ಆ್ಯಪ್ನಗರ

Ramanagara Crime News: ಚನ್ನಪಟ್ಟಣದಲ್ಲಿ ಒಂಟಿ ಮಹಿಳೆ ಕೊಲೆ ಆರೋಪಿ ಅಂದರ್‌

Ramanagara Crime News: ಅಲ್ಪ ಸ್ವಲ್ಪ ಓದಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಆರೋಪಿ ಅಜಯ್‌ ಒಳ್ಳೆಯ ವಿದ್ಯಾವಂತನಲ್ಲ. ಆದರೆ, ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಕಾರ‍್ಯಕ್ರಮಗಳನ್ನು ನೋಡಿ ಕೊಲೆಯ ಪ್ಲಾನ್‌ ರೂಪಿಸಿದ್ದ. ಅದರಂತೆ ಗೀತಾಳನ್ನು ಕೊಲೆ ಮಾಡಿದ್ದ. ಬಳಿಕ ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಆರೋಪಿಯು ಆಕೆಯ ಮೊಬೈಲ್‌ ತೆಗೆದುಕೊಂಡು ಹೋಗಿ ಕೆರೆಗೆ ಬಿಸಾಡಿದ್ದ. ಅಷ್ಟೇ ಅಲ್ಲದೆ ಮೂರು ಮೊಬೈಲ್‌ ಫೋನ್‌ ಇಟ್ಟುಕೊಂಡಿದ್ದ ಈತ, 6 ಸಿಮ್‌ಕಾರ್ಡ್‌ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka 11 Aug 2022, 1:29 pm

ಹೈಲೈಟ್ಸ್‌:

  • ಪತಿಯ ಸೋದರ ಅಳಿಯನಿಂದಲೇ ಹತ್ಯೆ
  • ಅನೈತಿಕ ಸಂಬಂಧ ಕೊಲೆಗೆ ಕಾರಣ
  • ಚಾಲಾಕಿ ಕೊಲೆಗಾರನನ್ನು ಪತ್ತೆ ಹಚ್ಚಿದ ಪೊಲೀಸರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web murder
ಸಾಂದರ್ಭಿಕ ಚಿತ್ರ
ರಾಮನಗರ: ಚನ್ನಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಹಾಡ ಹಗಲೇ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಮಳವಳ್ಳಿ ತಾಲೂಕು ದಳವಾಯಿ ಕೋಡಿಹಳ್ಳಿ ಗ್ರಾಮದ ಅಜಯ್‌ (24) ಬಂಧಿತ. ಅನೈತಿಕ ಸಂಬಂಧ ಕಾರಣವೆಂಬ ವಿಷಯ ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಬಂಧಿತ ಆರೋಪಿ ಮೃತ ಮಹಿಳೆ ಪತಿಯ ಸೋದರ ಅಳಿಯ. ಕೊಲೆ ಮಾಡಿ ಸುಳಿವು ಸಿಗದಂತೆ ತಿರುಗಾಡುತ್ತಿದ್ದ ಈ ಚಾಲಾಕಿ ಹಂತಕ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾನೆ.

ಚನ್ನಪಟ್ಟಣದಲ್ಲಿ ಹಾಡ ಹಗಲೇ ಮನೆಗೆ ನುಗ್ಗಿ ಮಹಿಳೆ ಕೊಲೆ..! ಚಿನ್ನಾಭರಣ ಲೂಟಿ..
ಸವಾಲಾಗಿದ್ದ ಪ್ರಕರಣ: ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿರುವ ಕೆಎಚ್‌ಬಿ ಬಡಾವಣೆಯಲ್ಲಿ ಜುಲೈ 15 ರಂದು ಮಧ್ಯಾಹ್ನ 3 ಗಂಟೆ ವೇಳೆ ಗೀತಾ (33) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿತ್ತು.

ಮೇಲ್ನೋಟಕ್ಕೆ ಯಾರೋ ದರೋಡೆಕೋರರು ಚಿನ್ನ ಹಾಗೂ ಹಣಕ್ಕಾಗಿ ಈ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತಾದರೂ, ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆಯೇ ಇದು ದರೋಡೆಕೋರರ ಕೃತ್ಯವಲ್ಲ, ಪರಿಚಿತರೇ ಮಾಡಿರುವ ಕೊಲೆ ಎಂದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆಗಾರನ ಜಾಡು ಹಿಡಿಯಲು ಆರಂಭಿಸಿದರು. ಆದರೆ ಕೊಲೆಗಾರ ಯಾವುದೇ ಸುಳಿವನ್ನು ಬಿಡದೆ ಹೋಗಿದ್ದ ಕಾರಣ ಈ ಪ್ರಕರಣ ಕಗ್ಗಂಟಾಗಿತ್ತು.

ಅನೈತಿಕ ಸಂಬಂಧ: ಗೃಹಿಣಿ ಗೀತಾ ಕೊಲೆಗೆ ಆಕೆ ಮತ್ತು ಆರೋಪಿ ಅಜಯ್‌ ನಡುವೆ ಇದ್ದ ಅನೈತಿಕ ಸಂಬಂಧವೇ ಕಾರಣ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಚಿನ್ನದ ಅಂಗಡಿ ಮಾಲೀಕನ ಪತ್ನಿ ಹತ್ಯೆ ಪ್ರಕರಣ: ಮೂವರ ಬಂಧನ; ಚಿಕ್ಕಪ್ಪನ ಮಗನೇ ಪ್ರಮುಖ ಆರೋಪಿ!
ತನ್ನ ಸೋದರ ಮಾವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಜಯ್‌ ಮತ್ತು ಗೀತಾಳ ನಡುವೆ 9 ವರ್ಷಗಳಷ್ಟು ವಯಸ್ಸಿನ ಅಂತರವಿತ್ತಾದರೂ, ಇಬ್ಬರ ನಡುವೆ ಅನೈತಿಕ ಸಂಬಂಧ ಮೂಡಿತ್ತು. ಗೀತಾಳ ಮೋಹಕ್ಕೆ ಸಿಲುಕಿದ್ದ ಅಜಯ್‌ ಆಕೆಯನ್ನು ತನ್ನ ಜತೆ ಬಂದು ಬಿಡು ಮದುವೆಯಾಗೋಣ ಎಂದು ಒತ್ತಾಯಿಸಿದ್ದ. ಆದರೆ ಇದಕ್ಕೆ ಗೀತಾ ಒಪ್ಪಿರಲಿಲ್ಲ. ಇತ್ತೀಚಿಗೆ ಗೀತಾ ಬೇರೊಬ್ಬ ವ್ಯಕ್ತಿಯೊಂದಿಗೆ ಸಲುಗೆಯಿಂದ ಇದ್ದಳು ಎಂಬ ವಿಷಯ ತಿಳಿದ ಅಜಯ್‌, ಆಕೆಯ ಮೇಲೆ ದ್ವೇಷ ಹೊಂದಿದ್ದ. ಹೀಗಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಡೈರಿ ನೋಡಿ ಸ್ಕೆಚ್‌ ರೂಪಿಸಿದ್ದ: ಅಲ್ಪ ಸ್ವಲ್ಪ ಓದಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಆರೋಪಿ ಅಜಯ್‌ ಒಳ್ಳೆಯ ವಿದ್ಯಾವಂತನಲ್ಲ. ಆದರೆ, ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಕಾರ‍್ಯಕ್ರಮಗಳನ್ನು ನೋಡಿ ಕೊಲೆಯ ಪ್ಲಾನ್‌ ರೂಪಿಸಿದ್ದ. ಅದರಂತೆ ಗೀತಾಳನ್ನು ಕೊಲೆ ಮಾಡಿದ್ದ. ಬಳಿಕ ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಆರೋಪಿಯು ಆಕೆಯ ಮೊಬೈಲ್‌ ತೆಗೆದುಕೊಂಡು ಹೋಗಿ ಕೆರೆಗೆ ಬಿಸಾಡಿದ್ದ. ಅಷ್ಟೇ ಅಲ್ಲದೆ ಮೂರು ಮೊಬೈಲ್‌ ಫೋನ್‌ ಇಟ್ಟುಕೊಂಡಿದ್ದ ಈತ, 6 ಸಿಮ್‌ಕಾರ್ಡ್‌ ಬಳಸುತ್ತಿದ್ದ.

ಸಿಸಿ ಕ್ಯಾಮರಾಗಳಲ್ಲಿ ಈತನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಯಾವಾಗಲು ಹೆಲ್ಮೆಟ್‌ ಧರಿಸಿ ತಿರುಗಾಡುತ್ತಿದ್ದ. ಅಷ್ಟೇ ಅಲ್ಲದೆ ತನ್ನ ಬೈಕ್‌ಗೆ ನಂಬರ್‌ ಪ್ಲೇಟ್‌ ಅನ್ನು ಹಾಕದೆ ಯಾರಿಗೂ ಗುರುತು ಸಿಗದಂತೆ ಮಾಡಿದ್ದ. ಇನ್ನು ಒಂದೇ ರಸ್ತೆಯಲ್ಲಿ ತಿರುಗಾಡದ ಈತ ಯಾವಾಗಲೂ ಕಾಲು ದಾರಿಗಳನ್ನು ಹಿಡಿದು ಸುತ್ತಾಡುವ ಮೂಲಕ ತನ್ನ ವಿರುದ್ಧ ಯಾವುದೇ ರೀತಿಯ ಸಾಕ್ಷಿ ಸಿಗದಂತೆ ಮಾಡಿದ್ದ.

ಸುಳಿವು ನೀಡಿದ ಚಿನ್ನದ ಸರ: ಕೊಲೆ ನಡೆದ ಮೊದಲ ದಿನದಿಂದಲೇ ಸಂಬಂಧಿಕರು ಈ ಕೃತ್ಯ ಎಸಗಿರುವ ಸಂಶಯ ಪೊಲೀಸರಿಗೆ ಮೂಡಿತ್ತು.


ಈ ಹಿನ್ನೆಲೆಯಲ್ಲಿ ಸಂದೇಹ ಬಂದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ಮಾಡುತ್ತಿದ್ದ ಪೊಲೀಸರು, ಈತನ ಚಲನವಲನಗಳ ಬಗ್ಗೆ ಕಣ್ಣಿರಿಸಿದ್ದರು. ಕೊಲೆ ಸಮಯದಲ್ಲಿ ಗೀತಾಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿದ್ದ ಅಜಯ್‌, ಕಳೆದ ಭಾನುವಾರ ಹಲಗೂರಿನ ಗಿರವಿ ಅಂಗಡಿಯಲ್ಲಿ ಸರವನ್ನು ಅಡವಿರಿಸಿದ್ದ. ಯಾರಾದರೂ ಒಡವೆ ಅಡವಿರಿಸುತ್ತಾರಾ ಎಂಬ ಮಾಹಿತಿಯನ್ನು ಹುಡುಕುತ್ತಿದ್ದ ಪೊಲೀಸರಿಗೆ ಈತ ಸರ ಇರಿಸಿರುವ ಮಾಹಿತಿ ಸಿಗುತ್ತಿದ್ದಂತೆಯೇ, ಆತನ ಮೇಲಿದ್ದ ಅನುಮಾನ ದೃಢಪಟ್ಟಿದೆ. ಕೂಡಲೇ ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಎಸ್ಪಿ ಅಭಿನಂದನೆ: ಕಗ್ಗಂಟಾಗಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ‍್ಯಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಕಗ್ಗಂಟಾಗಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಡಿವೈಎಸ್ಪಿ ಓಂ ಪ್ರಕಾಶ್‌ ನೇತೃತ್ವದಲ್ಲಿ ತನಿಖೆ ನಡೆಸಿದ ಸಿಪಿಐ ಶಿವಕುಮಾರ್‌, ಪಿಎಸ್‌ಐ ಲಿಯಾಖತ್‌, ಎಎಸ್‌ಐ ಎಂ. ರಾಜು ಸೇರಿದಂತೆ ತನಿಖಾ ತಂಡವನ್ನು ಅಭಿನಂದಿಸಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ