ಆ್ಯಪ್ನಗರ

ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ

ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿಯ ಕೊರತೆ ಖಂಡಿಸಿ ತಾಲೂಕಿನ ಅಕ್ಕೂರು ಗ್ರಾಮದ ಸ್ಥಳೀಯರು ಸೋಮವಾರ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 20 Aug 2019, 4:34 pm
ತಡವಾಗಿ ವೈದ್ಯರ ಆಗಮನ: ಗ್ರಾಮಸ್ಥರ ಆಕ್ರೋಶ
Vijaya Karnataka Web protest for condemn the shortage of medical staff
ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ


ರಾಮನಗರ: ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿಯ ಕೊರತೆ ಖಂಡಿಸಿ ತಾಲೂಕಿನ ಅಕ್ಕೂರು ಗ್ರಾಮದ ಸ್ಥಳೀಯರು ಸೋಮವಾರ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 11 ಗಂಟೆಯಾದರೂ ಆಸ್ಪತ್ರೆಗೆ ವೈದ್ಯರು ಬಂದಿರಲಿಲ್ಲ. ಬೆರಳಣಿಕೆಯ ಸಿಬ್ಬಂದಿ ಮಾತ್ರ ಇದ್ದರು. ಇದರಿಂದ ಕೆರಳಿದ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು.

ತಡವಾಗಿ ಬಂದ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಆಸ್ಪತ್ರೆಯಲ್ಲಿ ಆಗಿನಿಂದಲೂ ವೈದ್ಯರ ಕೊರತೆ ಇದೆ. ಇರುವ ಸಿಬ್ಬಂದಿಯೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಸುತ್ತಲಿನ ರೋಗಿಗಳಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಸುಮಾರು 11 ಜನ ಸಿಬ್ಬಂದಿ ಇದ್ದಾರೆ. ಆದರೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅನೇಕ ತಿಂಗಳಿನಿಂದಲೂ ವೈದ್ಯರ ಕೊರತೆ ಇದೆ. ಔಷಧ ಸಂಗ್ರಹ ಮತ್ತು ವಿತರಣೆಯೂ ಸರಿಯಾಗಿ ನಡೆಯುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರಿದರೂ ಪ್ರಯೋಜನ ಆಗಿಲ್ಲ. ಸಂಬಂಧಿಸಿದ ಮೇಲಧಿಕಾರಿಗಳು ಇನ್ನಾದರೂ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಅಕ್ಕೂರು, ಚಿಕ್ಕಗಂಗವಾಡಿ, ವಿರೂಪಸಂದ್ರ, ಹೊಂಬೇಗೌಡನ ದೊಡ್ಡಿ, ಬೆಳಗವಾಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ವೈದ್ಯಕೀಯ ಸೌಲಭ್ಯ ದೊರಕದ ಕಾರಣ ತಾವರೆಕೆರೆ, ಜಾಲಮಂಗಲ ಮೊದಲಾದ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಕೆಲವರು ದೂರದ ರಾಮನಗರಕ್ಕೆ ಹೋಗುತ್ತಾರೆ ಎಂದು ದೂರಿದರು.

ಪ್ರತಿಭಟನೆಯ ಸುದ್ದಿ ತಿಳಿದು ಸಮೀಪದ ಆಸ್ಪತ್ರೆಯ ವೈದ್ಯರು ಬಂದರಾದರೂ ಗ್ರಾಮಸ್ಥರು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಒಪ್ಪಲಿಲ್ಲ. ಖಾಯಂ ಆಗಿ ವೈದ್ಯರನ್ನು ನಿಯೋಜನೆ ಮಾಡಬೇಕು ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ