ಆ್ಯಪ್ನಗರ

ನಿರುದ್ಯೋಗಿಗಳಿಗೆ ಉದ್ಯೋಗ, ಮೂಲ ಸೌಕರ‍್ಯಕ್ಕೆ ಆದ್ಯತೆ

ಗಾರ್ಮೆಂಟ್ಸ್‌ ಫ್ಯಾಕ್ಟರಿ ತೆರೆಯುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನ ನಡೆಯುತ್ತಿದೆ, ಈ ಪ್ರಯತ್ನದಲ್ಲಿ ಆದಷ್ಟು ಬೇಗ ಯಶಸ್ವಿಯಾಗುವ ಭರವಸೆ ಇದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

Vijaya Karnataka 26 Jun 2019, 4:55 pm
ಶಾಸಕಿ ಅನಿತಾ ಕುಮಾರಸ್ವಾಮಿ ಭರವಸೆ | ನಿರಾಶ್ರಿತರ ಭೇಟಿ, ಮನೆ ನೀಡುವ ಭರವಸೆ
Vijaya Karnataka Web employment and basic amenities preference for unemployed
ನಿರುದ್ಯೋಗಿಗಳಿಗೆ ಉದ್ಯೋಗ, ಮೂಲ ಸೌಕರ‍್ಯಕ್ಕೆ ಆದ್ಯತೆ


ರಾಮನಗರ: ಗಾರ್ಮೆಂಟ್ಸ್‌ ಫ್ಯಾಕ್ಟರಿ ತೆರೆಯುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನ ನಡೆಯುತ್ತಿದೆ, ಈ ಪ್ರಯತ್ನದಲ್ಲಿ ಆದಷ್ಟು ಬೇಗ ಯಶಸ್ವಿಯಾಗುವ ಭರವಸೆ ಇದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ನಗರದ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಬಗ್ಗೆ ಕುಮಾರಣ್ಣನವರಿಗೆ ವಿಶೇಷ ಕಾಳಜಿ ಇದೆ. ಇದಕ್ಕಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ನಿರುದ್ಯೋಗ ನಿವಾರಣೆಗೆ ಗಾರ್ಮೆಂಟ್ಸ್‌ ಫ್ಯಾಕ್ಟರಿ ತೆರೆಯುವ ಸಂಬಂಧ ಸಿದ್ಧ ಉಡುಪು ತಯಾರಿಕೆ ಕಂಪನಿಗಳ ಮಾಲೀಕರ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು.

ಬೀಡಿ ಕಾರ್ಮಿಕರ ಕಾಲೋನಿಗೆ 1 ಕೋಟಿ:

ಅಲ್ಪ ಸಂಖ್ಯಾತ ಇಲಾಖೆ ವತಿಯಿಂದ 10 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬೀಡಿ ಕಾರ್ಮಿಕರ ಕಾಲೋನಿ ಅಭಿವೃದ್ಧಿ ಗೆ ಒಂದು ಕೋಟಿ ನೀಡಲಾಗಿದೆ ಎಂದರು. ಇದಷ್ಟೇ ಅಲ್ಲದೆ ವಾರ್ಡ್‌ಗಳ ಮೂಲ ಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಾವು ಸಂಸ್ಕರಣಾ ಘಟಕ:

ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕು ಎಂಬುದು ಸಿಎಂ ಎಚ್‌ಡಿಕೆ ಅವರ ನಂಬಿಕೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ. ಜತೆಗೆ ಇಸ್ರೇಲ್‌ ಮಾದರಿ ಕೃಷಿಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆರೋಗ್ಯ ವಿವಿ ಚಾಲನೆ :

ಕುಮಾರಸ್ವಾಮಿ ಅವರ ಕನಸಿನ ಕೂಸಾದ ರಾಜೀವ್‌ಗಾಂಧಿ ಆರೋಗ್ಯ ವಿವಿ ಕಾಮಗಾರಿಗೆ ಕೂಡಲೆ ಚಾಲನೆ ದೊರೆಯಲಿದೆ. ಅದಕ್ಕಾಗಿ ಹೆಚ್ಚು ಗಮನ ಹರಿಸಲಾಗಿದೆ . ಇದೇ ವೇಳೆ ಉಚಿತ ನಿವೇಶನಕ್ಕಾಗಿ ಜಾಗ ಗುರುತಿಸಲಾಗಿದ್ದು, 3000 ನಿವೇಶನ 5000 ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಲು ಸಿದ್ದತೆ ನಡೆದಿದೆ ಎಂದರು.

ನಗರಸಭೆಗೆ ಸೇರಿಸಲು ಮನವಿ:

ಕೆಪಿಸಿಸಿ ಕಾರ್ಯದರ್ಶಿ ಸೈಯದ್‌ಜಿಯಾಯುಲ್ಲಾ ಮಾತನಾಡಿ, ಬೀಡಿ ಕಾಲೋನಿಯ 489 ಮನೆಗಳನ್ನು ರಾಜೀವ್‌ ಗಾಂಧಿ ವಸತಿ ನಿಗಮದಿಂದ ನಗರಸಭೆ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಮನವಿ ಮಾಡಿದರು.,

ಎಪಿಎಂಸಿ ಕಾರ್ಯಕ್ರಮ:

ನಗರದ ಎಪಿಎಂಸಿಯ ರೈತ ಭವನ ಉದ್ಘಾಟನೆ ಮತ್ತು ಆರ್‌ಕೆವಿವೈ ಯೋಜನೆಯಡಿ ನಿರ್ಮಿಸಲಾದ ಹರಾಜು ಮಾರುಕಟ್ಟೆ ಉದ್ಘಾಟನೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಿರ್ದೇಶಕರು ಎಪಿಎಂಸಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.ಎಪಿಎಂಸಿ ಉಪಾಧ್ಯಕ್ಷ ಮಲ್ಲೇಶ, ಮಾಜಿ ಅಧ್ಯಕ್ಷ ಪುಟ್ಟರಾಮಯ್ಯ, ನಿರ್ದೇಶಕರಾದ ಶಿವಕುಮಾರ, ವೆಂಕಟರಂಗಯ್ಯ, ಪುಟ್ಟಮಾರೇಗೌಡ, ರಮೇಶ ಇತರರು ಇದ್ದರು.

ರೇಷ್ಮೆ ಮಾರುಕಟ್ಟೆ ಅವ್ಯವಸ್ಥೆ ವಿರುದ್ಧ ದೂರು:

ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ರೈತರ ನಿಯೋಗ, ಸರಕಾರಿ ರೇಷ್ಮೆ ಗೂಡುಗಳ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯ ಬಗ್ಗೆ ದೂರು ನೀಡಿದರು.

ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾರುಬಾರು ಹೆಚ್ಚಾಗಿದ್ದರು. ಅಧಿಕಾರಿಗಳೇ ದಲ್ಲಾಳಿಗಳೊಂದಿಗೆ ಸೇರಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ ಪಾಸ್‌ಬುಕ್‌ ತಂದಿರದ ರೈತನಿಗೆ ರೇಷ್ಮೆ ಹರಾಜಿಗೆ ಅವಕಾಶ ನೀಡಿಲ್ಲ. ಇದಕ್ಕೆ ರೇಷ್ಮೆ ಗೂಡು ಇಲಾಖೆಯ ಉಪ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡ ತುಂಬೇನಹಳ್ಳಿ ಶಿವಕುಮಾರ್‌ ನೇತೃತ್ವದಲ್ಲಿ ಕೆಲ ರೈತರು ಶಾಸಕರನ್ನು ಒತ್ತಾಯಿಸಿದರು.

ನಿರಾಶ್ರಿತರ ಭೇಟಿ :

ನಗರದ ರೈಲ್ವೆ ಹಳಿಯ ಬಳಿ ಮನೆ ಕಳೆದುಕೊಂಡ ನಿರಾಶ್ರಿತರನ್ನು ಭೇಟಿ ಮಾಡಿದ ಶಾಸಕರು ಅವರೊಂದಿಗೆ ಚರ್ಚೆ ನಡೆಸಿದರು. ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ, ನಿರಾಶ್ರಿತರಿಗೆ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಮಧ್ಯಾಹ್ನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

-----

ನನ್ನ ಕ್ಷೇತ್ರದಲ್ಲಿ ಬೃಹತ್‌ ಮಾವು ಮಂಡಿ ನಿರ್ಮಿಸಲು, ರೇಷ್ಮೆಗೆ ಯೋಗ್ಯ ಬೆಂಬಲ ಬೆಲೆ ಕೊಡಿಸಲು ಮತ್ತು ಸುಸಜ್ಜಿತ ಬೃಹತ್‌ ಮಾರುಕಟ್ಟೆ ನಿರ್ಮಿಸಿ, ಅಲ್ಲಿಯೇ ವ್ಯಾಪಾರಸ್ಥರಿಗೆ ವಹಿವಾಟು ಮಾಡಲು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಅನಿತಾಕುಮಾರಸ್ವಾಮಿ, ಶಾಸಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ