ಆ್ಯಪ್ನಗರ

ಮಾಗಡಿ ಎಸ್‌ಬಿಐ ಶಾಖೆ ವಿಸ್ತರಿಸಲು ಪ್ರತಿಭಟನೆ

ಮಾಗಡಿ ತಾಲೂಕು ಕೇಂದ್ರದಲ್ಲಿ ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು ಎಸ್‌ಬಿಐ ಬ್ಯಾಂಕ್‌ಗೆ ವಿಲೀನವಾಗಿ ರೈತರಿಗೆ ಸಾರ್ವಜನಿಕರಿಗೆ ...

Vijaya Karnataka 14 Jul 2019, 5:00 am
ಮಾಗಡಿ: ಮಾಗಡಿ ತಾಲೂಕು ಕೇಂದ್ರದಲ್ಲಿ ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು ಎಸ್‌ಬಿಐ ಬ್ಯಾಂಕ್‌ಗೆ ವಿಲೀನವಾಗಿ ರೈತರಿಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಾಲೂಕು ಕೇಂದ್ರದಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web sbi branch in magadi protests
ಮಾಗಡಿ ಎಸ್‌ಬಿಐ ಶಾಖೆ ವಿಸ್ತರಿಸಲು ಪ್ರತಿಭಟನೆ


ಶುಕ್ರವಾರ ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಎದುರು ರೈತ ಸಂಘ ಬ್ಯಾಂಕ್‌ ವಿಲೀನ ಖಂಡಿಸಿ 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ರೈತರು ಬ್ಯಾಂಕ್‌ ವಿಲೀನದಿಂದ ಆಗುತ್ತಿರುವ ಸಮಸ್ಯೆಯನ್ನು ಬಿಚ್ಚಿಟ್ಟರು.

ಅಧಿಕಾರಿಗಳ ಜತೆ ವಾಗ್ವಾದ: ರೈತರು ಎಸ್‌ಬಿಐ ಶಾಖೆಯ ಮುಂದೆ ಪ್ರತಿಭಟನಾ ಧರಣಿ ನಡೆಸಿ, ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಒಂದು ವಾರದ ಹಿಂದೆಯೇ ಬ್ಯಾಂಕಿನ ವ್ಯವಸ್ಥಾಪಕರಿಗೆ ಪ್ರತಿಭಟನೆ ನಡೆಸುವುದಾಗಿ ಲಿಖಿತ ಹೇಳಿಕೆ ನೀಡಿದ್ದರು. ಮನವಿ ಸ್ವೀಕರಿಸಲು ಆಗಮಿಸಿದ್ದ ಕೇಂದ್ರ ಬ್ಯಾಂಕಿನ ಹಿರಿಯ ಅಧಿಕಾರಿ ನಾಗಶ್ರೀ ಅವರೊಂದಿಗೆ ರೈತ ಸಂಘದ ಪದಾಧಿಕಾರಿಗಳು ವಾಗ್ವಾದ ನಡೆಸಿದರು.

ಕಂಬ ಸುತ್ತಿಸಬೇಡಿ: ಹಸಿರು ಸೇನೆ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ''ಬ್ಯಾಂಕಿನ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಮತ್ತು ಸಾಲನೀಡುವಲ್ಲಿ ಇನ್ನಿಲ್ಲದ ವಿಳಂಬ ಮಾಡಿ, ರೈತರನ್ನು ಕಂಬ ಸುತ್ತಿಸುತ್ತಿದ್ದಾರೆ. ಈಗಿನ ಕಟ್ಟಡದಲ್ಲಿ ಶೌಚಾಲಯ, ಬೆಳಕು, ಮತ್ತು ನಿಲ್ಲಲು ಸ್ಥಳಾವಕಾಶವಿಲ್ಲ. ಹಿರಿಯ ನಾಗರಿಕರು, ಮಹಿಳೆಯರ ಪಾಡಂತೂ ಹೇಳತೀರದು. ಮೊದಲಿದ್ದಂತೆ ಎಸ್‌ಬಿಐನ ಎರಡು ಶಾಖೆಗಳನ್ನು ಆರಂಭಿಸಿ, ಗ್ರಾಹಕರಿಗೆ 15 ದಿನಗಳ ಒಳಗಾಗಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಬ್ಯಾಂಕಿನ ಮೇಲಧಿಕಾರಿಗಳ ವಿರುದ್ಧ ಬೃಹತ್‌ ಹೋರಾಟ ನಡೆಸಲಾಗುವುದು,'' ಎಂದರು.

ಮೂಲಸೌಕರ್ಯಗಳಿಲ್ಲ : ''ರೈತರ ಆತ್ಮಹತ್ಯೆಗೆ ಬ್ಯಾಂಕಿನ ಅಧಿಕಾರಿಗಳೆ ಕಾರಣ. ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಎಸ್‌ಬಿಐ ಶಾಖೆ ವಿಶಾಲವಾಗಿತ್ತು. ಗ್ರಾಹಕರು ಕುಳಿತುಕೊಳ್ಳಲು , ವಾಹನಗಳನ್ನು ನಿಲ್ಲಿಸಲು ಅನುಕೂಲವಾಗಿತ್ತು. ಎರಡು ಶಾಖೆಗಳಲ್ಲಿ ಒಂದನ್ನು ಮುಚ್ಚಿ ಕಿರಿದಾಗಿರುವ, ಗಾಳಿಬೆಳಕು ಮತ್ತು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲದ ಖಾಸಗಿ ಕಟ್ಟಡದಲ್ಲಿ ಒಂದೇ ಒಂದು ಶಾಖೆ ಸೇವೆ ಸಲ್ಲಿಸುತ್ತಿದೆ,'' ಎಂದು ಆರೋಪಿಸಿದ್ದಾರೆ.

ಇದೇ ವೇಳೆ ರೈತ ಸಂಘದ ಮುಖಂಡರಾದ ರಾಮಣ್ಣ, ರಂಗಸ್ವಾಮಿ, ಕುಮಾರ್‌, ಚಕ್ರಬಾವಿ ಗಿರೀಶ್‌, ಸೇರಿದಂತೆ ರೈತ ಸಂಘದ ಹಲವು ಮುಖಂಡರುಗಳು ಭಾಗವಹಿಸಿದ್ದರು.

ಎಸ್‌ಬಿಐ ಬ್ಯಾಂಕ್‌ನಲ್ಲಿ ಸರಕಾರಿ ನೌಕರರ ಸಂಘದ ಸಂಬಳ ನಿವೃತ್ತ ನೌಕರರ ಸಂಬಳ ಸೇರಿ ಸಾಕಷ್ಟು ಖಾತೆಗಳು ಇರುವುದರಿಂದ ಸಿಬ್ಬಂದಿಗಳ ಸಮಸ್ಯೆಯಿಂದ ಗಂಟೆಗಟ್ಟಲೆ ಗ್ರಾಹಕರು ಕಾಯುವಂತಾಗಿದ್ದು, ಕೆಂಪೇಗೌಡ ವೃತ್ತದಲ್ಲಿ ಬ್ಯಾಂಕ್‌ ಇದ್ದು ಪಾರ್ಕಿಂಗ್‌ ಸಮಸ್ಯೆ, ಬ್ಯಾಂಕ್‌ ಚಿಕ್ಕದಾಗಿದ್ದು ಗ್ರಾಹಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
-ಮಧುಗೌಡ, ಹಸಿರು ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ

ಉನ್ನತ ಅಧಿಕಾರಿಗಳಿಗೆ ಮನವಿ
ಮುಚ್ಚಿರುವ ಶಾಖೆಯನ್ನು ಪುನರಾರಂಬಿಸುವ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಮೇಲಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರೋಣ.
-ನಾಗಶ್ರೀ ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ