ಆ್ಯಪ್ನಗರ

ನೋಂದಣಿಯಾಗದ ಸಂಸ್ಥೆಗೆ ಅನುದಾನ ಶಿಫಾರಸು ನೀಡುವುದು ವಂಚನೆಯಲ್ಲವೆ?

ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆಶಿವಕುಮಾರ್‌ ಅವರು ಕೆಲ ಸಂಘ ಸಂಸ್ಥೆಗಳು ಕೇವಲ ಲೆಟರ್‌ಹೆಡ್‌ಗೆ ಸೀಮಿತವಾಗಿವೆ...

Vijaya Karnataka 7 Jul 2019, 5:00 am
ಚನ್ನಪಟ್ಟಣ: ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೆಲ ಸಂಘ ಸಂಸ್ಥೆಗಳು ಕೇವಲ ಲೆಟರ್‌ಹೆಡ್‌ಗೆ ಸೀಮಿತವಾಗಿವೆ. ನೋಂದಣಿಯಿಲ್ಲದೆ ಅನುದಾನ ಪಡೆದು ಅಕ್ರಮವೆಸಗಿವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರ ಸಹೋದರ ಡಿ.ಕೆ.ಸುರೇಶ್‌ ಅವರು ನೋಂದಣಿಯಾಗದ ಲೆಟರ್‌ಹೆಡ್‌ ಸಂಸ್ಥೆಗೆ ಅನುದಾನ ನೀಡುವಂತೆ ಶಿಫಾರಸು ನೀಡಿರುವುದು ವಂಚನೆಯಲ್ಲವೇ ಎಂದು ರಾಮನಗರ ಜಿಲ್ಲಾ ಕಲಾವಿದರ ವೇದಿಕೆ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
Vijaya Karnataka Web grants to an unregistered organization isnt cheating recommended
ನೋಂದಣಿಯಾಗದ ಸಂಸ್ಥೆಗೆ ಅನುದಾನ ಶಿಫಾರಸು ನೀಡುವುದು ವಂಚನೆಯಲ್ಲವೆ?


ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವೇದಿಕೆ ಪದಾಧಿಕಾರಿಗಳು ಮಾಹಿತಿ ನೀಡಿ ಮಾತನಾಡಿ, ''ಡಿ.ಕೆ.ಶಿವಕುಮಾರ್‌ ಸಚಿವರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಮಾಡಲು ನೂತನ ಕಾರ್ಯಕ್ರಮ ರೂಪಿಸಲು ಮುಂದಾಗಿರುವುದು ಶ್ಲಾಘನೀಯ, ಆದರೆ ಸಂಸ್ಥೆಗಳ ವಿರುದ್ಧ ಮಾತನ್ನಾಡಿ ಗುಬ್ಬಚ್ಚಿಯ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸ ಕೈ ಬಿಡಬೇಕು. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕರ್ನಾಟಕ ಸಂಸ್ಕೃತಿ ಹೊಸ ನಿಯಮಾವಳಿ ಜಾರಿಗೆ ತಂದಿದ್ದು, ಸಾಂಸ್ಕೃತಿಕ ಪರಂಪರೆಯ ಮೇಲೆ ಪ್ರಭುತ್ವಧೋರಣೆ ಹೇರಿಕೆ ಮಾಡಿ, ಕಲಾವಿದರೂ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ರಾಜಕಾರಣಿಗಳ ಮನೆ ಬಾಗಿಲಿಗೆ ಅಲೆಯುವಂತೆ ಮಾಡಿಕೊಂಡು ಸ್ವಪಕ್ಷ ಗಳ ಗುಲಾಮಗಿರಿಗೆ ಪರೋಕ್ಷ ವಾಗಿ ಆಹ್ವಾನಿಸುವ ಪ್ರಯತ್ನದ ಕುಟಿಲತೆ ಯತ್ನ ಮಾಡಬಾರದು,'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕತೆ ಮೆರೆದರೆ ಸೂಕ್ತ: ''ಸಚಿವರು ಹೊಸ ನಿಯಮಾವಳಿ ತಂದು ಸಂಘ ಸಂಸ್ಥೆಗಳಿಗೆ 20 ಕೋಟಿ ಅನುದಾನ ಹಂಚಿ, ಇಷ್ಟೆಲ್ಲ ಶಿಷ್ಟಾಚಾರ ಮತ್ತು ಪ್ರಗತಿ ಸಾಧಿಸುವುದಾದರೆ ಸಾವಿರಾರು ಕೋಟಿ ಅನುದಾನವಿರುವ ಎಲ್ಲ ಸರಕಾರಿ ಇಲಾಖೆಯಲ್ಲಿ ಇದೇ ರೀತಿ ಸರಕಾರೀಕರಣ ನಡೆಯಬೇಕಲ್ಲವೇ ಚಿಕ್ಕ ಇಲಾಖೆ ಸಿಬ್ಬಂದಿ ವೇತನ, ಯೋಜನೇತರ ವೆಚ್ಚ, ಇನ್ನಿತರ ಒಳಗೊಂಡಂತೆ 450 ಕೋಟಿ ಕಡಿಮೆ ಬಜೆಟ್‌. ಇದರಲ್ಲಿ ಕೇವಲ 20 ಕೋಟಿ ಅನುದಾನದಲ್ಲಿ ಸಾಮಾನ್ಯ ಮತ್ತು ವಿಶೇಷ ಘಟಕ ಯೋಜನೆಯಿಂದ 6.500 ಸಂಸ್ಥೆಗಳಿಗೆ ಹಂಚಲಾಗುತ್ತದೆ. ಇಲಾಖೆಯಲ್ಲಿ ಸುಧಾರಣೆ, ಬದಲಾವಣೆ ಮಾಡುವ ಸಚಿವರು ಅನುದಾನವನ್ನು ಕನಿಷ್ಠ ಸಾವಿರ ಕೋಟಿಗೆ ಗಾತ್ರ ಹೆಚ್ಚಿಸಿ, ತಮ್ಮ ಪಾರದರ್ಶಕತೆ ಮೆರೆದರೆ ಸೂಕ್ತ ಎಂಬದು ನಾಡಿನ ಎಲ್ಲ ಕಲಾ ಸಂಘಸಂಸ್ಥೆಯ ಮನೋಭಿಪ್ರಾಯ,'' ಎಂದು ತಿಳಿಸಿದರು.

ನೋಟಿಸ್‌ ಜಾರಿ ಮಾಡಿ, ಕಾರಣ ಕೇಳಿ: ''ಕೆಲ ಸಂಸ್ಥೆಗಳು ನಿಯಮ ಪಾಲಿಸಿಲ್ಲ ಎನ್ನುತ್ತಾರೆ. ಅಲ್ಲದೆ ಭ್ರಷ್ಟಾಚಾರ ನಡೆಸಿರುವುದಾಗಿದ್ದರೆ ಅದನ್ನು ಕೇವಲ ಮಾತಿನಲ್ಲಿ ಹೇಳುವ ಬದಲು ನೋಟಿಸ್‌ ಜಾರಿ ಮಾಡಿ, ಸೂಕ್ತ ಕಾರಣ ಮತ್ತು ಅಗತ್ಯ ದಾಖಲಾತಿ ಸಲ್ಲಿಸಲು ಸಮಯಾವಕಾಶ ನೀಡಿರಿ, ಗಡುವು ಮೀರಿ ಅಗತ್ಯ ದಾಖಲಾತಿ ನೀಡದ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ, ನಿಯಮಾನುಸಾರ ಅರ್ಜಿ ಸಲ್ಲಿಸಿರುವ ಮಿಕ್ಕ ಸಂಸ್ಥೆಗಳಿಗೆ ಕೂಡಲೇ ಅನುದಾನ ನೀಡುವುದು ಅತ್ಯಂತ ಶ್ಲಾಘನೀಯ ನಡೆ. ಅದನ್ನು ಬಿಟ್ಟು ಇಲಾಖೆಯಲ್ಲಿ ಅಧಿಕಾರಿಗಳು, ಜಾನಪದ ತಜ್ಞರು, ಅಕಾಡೆಮಿ ಸದಸ್ಯರು, ಕಲಾ ಸಂಘಟಕರು ಸಂಬಂಧಿಸಿದ ಪರಿಣಿತರ ಸಭೆ ಮಾಡಿ ಚರ್ಚಿಸಿ, ಸಚಿವರು ಸಂಘ ಸಂಸ್ಥೆ ಕುರಿತು ಅಭಿಪ್ರಾಯ ಮತ್ತು ಆರೋಪ ತಿಳಿಸಬೇಕಿತ್ತು. ಇದೆಲ್ಲ ಬಿಟ್ಟು ಏಕಾಏಕಿ ಇಲಾಖೆಯ ನಿಯಮ ಬದಲಿಸಿದರೆ ಇದರಿಂದ ಚಟುವಟಿಕೆ ನಡೆಸಿರುವ ಸಂಸ್ಥೆಗಳಿಗೆ ಅನ್ಯಾಯ, ಅವಮಾನ ಮಾಡಿದಂತಾಗುತ್ತದೆ,'' ಎಂದು ಕಿಡಿಕಾರಿದ್ದಾರೆ.

ಅನುದಾನ ಬಳಕೆ ಡಿಸಿಗೆ ವಹಿಸಿ: ''ಕೆಲ ಇಲಾಖೆ ಕಾಮಗಾರಿಗಳಲ್ಲಿ ನಡೆಯುವ ಲೋಪ ಮತ್ತು ಕಳಪೆ ಬಗ್ಗೆ ನೂರಾರು ದೂರುಗಳು ಪ್ರತಿ ದಿನ ಕೇಳಿಬರುತ್ತಿವೆ. ಜಲಸಂಪನ್ಮೂಲ ಇಲಾಖೆಯಲ್ಲಿನ ಕೋಟಿಯಷ್ಟು ಅನುದಾನ ಬಳಕೆ ಮಾಡುವಾಗ ಟೆಂಡರ್‌ ಪ್ರಕ್ರಿಯೆ ಮತ್ತು ಗುತ್ತಿಗೆದಾರರ ಮೂಲಕ ಏಕೆ ಸರಕಾರಿ ಹಣ ಮತ್ತು ಅನುದಾನ ಖರ್ಚುಮಾಡುತ್ತೀರಾ? ಅವ್ಯವಹಾರ ಮುಕ್ತವಾಗಬೇಕಲ್ಲವೆ? ಆದ್ದರಿಂದ ಆ ಇಲಾಖೆಯ ಅನುದಾನ ಬಳಕೆಯನ್ನು ಡಿಸಿಗೆ ವಹಿಸುವುದು ಸೂಕ್ತವಲ್ಲವೇ? ಈ ನಿಯಮವನ್ನು ಏಕೆ ಶಿಘ್ರವಾಗಿ ಜಾರಿ ಮಾಡಬಾರದು. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಬಿಡುಗಡೆ ಮಾಡುವಂತೆ ಹಿಂದಿನ ಸಚಿವರಿಗೆ ಡಿ.ಕೆ.ಶಿ ಶಿಫಾರಸು ಪತ್ರ ಬರೆದಿದ್ದು, ಆಗ ಸಂಸ್ಥೆಗಳು ಉತ್ತಮವಾಗಿದ್ದವೆ. ಈಗ ತಮ್ಮ ಅವಧಿಯಲ್ಲಿ ಅದೇ ಸಂಸ್ಥೆಗಳು ಭ್ರಷ್ಟಾಚಾರ ನಡೆಸಿವೆ? ನಿಯಮಾನುಸಾರವಿಲ್ಲದ ಈ ತಾರತಮ್ಯವೇಕೆ? ದಲಿತ, ಬಡವ, ಹಿಂದುಳಿದವರನ್ನು ಹತ್ತಿಕ್ಕುವ ಪ್ರಯತ್ನ? ಸಂಸ್ಥೆಗಳು ಭ್ರಷ್ಟಾಚಾರ ನಡೆಸಿದ್ದರೆ, ಅಂತಹ ಸಂಸ್ಥೆಗಳಿಗೆ ಇಷ್ಟು ವರ್ಷ ಅನುದಾನ ನೀಡಿರುವ ಅಧಿಕಾರಿಗಳು ಭ್ರಷ್ಟರಲ್ಲವೆ? ಇದಕ್ಕೆ ಅವರು ಶಾಮೀಲಾಗಿಲ್ಲವೆ? ಮೊದಲಿಗೆ ಅವರ ಮೇಲೆ ತಾವು ವಹಿಸುವ ಕ್ರಮವೇನು?,'' ಎಂದು ಪ್ರಶ್ನಿಸಿದ್ದಾರೆ.

''ಸಿಎಂ ಆದೇಶ ಪತ್ರ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಿದ್ದರು ಸಿಎಂರನ್ನು ನಾನು ತುಂಬಾ ನೋಡಿದ್ದು, ಲೆಕ್ಕಕ್ಕಿಲ್ಲ ಎಂದು ಇಲಾಖಾ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿರುವ ಡಿಕೆಶಿ ಅವರು ಖಾಸಗಿ ವ್ಯಕ್ತಿಗಳ ಟೆಂಡರ್‌ ಪ್ರಕ್ರಿಯೆ ಹಾಗೂ ಕಾಂಟ್ರ್ಯಾಕ್ಟ್ ಪದ್ಧತಿ ನಿಲ್ಲಿಸಿ ಸರಕಾರೀಕರಣಗೊಳಿಸಬೇಕು,'' ಎಂದು ಡಿ.ಕೆ.ಶಿವಕುಮಾರ್‌ ಮತ್ತು ಸಿ.ಎಂ.ರನ್ನು ಆಗ್ರಹಿಸಿದರು.

ಕೋಟಿ ಕೋಟಿ ಅನುದಾನ ನಿಲ್ಲಿಸಿ: ಕೋಟಿ ಕೋಟಿ ಅನುದಾನ ಪಡೆಯುತ್ತಿರುವ ಕನ್ನಡಪರ ಸಂಘಟನೆಗಳು ಮತ್ತು ವಾಟಾಳ್‌, ಜಾನಪದಲೋಕ, ಆದಿಚುಂಚನಗಿರಿ ಮಠ, ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡುತ್ತಿರುವ ಕೋಟಿ ಕೋಟಿ ಅನುದಾನ ಏಕೆ ನಿಲ್ಲಿಸಬಾರದು? ಆ ವಿಚಾರದಲ್ಲಿ ನ್ಯಾಯ ಸಿಗದ ಪಕ್ಷ ದಲ್ಲಿ ಕಾನೂನು ಹೋರಾಟಕ್ಕೆ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಸಭೆಯಲ್ಲಿ ಜಿಲ್ಲಾ ಕಲಾವಿದರ ವೇದಿಕೆಯ ಪದಾಧಿಕಾರಿಗಳ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ