ಆ್ಯಪ್ನಗರ

ಮೊಮ್ಮಕ್ಕಳಿಗಾಗಿ ಬೇರೆಯವರ ಕ್ಷೇತ್ರ ಕಿತ್ತುಕೊಂಡಿದ್ದು ಸರಿಯಲ್ಲ: ಸಿ.ಎಂ.ಲಿಂಗಪ್ಪ

ದೋಸ್ತಿಗಳ ಸಂಬಂಧಕ್ಕೆ ಹುಳಿ ಹಿಂಡುವಂತಹ ಘಟನೆ ರಾಮನಗರದಲ್ಲಿ ನಡೆದಿದೆ. ಭಾನುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Vijaya Karnataka 25 Mar 2019, 5:00 am
ದೇವೇಗೌಡ ವಿರುದ್ಧ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ವಾಗ್ದಾಳಿ
Vijaya Karnataka Web its not okay to get someone elses field for grandchildren cm lingappa
ಮೊಮ್ಮಕ್ಕಳಿಗಾಗಿ ಬೇರೆಯವರ ಕ್ಷೇತ್ರ ಕಿತ್ತುಕೊಂಡಿದ್ದು ಸರಿಯಲ್ಲ: ಸಿ.ಎಂ.ಲಿಂಗಪ್ಪ


ರಾಮನಗರ: ದೋಸ್ತಿಗಳ ಸಂಬಂಧಕ್ಕೆ ಹುಳಿ ಹಿಂಡುವಂತಹ ಘಟನೆ ರಾಮನಗರದಲ್ಲಿ ನಡೆದಿದೆ. ಭಾನುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೊಮ್ಮಕ್ಕಳಿಗಾಗಿ ಬಲಿಗೊಟ್ಟರು:

ಎಚ್‌.ಡಿ.ದೇವೇಗೌಡರು ತಮ್ಮ ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಬೇರೆಯವರ ಕ್ಷೇತ್ರ ಕಿತ್ತುಕೊಂಡಿದ್ದು ಸರಿಯಲ್ಲ. ಹಾಸನ ಮತ್ತು ಮಂಡ್ಯವನ್ನು ಮೊಮ್ಮಕ್ಕಳಿಗೆ ಬಿಟ್ಟು ಕೊಟ್ಟು ತುಮಕೂರಿಗೆ ಬರುವ ಅಗತ್ಯ ಏನಿತ್ತು, ಅತ್ಯಂತ ಕ್ರಿಯಾಶೀಲ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್‌ ಸಿಗಬೇಕಿತ್ತು ಎಂದು ಲಿಂಗಪ್ಪ ಹೇಳಿದರು.

ಇಬ್ಬರಿಗೆ ಟಿಕೆಟ್‌ ಕೊಡುವ ಅಗತ್ಯವೇನಿತ್ತು:

ಪ್ರಜ್ವಲ್‌ ರೇವಣ್ಣ ಹಾಗೂ ನಿಖಿಲ್‌ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ‍್ಯತೆ ಏನಿತ್ತು. ಅಷ್ಟೊಂದು ಅನಿವಾರ‍್ಯವಿದ್ದರೆ ಒಬ್ಬರಿಗೆ ಲೋಕಸಭೆ ಟಿಕೆಟ್‌ ಕೊಟ್ಟು ಇನ್ನೊಬ್ಬರಿಗೆ ವಿಧಾನಸಭೆ ಟಿಕೆಟ್‌ ಕೊಡಬಹುದಿತ್ತು. ತಮ್ಮ ಸ್ವಾರ್ಥಕ್ಕಾಗಿ ಇಬ್ಬೊಬ್ಬರ ಭವಿಷ್ಯ ಬಲಿಕೊಟ್ಟರು ಎಂದು ಲಿಂಗಪ್ಪ ಕಿಡಿ ಕಾರಿದರು.

ನಾನು ನೇರ ಮನುಷ್ಯ:

ಚುನಾವಣೆ ಮುಗಿಯುವವರೆಗೂ ಸುಮ್ಮನಿರಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ ನಾನು ನೇರ ಮನುಷ್ಯ, ನನಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಮಾ.26ರಂದು ನಾಮಪತ್ರ:

ಮಾ.26ರಂದು ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇದೆಯಲ್ಲ ಎಂಬ ಪ್ರಶ್ನೆಗೆ, ರಾಹುಲ್‌ ಗಾಂಧಿ ಸ್ಪರ್ಧಿಸಿದರೆ ತುಂಬಾ ಸಂತೋಷ, ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

ಅಣ್ಣನನ್ನು ಕೇಳಿ:

ನನ್ನ ವಿರುದ್ಧ ನಿಶಾ ಅವರನ್ನು ನಿಲ್ಲಿಸಿದರೆ ನಾನು ಭಯ ಪಡುವುದಿಲ್ಲ, ಜಾತಕ, ಭವಿಷ್ಯ ನಂಬುವುದಿಲ್ಲ. ಅವುಗಳನ್ನು ನನ್ನ ಅಣ್ಣ ನೋಡಿಕೊಳ್ಳುತ್ತಾನೆ. ಅವನಿಗೆ ಜಾತಕದಲ್ಲಿ ಆಸಕ್ತಿ ಹೆಚ್ಚು. ಡೈರಿ ವಿಚಾರದ ಬಗ್ಗೆ ಈಗ ಏನೂ ಹೇಳುವುದಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಜೆಡಿಎಸ್‌ ಮತ ಖಾತ್ರಿಯಿಲ್ಲ:

ಜೆಡಿಎಸ್‌ ಪಕ್ಷದ ಮತಗಳು ಕಾಂಗ್ರೆಸ್‌ಗೆ ಬೀಳುತ್ತವೆ ಎಂಬುದು ಖಚಿತವಿದೆಯೇ ಎಂಬ ಪ್ರಶ್ನೆಗೆ, ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯ ಬಳಿ ಎಲ್ಲವೂ ತಿಳಿಯಲಿದೆ. ಅಲ್ಲಿಯ ತನಕ ಕಾಯಬೇಕು ಎಂದು ಮೌನ ಮುರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ, ಕೆಪಿಸಿಸಿ ಎಸ್ಸಿ,ಎಸ್ಟಿ ಕಾಂಗ್ರೆಸ್‌ ವಿಭಾಗದ ರಾಜ್ಯಾಧ್ಯಕ್ಷ ಜಕ್ಕಪ್ಪ, ಜೆಡಿಎಸ್‌ ಎಸ್ಸಿ, ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಆನಂದ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಮುಖಂಡರಾದ ಚೇತನ್‌ ಕುಮಾರ್‌ , ವಿ.ಎಚ್‌.ರಾಜು, ಸಿಎನ್‌ಆರ್‌ ವೆಂಕಟೇಶ್‌, ಕೆ.ಶೇಷಾದ್ರಿ, ಮಂಗಳಾ ಶಂಭುಲಿಂಗಯ್ಯ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ