ಆ್ಯಪ್ನಗರ

ರೈತರ ಅಗತ್ಯಕ್ಕೆ ತಕ್ಕಂತೆ ಯೋಜನೆ ಬೇಕು

ಸಾಲಮನ್ನಾ ದಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತಾಪಂ ಅಧ್ಯಕ್ಷ ಹೆಚ್‌ ರಾಜಣ್ಣ ಹೇಳಿದರು...

Vijaya Karnataka 24 Dec 2018, 5:00 am
ಚನ್ನಪಟ್ಟಣ: ಸಾಲಮನ್ನಾ ದಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತಾ.ಪಂ. ಅಧ್ಯಕ್ಷ ಹೆಚ್‌. ರಾಜಣ್ಣ ಹೇಳಿದರು.
Vijaya Karnataka Web planning should be in accordance with the requirement of farmers
ರೈತರ ಅಗತ್ಯಕ್ಕೆ ತಕ್ಕಂತೆ ಯೋಜನೆ ಬೇಕು

ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆ ವತಿಯಿಂದ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದುವರೆವಿಗೂ ಆಡಳಿತ ಮಾಡಿದ ಯಾವುದೇ ಸರಕಾರಗಳು ರೈತ ಪರ ಚಿಂತನೆ ಮಾಡಿಲ್ಲ. ಕೇವಲ ಅಧಿಕಾರ ಮಾಡಿ ಹೋಗಿದ್ದಾರೆ. ರೈತರ ಸಮಸ್ಯೆಗಳಿಗೆ ಸಾಲ ಮನ್ನಾ ಒಂದೇ ಪರಿಹಾರ ಅಲ್ಲ. ರಾಜ್ಯಕ್ಕೆ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಒಗ್ಗದು. ಕೃಷಿ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಸಬ್ಸಿಡಿ, ಪರಿಹಾರ, ಸಾಲಮನ್ನಾ ಹೀಗೆ ಫಲಾನುಭವಿ ಆಧಾರಿತ ಯೋಜನೆಗಳನ್ನು ರೂಪಿಸುವುದರಿಂದ ಸಮಗ್ರವಾಗಿ ಕೃಷಿ ವಲಯದ ಅಭಿವೃದ್ಧಿಯಾಗುವುದೆಂಬ ಭ್ರಮೆಯಲ್ಲಿದ್ದಾರೆ ಎಂದರು.

ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಇಂದು ಕೃಷಿ ಪರಿಸ್ಥಿತಿ ಲಾಭದಾಯಕವಾಗಿ ಉಳಿದಿಲ್ಲ. ಜೀವನ ಕ್ರಮ, ಕೃಷಿ ಪದ್ಧತಿಯಲ್ಲಿನ ಬದಲಾವಣೆ, ಮಾರುಕಟ್ಟೆ ಸಮಸ್ಯೆ, ಕೈಗಾರಿಕೀಕರಣದ ಪ್ರಭಾವ, ಬರ, ನೆರೆ. ಹೀಗೆ ಹತ್ತು ಹಲವು ಅಂಶಗಳು ರೈತರ ಸೋಲಿಗೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರ, ಔಷಧಿಯ ಅವೈಜ್ಞಾನಿಕ ಬಳಕೆ, ಮಣ್ಣಿನ ಸತ್ವವನ್ನೇ ಕಳೆಯುತ್ತಿವೆ. ಸಾಲಬಾಧೆ, ಬೆಲೆ ಕುಸಿತ ರೈತನ ಅಂತಸತ್ವವನ್ನೇ ಕುಂದಿಸುತ್ತಿವೆ. ಅಧಿಕಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರ ಪ್ರತಿನಿಧಿಗಳು ಇನ್ನೊಂದು ಕಡೆ ಸರಕಾರಗಳು ಬಂಡವಾಳಶಾಹಿ ಬಹುರಾಷ್ರ್ಟೀಯ ಕಂಪನಿ ಪರವಾಗಿವೆ ಎಂದು ಟೀಕಿಸಿದರು.

ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಮೊದಲಾದವು ಅನ್ನದಾತರಿಗೆ ಹೊಸ ಚೇತನ ತುಂಬಲು ಸಾಧ್ಯ ಮತ್ತು ಸುಲಭ ಮಾರ್ಗಗಳು. ಮಾಜಿ ಪ್ರಧಾನಿ ಚರಣ್‌ ಸಿಂಗ್‌ ರೈತ ಕುಟುಂಬದಿಂದ ಬಂದಿದ್ದ ಅವರು ಬ್ರಿಟಿಷರ ಆಳ್ವಿಕೆಯಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಮಸೂದೆ ಮಂಡಿಸಿದವರು. ಅತಿ ಅಲ್ಪಾವಧಿಗೆ ಪ್ರಧಾನಿಯಾಗಿದ್ದಾಗ ರೈತರ ಬೆಂಬಲಕ್ಕೆ ನಿಂತು ಹಿತಕಾಯಲು ಹಲವು ಕಾಯ್ದೆ, ಕಾನೂನು ಜಾರಿಗೆ ತಂದವರು. ರೈತರ ಬದುಕಿನಲ್ಲಿ ಆಶಾದಾಯಕ ಬದಲಾವಣೆ ತಂದಿದ್ದರು ಎಂದರು.

ರಾಜಕಾರಣದಲ್ಲಿ ರೈತರ ಸಮಸ್ಯೆಗಳಿಗೆ ಗಟ್ಟಿ ದನಿಯಾದ ಮಾಜಿ ಪ್ರಧಾನಿ ಚೌಧರಿ ಚರಣ್‌ ಜನ್ಮದಿನವನ್ನು ದೇಶವು ರೈತರ ದಿನವಾಗಿ ಆಚರಿಸುವ ಮೂಲಕ ಸದಾ ಸ್ಮರಣೀಯರನ್ನಾಗಿಸಿದ್ದು,ಇಂದಿನ ರಾಜಕಾರಣಿಗಳ ಜೀವನದಲ್ಲಿ ಅಳವಡಿಸಿ ಕೊಂಡರೆ ಅವರ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ನಾಗರಾಜು, ರೈತ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಡಾ. ರಾಜೇಶ್‌ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವೇಗೌಡ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯದರ್ಶಿ ಪುರುಷೋತ್ತಮ, ನಿರ್ದೇಶಕ ನಂಜೇಗೌಡ, ಹೆಚ್‌.ವಿ. ಚಂದ್ರು, ನಾಗೇಶ್‌, ಸ್ವಾಮಿ, ಹೊಂಬಾಳೇಗೌಡ, ಎಲ್ಲೇಗೌಡ, ಕೃಷ್ಣೇಗೌಡ, ಕೃಷಿ ಇಲಾಖೆ ಸಿಬ್ಬಂದಿ ವರ್ಗ, ತಾಲೂಕಿನ ರೈತ ಮುಖಂಡರು ಹಾಜರಿದ್ದರು. ಇದೇ ವೇಳೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪ್ರಗತಿಪರ ರೈತರಾದ ಹೊಡಿಕೆ ಹೊಸಳ್ಳಿ ರವಿ, ಬ್ಯಾಡರಹಳ್ಳಿ ಪುಟ್ಟಸ್ವಾಮಿಗೌಡ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ