ಆ್ಯಪ್ನಗರ

ರಾಮನಗರದಲ್ಲಿ ಚೇತರಿಕೆ ಕಾಣದ ಕೆಎಸ್‌ಆರ್‌ಟಿಸಿ: ಸರಾಸರಿ 50 ಲಕ್ಷದಿಂದ 30 ಲಕ್ಷಕ್ಕೆ ಕುಸಿದ ಆದಾಯ!

ಕಳೆದ ವರ್ಷ ಸಾಕಷ್ಟು ಲಾಭದಲ್ಲಿದ್ದ ಕೆಎಸ್‌ಆರ್‌ಟಿಸಿ, ಕೋವಿಡ್‌ನಿಂದಾಗಿ ನಷ್ಟದ ಹಾದಿ ಹಿಡಿದಿದೆ. ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ 50 ಲಕ್ಷ ನಷ್ಟ ಅನುಭವಿಸುತ್ತಿದ್ದ ಕೆಂಪು ಬಸ್ಸುಗಳು, ಅನ್‌ಲಾಕ್‌ ಬಳಿಕವು 20 ಲಕ್ಷದಷ್ಟು ನಷ್ಟ ಅನುಭವಿಸುತ್ತಿದೆ.

Vijaya Karnataka Web 30 Sep 2020, 8:56 am
ಆರ್‌.ಶ್ರೀಧರ್‌ ರಾಮನಗರ
Vijaya Karnataka Web KSRTC Bus

ರಾಮನಗರ: ಲಾಕ್‌ಡೌನ್‌ನಿಂದಾಗಿ ಸತತ ಆರು ತಿಂಗಳು ಕಾಲ ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಈಗ ರಸ್ತೆಗಿಳಿದಿದ್ದರೂ, ನಷ್ಟದ ಹಾದಿಯಿಂದ ಹೊರಬಂದಿಲ್ಲ ಎಂಬುದು ವಿಶೇಷ. ಇದರಿಂದ ಬಸ್‌ ಚಾಲಕರು ಹಾಗು ನಿರ್ವಾಹಕರು ಆತಂಕದಲ್ಲಿ ದಿನ ದೂಡುವಂತಾಗಿದೆ.

ಅರ್ಧದಷ್ಟು ಕುಸಿದ ಆದಾಯ
ಅನ್‌ಲಾಕ್‌ ಬಳಿಕ ಬಸ್ಸುಗಳ ಓಡಾಟ ಹೆಚ್ಚಿದ್ದರೂ ಆದಾಯ ಮಾತ್ರ ಅರ್ಧದಷ್ಟು ಕುಸಿದಿದೆ. ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ನಂತರದಲ್ಲಿ ಹಂತಹಂತವಾಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿತ್ತು. ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದಲ್ಲಿ ಲಾಕ್‌ಡೌನ್‌ ಮುನ್ನ ನಿತ್ಯ 49-40 ಲಕ್ಷದಷ್ಟಿದ್ದ ಆದಾಯ ಸಂಪೂರ್ಣ ಕುಸಿದಿತ್ತು. ಈಗ ನಿತ್ಯ 30 ಲಕ್ಷದಷ್ಟು ಆದಾಯ ಸಂಗ್ರಹ ಆಗುತ್ತಿದ್ದು, ದಿನಕ್ಕೆ ಇನ್ನೂ 20 ಲಕ್ಷದಷ್ಟು ಆದಾಯ ಕೈ ತಪ್ಪುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಗೆ ಆರು ಡಿಪೋಗಳು
ರಾಮನಗರ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್‌ ಸೇರಿದಂತೆ ಒಟ್ಟು 6 ಡಿಪೊಗಳಿವೆ. ಲಾಕ್‌ಡೌನ್‌ಗೆ ಮುನ್ನ ಇವುಗಳಲ್ಲಿ ನಿತ್ಯ 500 ಬಸ್ಸುಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಕೇವಲ 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಸದ್ಯ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಮಾಣಿಕರ ಸಂಖ್ಯೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಸ್ಸುಗಳು ಸಂಚಾರ ನಡೆಸಿವೆ. ಆದರೆ, ಉಳಿದ ಭಾಗಗಳಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಕನಕಪುರ, ಮಾಗಡಿ, ರಾಮನಗರ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಬೇಡಿಕೆ ಕಡಿಮೆಯಾಗಿದೆ.
ವಿಡಿಯೋ: ಚೇತರಿಕೆ ಹಾದಿಯತ್ತ ಕೆಎಸ್‌ಆರ್‌ಟಿಸಿ

ಸಿಬ್ಬಂದಿ ಮಾತ್ರವೇ ಹಾಜರು
ಸಾರಿಗೆ ಸಂಸ್ಥೆಯ ಶೇ.85 ರಷ್ಟು ಸಿಬ್ಬಂದಿ ಈಗಾಗಲೇ ಸೇವೆಗೆ ಮರಳಿದ್ದಾರೆ. ಅವರಿಗೆ ಪಾಳಿ ಆಧಾರದಲ್ಲಿ ಕರ್ತವ್ಯ ನಿಯೋಜಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಒಂದಿಷ್ಟು ಮಂದಿ ಮಾತ್ರ ಬರಬೇಕಿದೆ. ರಜೆಯಲ್ಲಿ ತೆರಳಿದವರು ಸೇವೆಗೆ ಮರಳುವ ಮುನ್ನ ಕೋವಿಡ್‌ ಪರೀಕ್ಷೆ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮೂರ್ನಾಲ್ಕು ದಿನದ ಬಳಿಕಷ್ಟೇ ಅಂತಹವರು ಕೆಲಸಕ್ಕೆ ಬರಬೇಕಿದೆ.

ಹೊರರಾಜ್ಯಗಳ ಗಡಿ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕೆಲವು ಕಡೆ ನಿರ್ಬಂಧ ಮುಂದುವರಿದಿರುವುದು ಸಂಸ್ಥೆಯ ಆದಾಯ ಕುಸಿಯಲು ಕಾರಣವಾಗಿದೆ. ರಾಮನಗರ ವಿಭಾಗದಿಂದ ಒಟ್ಟು 88 ಶೆಡ್ಯುಲ್‌ಗಳಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತವೆ. ಈ ಪೈಕಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಕೆಲವು ಭಾಗಗಳಿಗೆ ಓಡಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ತಮಿಳುನಾಡಿನ ಹೊಸೂರು ಗಡಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸದ್ಯ ಕೇವಲ ಅತ್ತಿಬೆಲೆವರೆಗೆ ಸಂಚರಿಸಿ ಬಸ್‌ಗಳು ವಾಪಸ್‌ ಆಗುತ್ತಿವೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಗ್ರಾಮೀಣ ಭಾಗದಲ್ಲಿ ಹಿನ್ನಡೆ

ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಮೊದಲಿನಂತೆ ಬೇಡಿಕೆ ಇಲ್ಲ. ಒಂದು ರೂಟ್‌ನಲ್ಲಿ ಕೆಲವೊಮ್ಮೆ 4-5 ಪ್ರಯಾಣಿಕರಷ್ಟೇ ಇರುತ್ತಾರೆ. ಇಂತಹ ಕಡೆಗಳಲ್ಲಿ ಸಮರ್ಪಕ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿಗೆ ಸಾಧ್ಯವಾಗುತ್ತಿಲ್ಲ ಎನ್ನಬಹುದು. ಹಳ್ಳಿಗಳಲ್ಲಿ ಇನ್ನೂ ಕೋವಿಡ್‌ ಭಯ ದೂರವಾಗಿಲ್ಲ. ಜನರು ಬಸ್‌ಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಎಕ್ಸ್‌ಪ್ರೆಸ್‌ ಮಾರ್ಗಗಳಲ್ಲಿಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿಅದೇ ಪರಿಸ್ಥಿತಿ ಇರುವುದರಿಂದ ಬಸ್ಸುಗಳ ಆದಾಯ ನಷ್ಟವಾಗುತ್ತಿದೆ.
ಕೊರೊನಾ ಸಂಕಷ್ಟ ಚೇತರಿಕೆ ದಾರಿಯತ್ತ ಕೆಎಸ್‌ಆರ್‌ಟಿಸಿ; ಆಗಸ್ಟ್‌ನಲ್ಲಿ 7 ಕೋಟಿ ರೂ. ಆದಾಯ
  • 6-ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯ ಬಸ್‌ ಡಿಪೊಗಳು
  • 360- ಸದ್ಯ ನಿತ್ಯ ಸಂಚಾರ ಕೈಗೊಂಡಿರುವ ಬಸ್ಸುಗಳು
  • 50 ಲಕ್ಷ- ಲಾಕ್‌ಡೌನ್‌ಗು ಮುನ್ನ ದಿನವೊಂದರ ಸರಾಸರಿ ಗಳಿಕೆ
  • 30 ಲಕ್ಷ- ಸದ್ಯದ ಸರಾಸರಿ ಗಳಿಕೆ
  • 2250-ರಾಮನಗರ ಘಟಕ ವ್ಯಾಪ್ತಿಯಲ್ಲಿನ ಒಟ್ಟು ಸಿಬ್ಬಂದಿ
ನಮ್ಮಲಿರುವ 500 ಬಸ್ಸುಗಳಲ್ಲಿ, 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ, ಗಡಿ ಪ್ರವೇಶ ಮಾಡುತ್ತಿಲ್ಲ. ಹೀಗಾಗಿ ನಿತ್ಯ 20ಲಕ್ಷದಷ್ಟು ಆದಾಯ ಕಡಿಮೆಯಾಗಿದೆ.
ಮಹೇಶ್‌, ವಿಭಾಗೀಯ ನಿಯಂತ್ರಕ, ಕೆಎಸ್‌ಆರ್‌ಟಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ