ಆ್ಯಪ್ನಗರ

ಜನ ಮದ್ಯ ಬೇಕಂತಿದ್ದಾರಲ್ಲ ಎಂಬ ಪ್ರಶ್ನೆಗೆ ಹೆಚ್‌ಡಿಕೆ ನಕ್ಕು ಹೇಳಿದ್ದಿಷ್ಟು...

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸ್ವಂತ ಜಿಲ್ಲೆ ರಾಮನಗರಕ್ಕೆ ಭೇಟಿ ನೀಡಿ ಕೊರೊನಾ ವೈರಸ್ ಕುರಿತು ಕೈಗೊಳ್ಳಲಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾರಕ ವೈರಾಣುವಿನ ವಿರುದ್ಧ ಹೋರಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಮೆಚ್ಚುಗೆಯ ಮಾತುಗಳನ್ನಾಡಿದರು.

Vijaya Karnataka Web 31 Mar 2020, 2:31 pm
ರಾಮನಗರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಮದ್ಯ ಪ್ರಿಯರು ಒದ್ದಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ನಗುಮುಖದಿಂದಲೇ ಮರುಪ್ರಶ್ನಿಸಿದ ಘಟನೆ ರಾಮನಗರದಲ್ಲಿ ನಡೆದಿದೆ.
Vijaya Karnataka Web Bengaluru: Karnataka Chief Minister HD Kumaraswamy arrives to attend the Assembl...
ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಇಂದು ರಾಮನಗರದಲ್ಲಿ ಪರಿಶೀಲನೆ ನಡೆಸಿದರು.


ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಿತಿಗತಿ ಕುರಿತು ಅವಲೋಕನ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಕೆಲವರ ಒತ್ತಾಯದ ಕುರಿತು ತೂರಿ ಬಂದ ಪ್ರಶ್ನೆಗೆ, ನಿಮ್ಮ ಅಭಿಪ್ರಾಯವೇನು ಎಂದು ಮರುಪ್ರಶ್ನಿಸಿ ನಕ್ಕರು.

ಕೆಲವರು ಮದ್ಯದ ದಾಸರಾಗಿದ್ದು, ಏಕಾಎಕಿ ಮದ್ಯ ಸಿಗದೇ ಪರದಾಡುತ್ತಿದ್ದಾರೆ. ಅಲ್ಲದೇ ಇದರಿಂದ ಅವರ ದೇಹದ ಮೇಲೂ ವ್ಯತಿರಿಕ್ತ ಪರಿಣಾಮಗಳಾಗಿವೆ ಎಂದು ಹೆಚ್‌ಡಿಕೆ ಅಭಿಪ್ರಾಯಪಟ್ಟರು. ಈ ವೇಳೆ ಮಧ್ಯಪ್ರವೇಶಿಸಿದ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ, ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಮದ್ಯದ ದಾಸರಾಗಿರುವವರನ್ನು ಸರ್ಕಾರ ಕೌನ್ಸಿಲಿಂಗ್ ಮಾಡುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಿರುವುದಾಗಿ ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಈ ವರೆಗೆ 200ಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದು, ಎಲ್ಲರ ಆರೋಗ್ಯದ ಕುರಿತು ತೀವ್ರ ನಿಗಾ ಇರಿಸಲಾಗಿದೆ ಎಂದು ಮಾಜಿ ಸಿಎಂ ಹೇಳಿದರು.

ಆರೋಗ್ಯ ಸಚಿವರ ಭೇಟಿಯ ಮರುದಿನದಿಂದಲೇ ಕರ್ತವ್ಯಕ್ಕೆ ವೈದ್ಯರ ಚಕ್ಕರ್!

ಜಿಲ್ಲಾ ಆಸ್ಪತ್ರೆಯಲ್ಲಿ28 ವೈದ್ಯರ ಬದಲು ಕೇವಲ 8 ವೈದ್ಯರು ಕೆಲಸ ಮಾಡ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಸದ್ಯ 26 ವೈದ್ಯಾಧಿಕಾರಿಗಳು ಕರ್ತವ್ಯದಲ್ಲಿದ್ದು, 4 ವೈದ್ಯರ ಕೊರತೆ ಇದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಒಟ್ಟು ಮೂರು ಶಿಫ್ಟ್‌ಗಳಲ್ಲಿ ಈ ವೈದ್ಯರ ತಂಡ ಕೆಲಸ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದು ಎಂದು ಹೆಚ್‌ಡಿಕೆ ಭರವಸೆ ನೀಡಿದರು.

ಇನ್ನು ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಂದ ಕೂಲಿ ಕಾರ್ಮಿಕರಿಗೆ ನೆರವಾಗಲು ಸಭೆ ಕರೆಯಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ಅಲ್ಲದೇ ಜಿಲ್ಲೆಯ ರೈತರು ಹಾಗೂ ರೇಷ್ಮೆ ಗೂಡು ಬೆಳೆಗಾರರ ಸಮಸ್ಯೆಗಳತ್ತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆದಿದ್ದೇನೆ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದರು.

ಎಲ್ಲೊಯ್ತು ಸಾಮಾಜಿಕ ಅಂತರ..? ಒಂದೇ ಕಾರಿನಲ್ಲಿ 6 ವೈದ್ಯರ ಪ್ರಯಾಣಕ್ಕೆ ಡಿವೈಎಸ್‌ಪಿ ಗರಂ

ರಾಮನಗರ ಮಾತ್ರವಲ್ಲದೇ ಇಡೀ ರಾಜ್ಯದ ಹಾರ್ಟಿಕಲ್ಚರ್ ರೈತರ ನೆರವಿಗೆ ಧಾವಿಸುವಂತೆ ಸರ್ಕಾಋದ ಮುಖ್ಯ ಕಾರ್ಯದರ್ಶಿಗೆ ತಾವು ಈಗಾಗಲೇ ಪತ್ರ ಬರೆದಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ