸವಿಲ್ಲದಿರುವ ಕಾರಣ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮುಖ್ಯಮಂತ್ರಿಗೆ ದೂರು ನೀಡಲಾಗಿದೆ. ನನ್ನ ತಂಗಿ ಎಂ.ಎ ಬಿಎಡ್‌ ಪದವೀಧರಳಾಗಿದ್ದು ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದ ಹರ್ಷಿತ್‌ ಎಂಬುವವರಿಗೆ 2018ರ ಜ.1ರಂದು ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 1ಲಕ್ಷ 90 ಸಾವಿರ ನಗದು ಚಿನ್ನದ ಒಡವೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೂ ತವರು ಮನೆಯಿಂದ ಹತ್ತು ಲಕ್ಷ ರೂ ಹಣ ತರುವಂತೆ ಬೇಡಿಕೆ ಇಟ್ಟಿದ್ದ ಹರ್ಷಿತ್‌ ಮತ್ತವರ ತಂದೆ ತಾಯಿ, ಕುಟುಂಬದ ಸದಸ್ಯರು ಕಿರುಕುಳ ನೀಡಿದ್ದರು,'ಎಂದು ನುಡಿದರು.

''ಜೂನ್‌ 1ರಂದು ಆಹಾರದಲ್ಲಿ ವಿಷ ಬೆರೆಸಿ ಪವಿತ್ರಾಳಿಗೆ ನೀಡಿ ಕೊಲೆ ಮಾಡಲಾಗಿತ್ತು. ಆದರೆ ಪೊಲೀಸ್‌ರು ಸ್ಥಳೀಯ ರಾಜಕಾರಣಿಗಳ ಮತ್ತು ಆರೋಪಿಗಳ ಪ್ರಭಾವಕ್ಕೆ ಒಳಗಾಗಿ ಪ್ರಕರಣದಲ್ಲಿ ದುರ್ಬಲ ಕಲಂಗಳನ್ನು ದಾಖಲಿಸಲಾಗಿದೆ. ಪರಿಣಾಮವಾಗಿ ಚಾರ್ಜ್‌ ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನವೇ ಆರೋಪಿಗಳು ಜಾಮೀನು ಪಡೆದಿದ್ದಾರೆ. ಪ್ರತಿ ಬಾರಿಯೂ ಆರೋಪಿಗಳನ್ನು ಸಮರ್ಥಿಸಿಕೊಂಡೇ ವಾದ ಮಾಡುತ್ತಾರೆ,'ಎಂದು ಹೇಳಿದರು.

ಹಣಬಲ ರಾಜಕೀಯಬಲ: ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಅನುಪಮ ನಾಗವಾರ ಮಾತನಾಡಿ,'' ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಇನ್ನೂ ವರದಕ್ಷಿಣೆ ಹಿಂಸೆ, ಕೊಲೆ ಪ್ರಕರಣಗಳು ನಡೆಯುತ್ತಿರುವುದು ಸ್ತ್ರೀ ಸಮಾಜವೇ ತಲೆತಗ್ಗಿಸಬೇಕಾದ ವಿಚಾರ. ಮೈಸೂರು ಜಿಲ್ಲೆಯಿಂದ ಚನ್ನಪಟ್ಟಣ ತಾಲೂಕಿಗೆ ವಿವಾಹ ಮಾಡಿಕೊಟ್ಟಿರುವ ಈ ಘಟನೆಯಲ್ಲಿ ಪೊಲೀಸರು ಸ್ಥಳೀಯರ ಪರವಾಗಿದ್ದು ಮಹಿಳಾ ಪಕ್ಷ ಪಾತ ಮಾಡುತ್ತಿದ್ದಾರೆ. ಮಹಿಳೆಯರಿಗೆ ರಕ್ಷ ಣೆ ನೀಡಬೇಕಾದ ಪೊಲೀಸರೇ ಪೊಲೀಸ್‌ ಠಾಣೆಯಲ್ಲಿ ಅಗೌರವದಿಂದ ವರ್ತಿಸುತ್ತಾರೆ,'' ಎಂದು ದೂರಿದರು.

''ಪ್ರಕರಣದಲ್ಲಿ ಆರೋಪಿಗಳು ಹಣಬಲ ರಾಜಕೀಯಬಲ ಹೊಂದಿದ್ದು ತನಿಖೆಯಲ್ಲಿ ತಮ್ಮ ಪ್ರಭಾವ ಬಳಸಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದ್ದು ಶವದ ಮರುಮರಣೋತ್ತರ ಪರೀಕ್ಷೆ ನಡೆಸಿ ಪವಿತ್ರಾ ಸಾವಿನ ನಿಜವಾದ ಕಾರಣವನ್ನು ಬಹಿರಂಗಪಡಿಸಬೇಕು,'' ಎಂದು ಒತ್ತಾಯಿಸಿದರು.

ಪ್ರಗತಿ ಗ್ರಾಮೀಣಾಭಿವೃದ್ಧಿ ಸಂಘದ ಜಿ.ಡಿ ಕುಮಾರ್‌ ಮಾತನಾಡಿ,'' ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ವಿಳಂಬ ಮಾಡಿದರೆ ಆ.8ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ,'' ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಪ್ರಮೀಳ, ಮತ್ತು ಪವಿತ್ರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ