ಆ್ಯಪ್ನಗರ

ಪ್ರಧಾನಿ ಮೋದಿಗೆ ಸೋಲುವ ಭಯ; ಹೀಗಾಗಿ ಚುನಾವಣೆ ವೇಳೆ ನೆನಪಾದ ರೈತರು: ಸಿಎಂ ವ್ಯಂಗ್ಯ

ಸಮ್ಮಿಶ್ರ ಸರಕಾರ ರಚನೆ ಆದ ದಿನದಿಂದಲೂ ಒಂದಲ್ಲೊಂದು ಕಿರಿಕಿರಿಯನ್ನು ಬಿಜೆಪಿ ಮಾಡುತ್ತಿದೆ. ಪ್ರತಿಪಕ್ಷ ಕೆಲಸವನ್ನು ಮಾಡದೆ ಸರಕಾರ ಬೀಳಿಸುವುದರಲ್ಲೇ ಬಿಜೆಪಿ ಕಾಲ ಕಳೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದರು.

Vijaya Karnataka Web 23 Feb 2019, 8:37 pm
ರಾಮನಗರ: ಪ್ರಧಾನಿ ಮೋದಿ ಅವರಿಗೆ ಚುನಾವಣೆ ಹೊಸ್ತಿಲಲ್ಲಿ ಮಾತ್ರ ರೈತರ ನೆನಪಾಗುತ್ತಿದೆ. ಜನ ಎಲ್ಲಿ ನಮ್ಮನ್ನು ತಿರಸ್ಕರಿಸುತ್ತಾರೋ ಎಂಬ ಭೀತಿಯಿಂದ ರೈತರಿಗೆ 6 ಸಾವಿರ ಹಣ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿರುವುದು ಕೇವಲ ಚುನಾವಣೆ ತಂತ್ರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
Vijaya Karnataka Web kumaraswamy..


ಚನ್ನಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 765 ಕೋಟಿ ರೂ,.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಇದೀಗ ರೈತರ ನೆನಪಾಗಿ ಭಾಷಣ ಮಾಡುತ್ತಿದ್ದಾರೆ. ದೇಶದ 12 ಕೋಟಿ ರೈತರಿಗೆ ವಾರ್ಷಿಕ ತಲಾ 6000 ನೀಡುವ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಒಂದ ಯೋಜನೆ ಚುನಾವಣೆ ನಂತರ ಮುಂದುವರೆಯುವುದೋ ಇಲ್ಲವೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಈ ಯೋಜನೆಯಿಂದ ರಾಜ್ಯಕ್ಕೆ ಕೇವಲ 2098 ಕೋಟಿ ರೂ. ಅನುದಾನ ಮಾತ್ರ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಅನುದಾನವನ್ನು ರಾಜ್ಯ ಸರಕಾರ ವಿದ್ಯುತ್ ಸಬ್ಸಿಡಿ ರೀತಿಯಲ್ಲಿ ನೀಡುತ್ತಿದೆ. ರಾಜ್ಯದಿಂದ 17 ಸಂಸದರನ್ನು ಕಳುಹಿಸಿದಕ್ಕಾಗಿ ಕೇಂದ್ರ ನೀಡಿದ ಕೊಡುಗೆ ಇಷ್ಟೆಯೇ? ಎಂದು ಪ್ರಶ್ನಿಸಿದರು.

ಏಪ್ರಿಲ್‌ನಿಂದ ಹಾಲಿನ ಪ್ರೋತ್ಸಾಹ ಧನವನ್ನು 6 ರೂಗಳಿಗೆ ಏರಿಸಲಾಗಿದೆ. ಇಲ್ಲಿ ಸುಮಾರು 2,500 ಕೋಟಿ ವೆಚ್ಚವನ್ನು ಸರಕಾರ ಭರಿಸುತ್ತಿದೆ. ವಿದ್ಯುತ್ ಸಬ್ಸಿಡಿ ಹಾಗೂ ರೈತರ ಪರವಾಗಿ ಯೋಜನೆ ಕೈಗೊಳ್ಳಲು ವಿದ್ಯುತ್ ಕಂಪನಿಗಳಿಗೆ ರಾಜ್ಯ ಸರಕಾರ ಸುಮಾರು 11 ಸಾವಿರ ಕೋಟಿ ನೀಡುತ್ತಿದೆ. ಯಾರು ಏನು ಮಾಡಿದ್ದಾರೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯಕ್ಕೆ ಸಿಗಬೇಕಾದ ಸಾವಿರಾರು ಕೋಟಿ ಅನುದಾನವನ್ನು ನೀಡದೆ ಕೇಂದ್ರ ಸರಕಾರ ಬಾಕಿ ಉಳಿಸಿಕೊಂಡಿದೆ. ಆದರೆ ಬಿಜೆಪಿ ನಾಯಕರು ನಮ್ಮನ್ನು ಲೆಕ್ಕ ಕೇಳುತ್ತಿರುವುದು ಹಾಸ್ಯಾಸ್ಪದ. ಅತಿವೃಷ್ಠಿ-ಅನಾವೃಷ್ಠಿಯಿಂದ 28 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ರೈತರು ಗುಳೆ ಹೋಗುತ್ತಿದ್ದಾರೆ. ಇಷ್ಟಾದರೂ 2016ರ ನರೇಗಾ ಅನುದಾನ 900 ಕೋಟಿ ಹಾಗೂ ಪ್ರಸಕ್ತ ಸಾಲಿನ 450 ಕೋಟಿ ಕೂಲಿ ಕಾರ್ಮಿಕರ ಕೂಲಿ ಹಣವನ್ನೂ ಕೇಂದ್ರ ಬಾಕಿ ಉಳಿಸಿಕೊಂಡಿದೆ. ಇಷ್ಟಾದರೂ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರಕಾರ ರಚನೆ ಆದ ದಿನದಿಂದಲೂ ಒಂದಲ್ಲೊಂದು ಕಿರಿಕಿರಿಯನ್ನು ಬಿಜೆಪಿ ಮಾಡುತ್ತಿದೆ. ಪ್ರತಿಪಕ್ಷ ಕೆಲಸವನ್ನು ಮಾಡದೆ ಸರಕಾರ ಬೀಳಿಸುವುದರಲ್ಲೇ ಬಿಜೆಪಿ ಕಾಲ ಕಳೆಯುತ್ತಿದೆ. ಚುನಾವಣೆಯಲ್ಲಿ ಜನರಿಗೆ ನೀಡಿದ ಸಾಲ ಮನ್ನಾ ಮಾತನ್ನು ಉಳಿಸಿಕೊಳ್ಳಲು 45 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಸವಾಲನ್ನು ಸ್ವೀಕರಿಸಿದ್ದೇವೆ. 44 ಲಕ್ಷ ರೈತ ಕುಟುಂಬಗಳ ಸಾಲದ ಹೊರೆಯನ್ನು ಇಳಿಸಲು ಹಣ ಕ್ರೋಡೀಕರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಚನ್ನಪಟ್ಟಣಕ್ಕೆ ಬರುವುದಿಲ್ಲ ಎಂದು ನನ್ನ ಮೇಲೆ ಸಿಟ್ಟಿದ್ದರೆ ಕ್ಷಮಿಸಿ. ನಿಮ್ಮ ಆರ್ಶೀವಾದದಿಂದಲೇ ರೈತರ ಬಾಳು ಬೆಳಗುತ್ತಿದ್ದೇನೆ ಎಂದು ಭರವಸೆ ನೀಡಿದರು.

ವಸತಿ ಸಚಿವ ಎಂ.ಟಿ.ಬಿ.ನಾಗರಾಜು, ಸಚಿವ ಡಿ.ಕೆ.ಶಿವಕುಮಾರ್, ಜಿ.ಪಂ ಅಧ್ಯಕ್ಷ ಎಂ.ಎನ್ ನಾಗರಾಜು, ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ಎಸ್.ರವಿ, ಆ.ದೇವೇಗೌಡ, ಸಹಕಾರಿ ಮಂಡಳಿ ಒಕೂಟದ ಅಧ್ಯಕ್ಷ ಕಾಂತರಾಜು ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ