ಆ್ಯಪ್ನಗರ

ಕನಕಪುರ: ಸಂಸದರ ಆದರ್ಶ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೂ ಸ್ಥಳವಿಲ್ಲ!

ಸ್ಮಶಾನದ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಂಸದರು ಹಾಗೂ ಆಯಾ ಭಾಗದ ಶಾಸಕರು ಸಭೆ ನಡೆಸಿ ಕೂಡಲೇ ಜನಸಂಖ್ಯೆಗನುಗುಣವಾಗಿ ಸ್ಮಶಾನವನ್ನು ನಿರ್ಮಿಸಿಕೊಡುವ ಕೆಲಸವನ್ನು ಮಾಡಬೇಕು

Vijaya Karnataka 19 Jan 2022, 7:14 pm
ಹಾರೋಹಳ್ಳಿ: ಸಂಸದರ ಆದರ್ಶ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೂ ಸ್ಥಳವಿಲ್ಲ. ಇದು 21ನೇ ಶತಮಾನಕ್ಕೆ ದೇಶವನ್ನು ನಮ್ಮ ನಾಯಕರು ಕಟ್ಟಿರುವ ರೀತಿ ಎಂದು ಬಿಎಸ್‌ಪಿ ರಾಜ್ಯ ಕಾರ‍್ಯದರ್ಶಿ ನಾಗೇಶ್‌ ವ್ಯಂಗ್ಯವಾಡಿದ್ದಾರೆ.
Vijaya Karnataka Web ಮೈಕ್‌
ಮೈಕ್‌


ಕನಕಪುರ ತಾಲೂಕಿನ ಮರಳವಾಡಿಯ ಯಲಚವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಹೆಣವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ನಮ್ಮ ರಾಜಕಾರಣಿಗಳ ಎಂತಹ ಆಡಳಿತ ನೀಡುತ್ತಿದ್ದಾರೆ ಎಂದರೆ ಆದರ್ಶ ಗ್ರಾಮದಲ್ಲಿ ಆದರ್ಶಪ್ರಾಯವಾದದ್ದು ಒಂದೇ ಒಂದು ಉದಾಹರಣೆ ಇಲ್ಲ ಎಂದರು.

ಸ್ಮಶಾನವನ್ನಾದರೂ ಕೊಡಿ ಸ್ವಾಮಿ

ತಾಲೂಕಿನಾದ್ಯಂತ ಸ್ಮಶಾನದ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಂಸದರು ಹಾಗೂ ಆಯಾ ಭಾಗದ ಶಾಸಕರು ಸಭೆ ನಡೆಸಿ ಕೂಡಲೇ ಜನಸಂಖ್ಯೆಗನುಗುಣವಾಗಿ ಸ್ಮಶಾನವನ್ನು ನಿರ್ಮಿಸಿಕೊಡುವ ಕೆಲಸವನ್ನು ಮಾಡಬೇಕೆಂದು ಅವರು ಆಗ್ರಹಿಸಿದರು.

ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸ್ಫೋಟ..! ಇದು ಮೇಕೆದಾಟು ಪಾದಯಾತ್ರೆ ಎಫೆಕ್ಟಾ..?

ಮೊನ್ನೆ ಸ್ಮಶಾನಕ್ಕಾಗಿ ಪ್ರತಿಭಟಿಸಿದ್ದ ಕುಂಬಾರದೊಡ್ಡಿಯು ಯಲಚವಾಡಿ ಗ್ರಾ.ಪಂ ವ್ಯಾಪ್ತಿಗೆ ಸೇರಿದೆ. ಈ ಗ್ರಾಮವನ್ನು ಸಂಸದ ಡಿ.ಕೆ.ಸುರೇಶ್‌ ಅವರು ತಮ್ಮ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದರು. ಅವರು ಗ್ರಾಮವನ್ನು ಎಷ್ಟು ಅಭಿವೃದ್ಧಿಪಡಿಸಿದ್ದಾರೆ ಎಂದರೆ, ಹೆಣ ಹೂಳಲೂ ಸ್ಥಳವಿಲ್ಲ ಎಂದು ಕುಟುಕಿದರು.

ಎಚ್‌ಡಿಕೆ ಮಾಡಿರುವುದೂ ಅಷ್ಟಕ್ಕಷ್ಟೇ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬಕ್ಕಾಗಿ ಕ್ಷೇತ್ರದ ಜನರು ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಬಹಳ ಕಾಲದಿಂದಲೇ ಅವರ ಕುಟುಂಬ ಸದಸ್ಯರೇ ಚುನಾವಣೆಯಲ್ಲಿಆರಿಸಿ ಬರುತ್ತಿದ್ದಾರೆ. ಜನರು ಸೌಲಭ್ಯ ಕೇಳಿದಾಗಲೆಲ್ಲಾ ಭರವಸೆ ನೀಡಿಕೊಂಡೇ ಕಾಲಯಾಪನೆ ಮಾಡುತ್ತಿದ್ದಾರೆ. ಸದ್ಯ ಎಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಜನರ ಸಮಸ್ಯೆ ಕೇಳಲೂ ಅವರಿಗೆ ಪುರುಸೊತ್ತು ಇಲ್ಲ. ಜೀವಂತ ಇರುವಾಗ ವಾಸಿಸಲು ಮನೆ ನೀಡಲು ಯೋಗ್ಯತೆ ಇಲ್ಲದ ಇವರು, ಸತ್ತ ಮೇಲೆ ಶಾಂತಿಯಿಂದ ನಿರ್ಗಮಿಸಲೂ ಆಸ್ಪದ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಜನರನ್ನು ಕಾಡುವ ಇಲಾಖೆ

ಅರಣ್ಯ ಇಲಾಖೆಯಂತೂ ಜನರನ್ನು ಕಾಡುವ ಇಲಾಖೆಯಾಗಿದೆ. ಜನರನ್ನು, ರೈತರನ್ನು ಒಕ್ಕಲೆಬ್ಬಿಸುವುದೇ ಇವರ ಪ್ರಮುಖ ಕೆಲಸ. ಜನಪ್ರತಿನಿಧಿಗಳ ಸಭೆಗಳಲ್ಲಿ ಮಾತ್ರ ರೈತರಿಗೆ ತೊಂದರೆ ನೀಡಬೇಡಿ ಎನ್ನುವ ಸಂದೇಶಗಳಿರುತ್ತವೆ. ಆದರೆ ಅವು ಜಾರಿಗೆ ಬರುವುದಿಲ್ಲ. ಅದೆಷ್ಟು ಪ್ರಮಾಣದಲ್ಲಿ ಜನಪ್ರತಿನಿಧಿಗಳ ಯೋಜನೆಗಳು ಎಲ್ಲಿ ಜಾರಿಗೆ ಬಂದಿವೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ರಾಮನಗರ ಎಸ್ಪಿಗೂ ಕೊರೊನಾ ಸೋಂಕು, ಪೊಲೀಸರಿಗೂ ಪಾಸಿಟಿವ್‌

ತೇರು ಬೀದಿ ದೊಡ್ಡೂರು ಸೇರಿದಂತೆ ಹಲವು ಗ್ರಾಮಗಳು ರಾಜ್ಯದ ಗಡಿಭಾಗಗಳಲ್ಲಿವೆ. ಆದರೆ ಇಲ್ಲಿನ ಗ್ರಾ.ಪಂ ಅಧಿಕಾರಿಗಳು ಇ-ಖಾತೆಗೂ ಜನರ ಬಳಿ 5-10 ಸಾವಿರಕ್ಕೆ ಬೇಡಿಕೆ ಇಡುತ್ತಿದ್ದಾರೆ. ದೀನ ದಲಿತರ ಎನ್ನದೇ ಅಧಿಕಾರಿಗಳು ಸುಲಿಗೆಗಿಳಿದಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳಿಗೆ ನಿಜವಾಗಲೂ ಜನಪರ ಕಾಳಜಿಯಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ತಾಲೂಕಿನಾದ್ಯಂತ ಜನಸಂಖ್ಯೆಗನುಗುಣವಾಗಿ ಸ್ಮಶಾನವನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ