ಆ್ಯಪ್ನಗರ

ಜಿಲ್ಲೆಯ ಕೆಲವೆಡೆ ಅಕಾಲಿಕ ಮಳೆಯ ಸಿಂಚನ

ಜಿಲ್ಲೆಯ ಕೆಲವೆಡೆಗಳಲ್ಲಿ ಅಕಾಲಿಕ ಮಳೆಯಾಗಿದ್ದು, ಪೂರ್ವ ಮುಂಗಾರು ಹಂಗಾಮಿಗೂ ಮುನ್ನಾ ಬಿದ್ದಿರುವ ಈ ವರ್ಷಧಾರೆಯು ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿಸಿದೆ.

Vijaya Karnataka 13 Feb 2019, 5:00 am
* ಆರ್‌.ಶ್ರೀಧರ್‌ ರಾಮನಗರ
Vijaya Karnataka Web premature rainfall in some place of the district
ಜಿಲ್ಲೆಯ ಕೆಲವೆಡೆ ಅಕಾಲಿಕ ಮಳೆಯ ಸಿಂಚನ


ಜಿಲ್ಲೆಯ ಕೆಲವೆಡೆಗಳಲ್ಲಿ ಅಕಾಲಿಕ ಮಳೆಯಾಗಿದ್ದು, ಪೂರ್ವ ಮುಂಗಾರು ಹಂಗಾಮಿಗೂ ಮುನ್ನಾ ಬಿದ್ದಿರುವ ಈ ವರ್ಷಧಾರೆಯು ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಗೆ ಪೂರ್ವ ಮುಂಗಾರು ಮಾರ್ಚ್‌ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೀಗ ಬಿದ್ದಿರುವ ಮಳೆ ಒಂದು ರೀತಿಯಲ್ಲಿ ಅಕಾಲಿಕವೂ ಹಾಗೂ ತಡ ಹಿಂಗಾರು ಮಳೆಯೂ ಆಗಿದೆ. ಈ ವರ್ಷದ ಫೆ. 9 ಮಳೆ ಬೀಳುವ ಮೂಲಕ ರೈತರಲ್ಲಿ ಹರ್ಷ ತಂದಿದೆ. ಹಾಗೆ ನೋಡಿದರೆ, ಈ ಅಕಾಲಿಕ ಮಳೆಯಿಂದ ಯಾವುದೇ ಬೆಳೆಗೆ ಅನುಕೂಲ ಇಲ್ಲವಾದರೂ, ಇಳೆ ತಂಪಾಗಲಿದೆ. ಮುಂಬರುವ ಬೇಸಿಗೆಗೆ ಜಾನುವಾರುಗಳಿಗೆ ಮೇವು ದೊರೆಯಲಿದೆ.

ಅಲ್ಲದೇ, ಪೂರ್ವ ಮುಂಗಾರು ಹಂಗಾಮಿಗೆ ಭೂಮಿಯನ್ನು ಹದಗೊಳಿಸಿಕೊಳ್ಳಲು ಸಹ ಈ ಅಕಾಲಿಕ ಮಳೆ ಸಹಕಾರಿಯಾಗಬಲ್ಲದು. ರಾಮನಗರ ಹಾಗೂ ಚನ್ನಪಟ್ಟಣದ ತಾಲೂಕಿನ ಕೆಲ ಹೋಬಳಿಗಳಲ್ಲಿ ಈ ಅಕಾಲಿಕ ಮಳೆ ಶನಿವಾರ ಉತ್ತಮ ಪ್ರಮಾಣದಲ್ಲಿ ಆಗಿದ್ದು, ಈ ವರ್ಷವೂ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿಸಿದೆ.

ಎಲ್ಲೆಲ್ಲಿ ವರ್ಷಧಾರೆ?: ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ಫೆ. 10ರ ವರದಿ ಪ್ರಕಾರ 25 ಮಿ.ಮೀ., ಚನ್ನಪಟ್ಟಣದಲ್ಲಿ 28ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಈ ವ್ಯಾಪ್ತಿಗಳಲ್ಲಿ ಗರಿಷ್ಠ ಪ್ರಮಾಣದ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿ ಹದಗೊಳಿಸುವ ಪ್ರಕ್ರಿಯೆ ನಿರತರಾಗಿದ್ದಾರೆ. ಈಗ ಭೂಮಿಯನ್ನು ಹದಗೊಳಿಸಿಕೊಂಡರೆ, ಮುಂದಿನ ಪೂರ್ವ ಮುಂಗಾರು ಮಳೆಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

ಉತ್ತಮ ಮಳೆಯ ನಿರೀಕ್ಷೆಯಲ್ಲಿ: ರಾಮನಗರದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಮಳೆ ಕೊರತೆಯನ್ನೇ ಎದುರಿಸಿದ್ದೇ ಹೆಚ್ಚು. 2017ರಲ್ಲಿ ಭೀಕರ ಬರ ಸ್ಥಿತಿ ತಲೆದೋರಿತ್ತು. ಆದರೆ, 2018ರಲ್ಲಿ ಉತ್ತಮ ಮಳೆಯಾಯಿತು. ಆದರೆ, ಕೆಲವಡೆ ಫಸಲಿನ ನಿರ್ಣಾಯಕ ಹಂತದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಒಂದಷ್ಟು ಫಸಲು ನಷ್ಟವಾಯಿತು. ಇದನ್ನು ಹೊರತು ಪಡಿಸಿ ಕಳೆದ ವರ್ಷ ಜಿಲ್ಲೆಗೆ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದೆ.

ಈ ವರ್ಷ ಜನವರಿ ತಿಂಗಳ 19 ರಂದು ಸಹ ಜಿಲ್ಲೆಯ ಕೆಲವಡೆ ಮಳೆ ಸಿಂಚನವಾಗಿತ್ತು. ಅದೇ ವರ್ಷದ ಮಳೆಯಾದರೆ, ಶನಿವಾರ, ಭಾನುವಾರ ಬಿದ್ದಿರುವ ಮಳೆ ಹೊಸ ವರ್ಷದ ಎರಡನೆಯದು. ಪೂರ್ವ ಮುಂಗಾರು ಸಹ ರಾಮನಗರ ತಾಲೂಕಿನ ಮೂಲಕವೇ ಜಿಲ್ಲೆಗೆ ಆಗಮಿಸುವುದು ವಿಶೇಷ.

-----

ಜಿಲ್ಲೆಯ ಕೆಲವೆಡೆ ಅಕಾಲಿಕ ಮಳೆಯಾಗಿದೆ. ಇದರಿಂದ ಯಾವುದೇ ಬೆಳೆಗೆ ಅನುಕೂಲವಿಲ್ಲವಾದರೂ ಜಾನುವಾರುಗಳ ಮೇವಿಗೆ ಅನುಕೂಲವಾಗಲಿದೆ. ಅಲ್ಲದೇ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಲು ಸಹ ಈ ಮಳೆ ಅನುಕೂಲ ಕಲ್ಪಿಸಲಿದೆ. ಇದೊಂದು ರೀತಿಯಲ್ಲಿ ತಡ ಹಿಂಗಾರು.

- ಹವಾಮಾನ ಇಲಾಖೆ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ