ಆ್ಯಪ್ನಗರ

ಆಧಾರ್‌ಗಾಗಿ ನಿತ್ಯ ಪರದಾಟ, ತಪ್ಪದ ಗೋಳಾಟ

ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ತಾಲೂಕು ಕಚೇರಿಗಳ ಮುಂದೆ ನೋಟು ಅಮಾನ್ಯೀಕರಣದ ಸಂದರ್ಭದ ಚಿತ್ರಣ ಮತ್ತೆ ಮರುಕಳಿಸಿದ್ದು, ಜನ ಸಾಮಾನ್ಯರು ಆಧಾರ್‌ ತಿದ್ದುಪಡಿ ಮಾಡಿಸಲು ಹೋಗಿ ಹೈರಾಣಾಗುತ್ತಿದ್ದಾರೆ.

Vijaya Karnataka 6 Jul 2019, 5:00 am
*ಆರ್‌.ಶ್ರೀಧರ್‌ ರಾಮನಗರ
Vijaya Karnataka Web everlasting paradox for aadhaar
ಆಧಾರ್‌ಗಾಗಿ ನಿತ್ಯ ಪರದಾಟ, ತಪ್ಪದ ಗೋಳಾಟ


ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ತಾಲೂಕು ಕಚೇರಿಗಳ ಮುಂದೆ ನೋಟು ಅಮಾನ್ಯೀಕರಣದ ಸಂದರ್ಭದ ಚಿತ್ರಣ ಮತ್ತೆ ಮರುಕಳಿಸಿದ್ದು, ಜನ ಸಾಮಾನ್ಯರು ಆಧಾರ್‌ ತಿದ್ದುಪಡಿ ಮಾಡಿಸಲು ಹೋಗಿ ಹೈರಾಣಾಗುತ್ತಿದ್ದಾರೆ.

ಆಧಾರ್‌ ನೋಂದಣಿ ಕೇಂದ್ರಗಳಲ್ಲಿ ನೌಕರರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಕೆಲಸಕ್ಕೆ ಮೀಸಲಿಟ್ಟರೂ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ.

ದಿನಕ್ಕೊಂದು ನೀತಿ, ಸಿಬ್ಬಂದಿ ಕೊರತೆ:
ಸರಕಾರದ ಬದಲಾಗುತ್ತಿರುವ ನೀತಿ, ಕೇಂದ್ರಗಳ ಕೊರತೆ, ಬೆರಳೆಣಿಕೆ ಸಿಬ್ಬಂದಿ ಮತ್ತಿತರ ಸಮಸ್ಯೆಗಳಿಂದಾಗಿ ಆಧಾರ್‌ ಪಡೆಯುವುದೇ ಹಲವರಿಗೆ ಒಂದು ಶಿಕ್ಷೆಯಾಗಿ ಪರಿಣಮಿಸಿದೆ. ದಿನವಿಡೀ ಕಾದರೂ ಆಧಾರ್‌ ಹೋಗಲಿ, ಅದರ ನೋಂದಣಿಗಾಗಿ ಟೋಕನ್‌ ಪಡೆಯಲೂ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಆಧಾರ್‌ ಇಲ್ಲದಿದ್ದರೆ ಸೌಲಭ್ಯ ಇಲ್ಲ ಎಂದು ಸರಕಾರವೇ ಆದೇಶ ಹೊರಡಿಸಿದ್ದು, ಜನರು ಪರದಾಡುವಂತಾಗಿದೆ.

ನಿತ್ಯ ರಂಪಾಟ:
ಆಧಾರ್‌ ನೋಂದಣಿ ಕೇಂದ್ರಗಳು ಹೊಡೆದಾಟ, ಬೈದಾಟದ ಕೇಂದ್ರವಾಗಿ ಮಾರ್ಪಡುತ್ತಿವೆ. ತಾಳ್ಮೆ ಕಳೆದುಕೊಳ್ಳುತ್ತಿರುವ ಜನರು ಅಧಿಕಾರಿ, ನೌಕರರನ್ನು ವಾಚಾಮಗೋಚರವಾಗಿ ನಿಂದಿಸುವುದು ಸರ್ವೇಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ವಿಫಲವಾದ ರಾಜ್ಯ ಸರಕಾರ, ಕೇಂದ್ರ ಸರಕಾರದತ್ತ ಕೈ ತೋರಿ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

ಕೇಂದ್ರ ಸರಕಾರಕ್ಕೆ ಪತ್ರ:
ಆಧಾರ್‌ ಪಡೆಯಲು ಜನರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿ ಹಾಗೂ ಅದಕ್ಕೆ ಪರಿಹಾರ ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಆಧಾರ್‌ ಕೇಂದ್ರಗಳನ್ನು ಗ್ರಾಮಪಂಚಾಯಿತಿ ವ್ಯಾಪ್ತಿಗೆ ವಿಸ್ತರಿಸುವಂತೆ ಕೋರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರ ಪತ್ರ ಬರೆದಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದಾರೆ.

ಎಲ್ಲೆಡೆ ಒಂದೇ ಗೋಳು:
ನಗರಗಳಲ್ಲಿ ಮಾತ್ರವಲ್ಲ, ತಾಲೂಕು ಕೇಂದ್ರಗಳಲ್ಲೂ ಒಂದೇ ಗೋಳು. ಆಧಾರ್‌ ಕೇಂದ್ರಗಳಲ್ಲಿ ದಿನಕ್ಕೆ ಕೇವಲ 20ರಿಂದ 25 ಮಂದಿಗೆ ಮಾತ್ರ ಟೋಕನ್‌ ನೀಡಲಾಗುತ್ತಿದೆ. ಅದೂ ಎಷ್ಟೋ ದಿನಗಳ ಹಿಂದೆ ನೀಡಿದ ಟೋಕನ್‌. ಟೋಕನ್‌ ಪಡೆದ ದಿನ ಸರ್ವರ್‌ ಅಥವಾ ಇಂಟರ್‌ನೆಟ್‌ ಸಮಸ್ಯೆ ಉಂಟಾದರೆ ಮುಗಿದೇ ಹೋಯಿತು.ಮತ್ತೆ ಟೋಕನ್‌ ಪಡೆದು, ತಮ್ಮ ಸರದಿಗಾಗಿ ಕಾಯಬೇಕು. ಕೂಲಿ ಕಾರ್ಮಿಕರು, ದಿನಗೂಲಿ ನೌಕರರ ಗೋಳಂತೂ ಹೇಳಿ ತೀರದು.

ಉದಾಸೀನ ಮಾಡಿದ್ದೇ ಮುಳುವಾಗಿದೆ:
ಆಧಾರ್‌ ಜಾರಿಗೆ ಬಂದ ಆರಂಭದ ದಿನಗಳಲ್ಲಿ ಸಾಕಷ್ಟು ಸೌಲಭ್ಯ ಇತ್ತು. ಎಲ್ಲರೂ ಸುಲಭವಾಗಿ ಆಧಾರ್‌ ಮಾಡಿಸಿಕೊಳ್ಳಬಹುದಿತ್ತು. ಆಗ ಕಾರ್ಡ್‌ ಮಾಡಿಸಿಕೊಳ್ಳಲು ಉದಾಸೀನ ಮಾಡಿದವರು ಈಗ ಪಾಡು ಪಡುವಂತಾಗಿದೆ. ಅನರ್ಹರು ಕಾರ್ಡ್‌ ಮಾಡಿಸಿಕೊಳ್ಳುವುದು ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಡ್‌ ನೀಡಿಕೆ ನಿಯಮವನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಆಧಾರ್‌ ಪಡೆಯುವುದು ಕಷ್ಟವಾಗಿದೆ. ಈಗ ಪಡಿತರ ಪಡೆಯಲು ಕೆವೈಸಿ ಪಡೆಯಬೇಕಿದ್ದು, ಇದಕ್ಕೆ ಆಧಾರ್‌ ಕಡ್ಡಾಯವಾಗಿದೆ. ಜೂ.30 ಕೊನೆಯ ದಿನವಾಗಿತ್ತು. ಇದೀಗ ಇನ್ನೂ ಒಂದು ತಿಂಗಳು ಗಡುವು ವಿಸ್ತರಿಸಲಾಗಿದೆ.

ತಿದ್ದುಪಡಿಯೂ ಕಷ್ಟ:
ಆಧಾರ್‌ ಪಡೆದವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರ್ಡ್‌ನಲ್ಲಿರುವ ದೋಷ ಸರಿಪಡಿಸಲು ತಿದ್ದುಪಡಿ ಅನಿವಾರ್ಯವಾಗಿದ್ದು, ಅದಕ್ಕೆ ಕಷ್ಟಪಡುವಂತಾಗಿದೆ.


ಆಧಾರ್‌ ತುರ್ತಾಗಿ ಏಕೆ ಬೇಕು?
ಬಿಪಿಎಲ್‌ ಕಾರ್ಡ್‌ ಪಡೆಯಲು ,ಬಿಪಿಎಲ್‌ ಕಾರ್ಡ್‌ ಸೌಲಭ್ಯಕ್ಕೆ ,ನ್ಯಾಯಬೆಲೆ ಅಂಗಡಿ ಪಡಿತರಕ್ಕೆ ,ಮಾಶಾಸನ ಪಡೆಯಲು ,ಕಿಸಾನ್‌ ಸಮ್ಮಾನ್‌ ನಿಧಿಗೆ , ಸಾಲ ಸೌಲಭ್ಯ ಪಡೆಯಲು ,ಬೆಳೆ ವಿಮೆ ಪಡೆಯಲು ,ಸರಕಾರದಿಂದ ವಿವಿಧ ಪರಿಹಾರ ಪಡೆಯಲು ,ಬಸ್‌ ಪಾಸ್‌ ಸೌಲಭ್ಯ ,ವಿವಿಧ ವಿದ್ಯಾರ್ಥಿ ವೇತನ ,ನೂತನ ಅನಿಲ ಸಂಪರ್ಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ