ಆ್ಯಪ್ನಗರ

ಖಾಕಿ ಮೇಲೆ ಫೇಸ್‌ಬುಕ್‌ನಲ್ಲಿ ಪೌರುಷ; ಜೈಲು ಸೇರಿದ ಯುವಕ

ಹೆಲ್ಮೆಟ್ ಧರಿಸದೆ ಪೊಲೀಸರ ಮೇಲೆ ಪೌರುಷ ತೋರಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ ಪ್ರಕರಣದಡಿಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕುಮಾರ್ ಹಾಗೂ ನದೀಮ್ ಪಾಶಾ ಬಂಧನಕ್ಕೊಳಗಾದವರು.

Vijaya Karnataka 17 Oct 2019, 10:43 pm
ರಾಮನಗರ: ಹೆಲ್ಮೆಟ್‌ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸಿ ಎಂದ ಪೊಲೀಸರಿಗೇ ಆವಾಜ್‌ ಹಾಕಿ ಜೈಲು ಪಾಲಾದ ಯುವಕರಿಬ್ಬರ ವಿಚಿತ್ರ ಕತೆಯಿದು. ಅಷ್ಟು ಮಾತ್ರವಲ್ಲ, ಬಹುಶಃ ಹೆಲ್ಮೆಟ್‌ ಧರಿಸದ ಕಾರಣಕ್ಕೆ ಜೈಲು ಪಾಲಾಗಿರುವ ಮೊದಲ ಪ್ರಕರಣವಿರಬಹುದು.
Vijaya Karnataka Web cop


ಕುದೂರಿನ ಬೈಪಾಸ್‌ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸುತ್ತಿದ್ದ ಸೋಲೂರಿನ ಕಿರಣ್‌ಕುಮಾರ್‌ ಅಲಿಯಾಸ್‌ ಮೈಕಲ್‌ (35) ನನ್ನು ತಡೆದಿದ್ದಾರೆ. ಹೆಲ್ಮೆಟ್‌ ಹಾಕದಿರುವುದಕ್ಕೆ 500 ರೂ. ದಂಡ ವಿಧಿಸಿದ್ದಾರೆ.

ಇದರಿಂದ ಕೋಪಗೊಂಡಿದ್ದ ಕಿರಣ್‌ಕುಮಾರ್‌, ಫೇಸ್‌ಬುಕ್‌ ಲೈವ್‌ನಲ್ಲಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ''ನಾನು ಲೋಕಲ್‌, ನಿತ್ಯ ಈ ರಸ್ತೆಯಲ್ಲೇ ಓಡಾಡುತ್ತೇನೆ, ಸ್ಥಳೀಯರು ಹೆಲ್ಮೆಟ್‌ ಹಾಕಬೇಕಿಲ್ಲ. ಇದು ಪೊಲೀಸರ ಹಗಲು ದರೋಡೆ. ಫೈನ್‌ ಹಣವನ್ನು ಪೊಲೀಸರು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದನ್ನು ಖಜಾನೆಯಲ್ಲಿ ವಿಚಾರಿಸಬೇಕು,'' ಎಂದು ಬೈಯ್ದಿದ್ದಾನೆ. ಇಷ್ಟೂ ಸಾಲದೆಂಬಂತೆ ಕೆಲವು ಪುಂಡರನ್ನು ಕಟ್ಟಿಕೊಂಡು ಪಿಎಸ್‌ಐಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕಿರಣ್‌ ಕುಮಾರ್‌ನನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.

ರಾಮನಗರದಲ್ಲಿ ಬುಧವಾರ ಮಧ್ಯಾಹ್ನ ಇನ್ನೊಂದು ವಿಚಿತ್ರ ಪ್ರಕರಣ ನಡೆದಿದ್ದು ರಾಮನಗರದ ಸಂಚಾರಿ ಪೊಲೀಸ್‌ ಠಾಣೆ ಮುಂಭಾಗ ಹೆಲ್ಮೆಟ್‌ ಧರಿಸದೇ ಸಂಚರಿಸುತ್ತಿದ್ದ ರೆಹ್ಮಾನಿಯಾ ನಗರದ ನದೀಮ್‌ ಪಾಶ (29), ಪ್ರಶ್ನಿಸಿದ ಪೊಲೀಸರಿಗೆ ಆವಾಜ್‌ ಹಾಕಿದ್ದ. ಅಲ್ಲದೆ ಅವರು ನೀಡಿದ 500 ರೂ. ದಂಡದ ರಶೀದಿಯನ್ನು ಪೊಲೀಸರ ಎದುರೇ ಹರಿದು ಬಿಸಾಡಿ ''ಅದೇನು ಮಾಡ್ಕೊತ್ತಿರಾ ಮಾಡ್ಕೊಳಿ,'' ಎಂದು ಆವಾಜ್‌ ಹಾಕಿದ್ದ.

ಪಾಶನನ್ನು ಬಂಧಿಸಿದ ಪೊಲೀಸರು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಲಾಕಪ್‌ಗೆ ತಳ್ಳಿದ್ದಾರೆ. ಈ ಇಬ್ಬರೂ ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ