ಆ್ಯಪ್ನಗರ

ರಾಮನಗರ: ಹಣಕ್ಕಾಗಿ ಅಪಹರಣದ ನಾಟಕವಾಡಿ ಹೆತ್ತವರನ್ನೇ ಬೆಚ್ಚಿಬೀಳಿಸಿದ 15ರ ಬಾಲಕ!

ಅಪಹರಣದ ನಾಟಕವಾಡಿ ಹದಿನೈದು ವರ್ಷದ ಬಾಲಕನೊಬ್ಬ ಪೋಷಕರಿಗೆ ಐದು ಲಕ್ಷ ಬೇಡಿಕೆ ಇಟ್ಟಿರುವ ಘಟನೆ ಕನಕಪುರದಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಬಾಲಕನ ಐಡಿಯಾ ನೋಡಿ ಬೆಚ್ಚಿಬಿದ್ದಿದ್ದಾರೆ. ಕನಕಪುರದ ಬಾಲಕ ತಿರುಪತಿಯಲ್ಲಿ ಹೋಗಿ ಅಪಹರಣದ ಹೈಡ್ರಾಮ ಮಾಡಿದ್ದ.

Vijaya Karnataka Web 9 Nov 2020, 12:39 pm
ಕನಕಪುರ: ಬಟ್ಟೆ ಅಂಗಡಿ ಮಾಲೀಕನ ಮಗನ ಅಪಹರಣ ಪ್ರಕರಣವು ಕುತೂಹಲಕರ ತಿರುವಿನೊಂದಿಗೆ ಸುಖಾಂತ್ಯ ಕಂಡಿದೆ. ಓದಿನ ಕಾಟ ತಪ್ಪಿಸಿಕೊಳ್ಳಲು ಹಾಗೂ ಹಣಕ್ಕಾಗಿ ಬಾಲಕನೇ ಅಪಹರಣದ ನಾಟಕ ಆಡಿದ್ದ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ತಿರುಪತಿಯಲ್ಲಿ ಬಾಲಕನನ್ನು ಟ್ರೇಸ್‌ ಮಾಡಿದ ಪೊಲೀಸರು, ಆತನನ್ನು ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
Vijaya Karnataka Web kidnap
Picture used for representational purpose only


ಏನಿದು ಪ್ರಕರಣ?:
ಕನಕಪುರದ ಬೂದಿಕೇರಿ ರಸ್ತೆಯಲ್ಲಿರುವ ಸರ್ವೇಶ್‌ ಟೆಕ್ಸ್‌ಟೈಲ್ಸ್‌ ಅಂಗಡಿ ಮಾಲೀಕರಾದ ಸೂರ್ಯ ಮನೋಹರ್‌ ತಮ್ಮ ಮಗ ಸರ್ವೇಶ್‌(15) ಅಪಹರಣವಾಗಿದ್ದಾನೆ. ಆತನ ಬಿಡುಗಡೆಗೆ ಅಪಹರಣಕಾರರು 5 ಲಕ್ಷ ರೂ.ಗಳಿಗೆ ಬೇಡಿಕೆ ಇರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಜತೆಗೆ ಬಾಲಕ ಸರ್ವೇಶ್‌ ಶೌಚಾಲಯವೊಂದರಲ್ಲಿ ಬಂಧಿತನಾಗಿರುವ ಫೋಟೊವನ್ನು ನೀಡಿದ್ದರು.

ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಾಲಕನ ಮೊಬೈಲ್‌ ಕರೆ ಟ್ರೇಸ್‌ ಮಾಡಿದ ಪೊಲೀಸರಿಗೆ ಅದು ತಿರುಪತಿಯಲ್ಲಿ ಇರುವುದು ಕಂಡು ಬಂದಿತ್ತು. ಅಲ್ಲಿಗೆ ಹುಡುಕಿ ಹೋದ ಪೊಲೀಸರು ಬಾಲಕನಿರುವ ಸ್ಥಳ ಪತ್ತೆ ಹಚ್ಚಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ, ಓದು ಎಂದು ಅಪ್ಪಅಮ್ಮ ಹೇರುತ್ತಿದ್ದ ಒತ್ತಡದಿಂದ ಪಾರಾಗಲು ಹಾಗೂ ಸುಲಭವಾಗಿ ಖರ್ಚಿಗೆ ಹಣ ಸಂಪಾದಿಸಲು ಆತನೇ ಅಪಹರಣದ ನಾಟಕ ಆಡಿದ್ದ.

ಕೋಡಿಹಳ್ಳಿಯಲ್ಲಿ ವಿಚಿತ್ರ ಘಟನೆ: ವಿವಾಹ ಆಮಂತ್ರಣ ನೀಡದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ!

ತಿರುಪತಿಗೆ ತೆರಳಿ ಅಲ್ಲಿ ಶೌಚಾಲಯದಲ್ಲಿ ತನ್ನನ್ನೇ ತಾನು ಹಗ್ಗದಲ್ಲಿ ಕಟ್ಟಿಕೊಂಡು ಚಿತ್ರ ಹಿಡಿದು ಪೋಷಕರಿಗೆ ಕಳುಹಿಸಿದ್ದ. ಬಾಲಕನ ಕ್ರಿಮಿನಲ್‌ ಯೋಚನೆ ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಆತ ಅಪ್ರಾಪ್ತ ವಯಸ್ಕನಾದ ಕಾರಣ, ತಿಳಿಹೇಳಿ ಪೋಷಕರಿಗೆ ಒಪ್ಪಿಸಿ ಕೈತೊಳೆದುಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಸಹಾಯಕ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ರಾಮರಾಜನ್‌, ನಗರಠಾಣೆಯ ಎಸ್‌ಐ ಲಕ್ಷ್ಮಣ ಗೌಡ, ಗ್ರಾಮಾಂತರ ಠಾಣೆಯ ಎಸ್‌ಐ ಅನಂತ್‌ರಾಮ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ