ಆ್ಯಪ್ನಗರ

ಲಾರಿಯಿಂದ ರೋಡಿಗೆ ಬಿತ್ತು 60 ಟನ್ ತೂಕದ ಬಂಡೆ! ಕೂದಲೆಳೆ ಅಂತರದಲ್ಲಿ ತಪ್ಪಿತು ದುರಂತ!

ಮಾಗಡಿ ಪಟ್ಟಣದಲ್ಲಿ ಪ್ರತಿ ರಾತ್ರಿ 11 ಗಂಟೆಯಿಂದ ಮುಂಜಾನೆ 5 ಗಂಟೆಯೊಳಗೆ ನೂರಾರು ಕಲ್ಲು ತುಂಬಿದ ಲಾರಿಗಳು ಸಂಚಾರ ಮಾಡುತ್ತಲೇ ಇರುತ್ತವೆ. ಅತಿ ಹೆಚ್ಚು ತೂಕದ ದಿಮ್ಮಿಗಳನ್ನು ಹಾಕಿಕೊಂಡು ಸಂಚಾರ ಮಾಡುತ್ತಿದ್ದು, ರಸ್ತೆ ಗುಂಡಿಗಳು ಹೆಚ್ಚಾಗುತ್ತಿವೆ.

Vijaya Karnataka Web 10 Dec 2019, 4:50 pm
ಮಾಗಡಿ (ರಾಮನಗರ): ಲಾರಿಯಿಂದ ಭಾರಿ ಗಾತ್ರದ ಕಲ್ಲು ಬಂಡೆ ರೋಡಿಗೆ ಬಿದ್ದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮುಂಜಾನೆ ಸಮಯದಲ್ಲಿ ರಸ್ತೆಯಲ್ಲಿ ಯಾರೂ ಇರಲಿಲ್ಲವಾದ ಕಾರಣ, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
Vijaya Karnataka Web ಲಾರಿಯಿಂದ ರೋಡಿಗೆ ಬಿತ್ತು 60 ಟನ್ ತೂಕದ ಬಂಡೆ! ಒಂದು ಕ್ಷಣ ಯಾಮಾರಿದ್ರೂ ನಜ್ಜುಗುಜ್ಜು!


ರೋಡಿಗೆ ಬಿತ್ತು 60 ಟನ್ ತೂಕದ ಬಂಡೆ..!

ಮಂಗಳವಾರ ಮುಂಜಾನೆ ವೀರೇಗೌಡನದೊಡ್ಡಿ ಗ್ರಾಮದ ತಿರುವಿನಲ್ಲಿ ನಿಸರ್ಗ ಟ್ರಾನ್ಸ್‌ ಪೋರ್ಟ್‌ನ 5 ಲಾರಿಗಳು ಭಾರಿ ಗಾತ್ರದ ದಿಮ್ಮಿಗಳನ್ನು ತುಂಬಿಕೊಂಡು ಹಾಸನದಿಂದ ಚನ್ನಪಟ್ಟಣಕ್ಕೆ ತೆರಳುತ್ತಿದ್ದವು. ಈ ವೇಳೆ ವೀರೇಗೌಡನ ದೊಡ್ಡಿ ಗ್ರಾಮದಲ್ಲಿ ಚಾಲಕನ ಅಜಾಗರೂಕತೆಯಿಂದ ಲಾರಿಯಲ್ಲಿದ್ದ 2 ಭಾರಿ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬಿದ್ದವು. ಅಂದಾಜು 60 ಟನ್‌ ತೂಕದ ಬಂಡೆ ಏಕಾಏಕಿ ರಸ್ತೆಯ ಮೇಲೆ ಬಿದ್ದಿವೆ.

ಡಿಸೆಂಬರ್ 15ರ ಒಳಗೆ ಬೇಕೇ ಬೇಕು ಫಾಸ್ಟ್‌ ಟ್ಯಾಗ್! ಹೆದ್ದಾರಿ ಟೋಲ್‌ಗಳಲ್ಲಿ ಸರತಿ ಸಾಲಲ್ಲಿ ನಿಂತ ಸವಾರರು

ಮುಂಜಾನೆಯ ಸಮಯ ಆದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಲ್ಲು ಬಿದ್ದ ರಭಸಕ್ಕೆ ಭಾರಿ ಶಬ್ದ ಉಂಟಾಯ್ತು. ರಸ್ತೆಗೆ ಹಾಕಿದ್ದ ಟಾರು ಜೆಲ್ಲಿ ಕಲ್ಲುಗಳ ಸಮೇತ ಕಿತ್ತು ಬಂದಿದೆ. ಬಂಡೆ ಸ್ವಲ್ಪ ಮುಂದೆ ಬಿದ್ದಿದ್ದರೆ ವಿದ್ಯುತ್‌ ಕಂಬ ಹಾಗೂ ಮನೆಗೆ ಹಾನಿಯಾಗುತ್ತಿತ್ತು. ಬಂಡೆ ಬಿದ್ದ ಜಾಗದಲ್ಲೇ ಹೋಟೆಲ್‌ ಇದೆ. ಹೀಗಾಗಿ, ಜನರು ಓಡಾಡುವ ಸಮಯದಲ್ಲಿ ದುರಂತ ನಡೆದಿದ್ದರೆ ಸಾಕಷ್ಟು ಸಾವು ನೋವು ಸಂಭವಿಸುತ್ತಿತ್ತು.

ಓವರ್‌ ಲೋಡ್‌ನಿಂದಲೇ ಘಟನೆ: ಲಾರಿಗಳಲ್ಲಿ ಮಿತಿ ಮೀರಿದ ಓವರ್‌ ಲೋಡ್‌ನಿಂದಲೇ ಇಂತಹ ಘಟನೆಗಳು ನಡೆಯುತ್ತಿದ್ದು ಒಂದು ಬಂಡೆ 30 ಟನ್‌ಗೂ ಹೆಚ್ಚು ತೂಕವಿದ್ದು ಒಂದೇ ಲಾರಿಯಲ್ಲಿ 2 ದಿಮ್ಮಿಗಳನ್ನು ಹಾಕಿಕೊಂಡು ಬರಲಾಗುತ್ತಿತ್ತು. ಬಂಡೆಗೆ ಯಾವುದೇ ರೀತಿ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ, ಲಾರಿ ಚಾಲಕರು ಕೂಡಾ ಮನಸ್ಸೋ ಇಚ್ಚೆ ವೇಗದಲ್ಲಿ ಸಂಚಾರ ಮಾಡುತ್ತಿದ್ದು, ವೀರೇಗೌಡನದೊಡ್ಡಿ ತಿರುವಿನಲ್ಲಿ ಅತೀ ವೇಗವಾಗಿ ಬಂದ ಕಾರಣ ದಿಮ್ಮಿ ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಎದುರುಗಡೆಯಿಂದ ವಾಹನ ಬಂದಿದ್ದರೆ ಸಂಪೂರ್ಣ ನಜ್ಜುಗುಜ್ಜಾಗಿ ಹೋಗುತ್ತಿತ್ತು. ಲಾರಿ ಮಾಲೀಕರು ಹಣದ ಆಸೆಗೆ ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಪೊಲೀಸ್‌ ಇಲಾಖೆ ಇಂತಹ ಬೇಜವಾಬ್ದಾರಿ ಲಾರಿ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಜರಾತ್‌ನಿಂದ ನಿತ್ಯಾ ಶಿಷ್ಯರ ಎತ್ತಂಗಡಿ! ಗಂಟು-ಮೂಟೆ ಸಮೇತ ಬಿಡದಿಗೆ ದಾಂಗುಡಿ?

ರಾತ್ರಿ ವೇಳೆಯೇ ಸಂಚಾರ: ಮಾಗಡಿ ಪಟ್ಟಣದಲ್ಲಿ ಪ್ರತಿ ರಾತ್ರಿ 11 ಗಂಟೆಯಿಂದ ಮುಂಜಾನೆ 5 ಗಂಟೆಯೊಳಗೆ ನೂರಾರು ಕಲ್ಲು ತುಂಬಿದ ಲಾರಿಗಳು ಸಂಚಾರ ಮಾಡುತ್ತಲೇ ಇರುತ್ತವೆ. ಅತಿ ಹೆಚ್ಚು ತೂಕದ ದಿಮ್ಮಿಗಳನ್ನು ಹಾಕಿಕೊಂಡು ಸಂಚಾರ ಮಾಡುತ್ತಿದ್ದು, ರಸ್ತೆ ಗುಂಡಿಗಳು ಹೆಚ್ಚಾಗುತ್ತಿವೆ. ಒಂದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವುದರಿಂದ ರಸ್ತೆಯೂ ಹಾಳಾಗುತ್ತಿದ್ದು, ಒಂದೇ ಸಮಯದಲ್ಲಿ ಹಲವು ಲಾರಿಗಳು ಓಡಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಏಕೆ ಅನುಮತಿ ಕೊಡುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಪೊಲೀಸರ ಭೇಟಿ : ವೀರೇಗೌಡನದೊಡ್ಡಿ ಗ್ರಾಮದಲ್ಲಿ ಭಾರಿ ಗಾತ್ರದ ಕಲ್ಲು ರಸ್ತೆಗೆ ಬಿದ್ದ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಲಾರಿಯನ್ನು ಹಿಡಿದು ಮಾಗಡಿ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದರು. ಪಿಎಸ್‌ಐ ವೆಂಕಟೇಶ್‌ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ದಿಮ್ಮಿಗಳನ್ನು ಸ್ಥಳಾಂತರಿಸುವಂತೆ ಮಾಲೀಕರಿಗೆ ತಿಳಿಸಿದ್ದು, ಈ ಬಗ್ಗೆ ದೂರನ್ನು ಪಡೆಯಲಾಗಿದೆ. ಬೆಳಗ್ಗೆ ಬಿದ್ದ ಕಲ್ಲನ್ನು ಸಂಜೆಯಾದರೂ ಎತ್ತುವ ಕೆಲಸವನ್ನು ಮಾಡಿರಲಿಲ್ಲ. ರಸ್ತೆ ಬದಿಯಲ್ಲಿ ಬಿದ್ದಿದ್ದರಿಂದ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ.

ಎರಡೇ ದಿನದಲ್ಲಿ ಮುಗೀತು 5 ಲಕ್ಷದ ನರೇಗಾ ಕಾಮಗಾರಿ! ಒಂದೇ ಪ್ರಾಜೆಕ್ಟ್‌ಗೆ ಎರಡು ಬಿಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ