ಆ್ಯಪ್ನಗರ

ಮಹಾ ಶಿವರಾತ್ರಿಯಂದು ಅದ್ಧೂರಿ ದೀಪೋತ್ಸವ

ಕುದೂರಿನ ಸರಕಾರಿ ಶಾಲಾವರಣದ ಗಣೇಶನ ಗುಡಿಯಲ್ಲಿ ಶ್ರೀವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ವಿವಿಧ ದೇವತಾ ಕಾರ್ಯಗಳು ಹಾಗೂ ಅದ್ಧೂರಿ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು...

Vijaya Karnataka 6 Mar 2019, 5:00 am
ಕುದೂರು: ಕುದೂರಿನ ಸರಕಾರಿ ಶಾಲಾವರಣದ ಗಣೇಶನ ಗುಡಿಯಲ್ಲಿ ಶ್ರೀವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ವಿವಿಧ ದೇವತಾ ಕಾರ್ಯಗಳು ಹಾಗೂ ಅದ್ಧೂರಿ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
Vijaya Karnataka Web huge bonfire on maha shivaratri
ಮಹಾ ಶಿವರಾತ್ರಿಯಂದು ಅದ್ಧೂರಿ ದೀಪೋತ್ಸವ


ದೇವಾಲಯದಲ್ಲಿ ಬೆಳಗ್ಗೆಯಿಂದಲೂ ವಿವಿಧ ದೇವತಾ ಕಾರ್ಯಗಳು ನೆರವೇರಿದವು. ನವಗ್ರಹ ಹೋಮ, ಗಣ ಹೋಮ, ರುದ್ರ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 7 ಗಂಟೆಗೆ ಅದ್ದೂರಿ ದೀಪೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಶ್ರೀವಿದ್ಯಾ ಗಣಪತಿ ಸೇವಾ ಸಮಿತಿಯ ಸತ್ಯನಾರಾಯಣ ಅವರು ಪ್ರತಿಕ್ರಿಯಿಸಿ, ''ದೇವಾಲಯದಲ್ಲಿ ಕಳೆದ ಅನೇಕ ವರ್ಷದಿಂದ ಸತತವಾಗಿ ದೀಪೋತ್ಸವವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮಹಾ ಶಿವರಾತ್ರಿಯ ಪುಣ್ಯ ದಿನದಂದು ವಿಭೂತಿ, ಬಿಲ್ವ ಪ್ರಿಯ ಈಶ್ವರನಿಗೆ ವಿಶೇಷವಾಗಿ ದೀಪಗಳನ್ನು ಹಚ್ಚಿ ಪ್ರಾರ್ಥನೆಯನ್ನು ಸಲ್ಲಿಸುವುದು ಇಲ್ಲಿನ ವಾಡಿಕೆ. ಪ್ರತೀ ವರ್ಷದ ಆಚರಣೆ ಹಿಂದಿನ ವರ್ಷಕ್ಕಿಂತ ವೈಭವವಾಗಿ ನಡೆಯುತ್ತಿದೆ ಇದಕ್ಕೆ ಸೇವಾ ಸಮಿತಿಯ ಸದಸ್ಯರು ಕಾರಣಕರ್ತರು,'' ಎಂದರು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಇನ್ನಿತರ ಸದಸ್ಯರು, ಸಾವಿರಾರು ಭಕ್ತರು, ಗ್ರಾಮಸ್ಥರು ಹಾಜರಿದ್ದರು.

ಪಂಚಲಿಂಗ ದರ್ಶನ

ಮಹಾಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲೇ ಪಂಚಲಿಂಗ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುಟ್ಟ ಗಣಪನ ಮೂರ್ತಿ ಸುತ್ತಲೂ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿ ರುದ್ರ ಹೋಮ, ಅಭಿಷೇಕ ಹಾಗೂ ನಾನಾ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು. ಕುದೂರು ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ತಂಡೋಪತಂಡವಾಗಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದರು. ಪಂಚಲಿಂಗಗಳ ಮಧ್ಯೆ ಪುಟ್ಟ ಗಣೇಶ ಮೂರ್ತಿ ಎದ್ದುಬರುವಂತಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಸೇವೆಗಳು ನೆರವೇರಿದವು.

ಕಣ್ಮನ ಸೆಳೆದ ಅಲಂಕಾರ

ದೇವಾಲಯ, ದೇವಾಲಯ ಆವರಣ ಹಾಗೂ ಸ್ವಾಮಿಗೆ ಮಾಡಲಾದ ಅಲಂಕಾರ ವಿಶೇಷವಾಗಿತ್ತು. ಬಗೆಬಗೆಯ ಹೂಗಳಿಂದ ದೇವಾಲಯವನ್ನು ಸಿಂಗರಿಸಲಾಗಿತ್ತು. ಅಲ್ಲದೇ ಆವರಣದಲ್ಲಿ ಚಿತ್ರವಿಚಿತ್ರವಾದ ವಿದ್ಯುತ್‌ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುವಂತಿತ್ತು. ಸ್ವಾಮಿಯ ವಿಶೇಷ ಪಂಚಲಿಂಗ ಅಲಂಕಾರ ವಿಶೇಷವಾಗಿ ಭಕ್ತಾದಿಗಳ ಗಮನ ಸೆಳೆಯಿತು. ಮಹಾಶಿವರಾತ್ರಿಯ ಕಳೆ ಹೆಚ್ಚಿಸಿತ್ತು.

ದೀಪೋತ್ಸವ: ಎಲ್ಲೆಡೆ ಕಾರ್ತಿಕ ಅಮಾವಾಸ್ಯೆಯಂದು ನಡೆಯುವ ದೀಪೋತ್ಸವ ಕುದೂರು ಶಾಲಾವರಣದ ಗಣೇಶ ದೇಗುಲದಲ್ಲಿ ಮಹಾಶಿವರಾತ್ರಿಯ ಸಮಯದಲ್ಲಿ ಕಾಣಸಿಗುತ್ತದೆ. ಸೇವಾ ಸಮಿತಿಯ ವತಿಯಿಂದ ಒಂದು ವಿಶಿಷ್ಠ ಸಂಪ್ರದಾಯವನ್ನು ನೆರವೇರಿಸಿಕೊಂಡು ಬರಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಕುದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ದೀಪ ಹಚ್ಚಿ ಸ್ವಾಮಿಗೆ ಮನಸಿನ ನಿವೇದನೆ ತಿಳಿಸಿ ಪ್ರಾರ್ಥಿಸಿಕೊಳ್ಳುವುದು ವಾಡಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ