ಆ್ಯಪ್ನಗರ

ಯೂರಿಯಾ ಕೊರತೆಯಿಂದ ಬಸವಳಿದ ರೈತ, ರಸಗೊಬ್ಬರ ಕೊಳ್ಳಲು ಅನ್ನದಾತರ ಪೈಪೋಟಿ!

ರಸಗೊಬ್ಬರ ಕೊಳ್ಳಲು ಅನ್ನದಾತರ ಪೈಪೋಟಿ ನಡೆಸುತ್ತಿದ್ದಾರೆ. ಪೊಲೀಸ್‌ ಭದ್ರತೆಯಲ್ಲಿ ಮಾರಬೇಕಾದ ಅನಿವಾರ್ಯತೆ ರಾಮನಗರ ಜಿಲ್ಲೆಯಲ್ಲಿ ಬಂದೊದಗಿದೆ. ಜಿಲ್ಲೆಯಲ್ಲಿ 14,200 ಮೆಟ್ರಿಕ್‌ ಟನ್‌ ಯೂರಿಯಾ ಅಗತ್ಯ ಇದೆ. ಬೆಳೆಗಳಿಗೆ ಯೂರಿಯಾ ಸಿಗದೇ ರೈತ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Karnataka Web 16 Sep 2020, 1:26 pm
ರಾಮನಗರ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆಯಿಂದ ರೈತರು ಬಸವಳಿಯುವಂತಾಗಿದೆ. ಬೇಡಿಕೆಗಿಂತ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದುಪ್ಪಟ್ಟು ಬೆಲೆ ನೀಡಿ ಗೊಬ್ಬರ ಕೊಳ್ಳಬೇಕಾದ ಅನಿವಾರ್ಯತೆ ಅನ್ನದಾತರದ್ದು. ಇರುವ ಸ್ವಲ್ಪ ಗೊಬ್ಬರಕ್ಕೆ ರೈತರು ಪೈಪೋಟಿ ನಡೆಸುವುದರಿಂದ ಪೊಲೀಸ್‌ ಭದ್ರತೆಯಲ್ಲಿ ಗೊಬ್ಬರ ಮಾರಾಟ ಮಾಡಬೇಕಾದ ಸ್ಥಿತಿ ಬಂದೊದಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಪ್ರದೇಶದ ವ್ಯಾಪ್ತಿ ಹಿಗ್ಗಿದೆ. ಅದಕ್ಕನುಸಾರ ಗೊಬ್ಬರಕ್ಕೆ ಬೇಡಿಕೆಯೂ ಹೆಚ್ಚಿದೆ. ಆದ್ದರಿಂದ, ಆಯಾ ದಿನ ಬಂದ ಗೊಬ್ಬರದ ದಾಸ್ತಾನು ಅಂದಂದೇ ಮುಗಿದು ಹೋಗುತ್ತಿದೆ. ಈ ಬೇಡಿಕೆ ಹೆಚ್ಚು ದಿನ ಇರುವುದಿಲ್ಲ. ಈ ತಿಂಗಳ ಕೊನೆ ಹೊತ್ತಿಗೆ ಬೇಡಿಕೆ ಕಡಿಮೆಯಾಗಲಿದೆ ಎಂಬುದು ಅಧಿಕಾರಿಗಳ ಉತ್ತರ.

ಜಿಲ್ಲೆಯಲ್ಲಿ ಏನಾಗಿದೆ?
ಜಿಲ್ಲೆಯಲ್ಲಿ 14,200 ಮೆಟ್ರಿಕ್‌ ಟನ್‌ ಯೂರಿಯಾ ಅಗತ್ಯ ಇದೆ. ಆದರೆ, ಈ ತನಕ ಪೂರೈಕೆಯಾಗಿರುವುದು 10145 ಮೆಟ್ರಿಕ್‌ ಟನ್‌ ಗೊಬ್ಬರ ಮಾತ್ರ. 3056 ಮೆಟ್ರಿಕ್‌ ಟನ್‌ ಕೊರತೆ ಉಂಟಾಗಿದೆ. ಹಾಗಾಗಿ ಎಲ್ಲೆಡೆ ಯೂರಿಯಾಗಾಗಿ ಹಾಹಾಕಾರ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಾಳಸಂತೆ ಕೋರರು ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದಾರೆ.
ಕೃತಕ ರಸಗೊಬ್ಬರ, ಯೂರಿಯಾ ಅಭಾವ ಸೃಷ್ಟಿ: 117 ಅಂಗಡಿಗಳ ಪರವಾನಿಗೆ ರದ್ದು

ಸಮಸ್ಯೆಗೆ ಕಾರಣ ಏನು?

ಗೊಬ್ಬರ ದಾಸ್ತಾನಿಗೆ ಜಿಲ್ಲೆಯಲ್ಲಿ ಗೋದಾಮಿನ ವ್ಯವಸ್ಥೆ ಇಲ್ಲ. ಹೀಗಾಗಿ ಪಕ್ಕದ ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಗೊಬ್ಬರ ತರಿಸಿಕೊಳ್ಳಲಾಗುತ್ತಿತ್ತು. ಇನ್ನು ರೈಲಿನಲ್ಲಿ ಬಂದ ಗೊಬ್ಬರವನ್ನು ಇಳಿಸಿಕೊಳ್ಳುವ ವ್ಯವಸ್ಥೆಯೂ ಜಿಲ್ಲೆಯಲ್ಲಿ ಇಲ್ಲ. ಹೀಗಾಗಿ ನಿತ್ಯ 50ರಿಂದ 100 ಟನ್‌ ಗೊಬ್ಬರವನ್ನು ತರಿಸಿಕೊಂಡು ವಿತರಿಸಲಾಗುತ್ತಿದೆ. ಇದು ಸಮಸ್ಯೆಗೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ, ಅನ್ನದಾತನ ಪರದಾಟ

ಯೂರಿಯಾ ಒಂದೇ ಕೊರತೆ

ಜಿಲ್ಲೆಯಲ್ಲಿ ಎಲ್ಲಾ ರಸಗೊಬ್ಬರಗಳ ಕೊರತೆ ಇಲ್ಲ. ಯೂರಿಯಾ ಗೊಬ್ಬರ ಒಂದೇ ಕೊರತೆ ಇರುವುದು. ಡಿಎಪಿ, ಎಂಒಪಿ, ಎಸ್‌ಎಸ್‌ಪಿ ಮೊದಲಾದ ಗೊಬ್ಬರಗಳ ದಾಸ್ತಾನು ಸಾಕಷ್ಟಿದೆ.

ಬೆಲೆ ಹೆಚ್ಚಳ
ಸಾಮಾನ್ಯವಾಗಿ ಒಂದು ಚೀಲ ಯೂರಿಯಾ ಗೊಬ್ಬರಕ್ಕೆ 260 ರೂ. ಆದರೆ, ಕೊರತೆಯನ್ನೇ ಲಾಭ ಮಾಡಿಕೊಂಡಿರುವ ಸಮಯ ಸಾಧಕರು 300ರಿಂದ 350 ರೂ. ಹಣ ವಸೂಲಿ ಮಾಡುತ್ತಿದ್ದಾರೆ.

ತಲುಪಿದ ಗುರಿ
ಪ್ರತಿ ವರ್ಷ ಜಿಲ್ಲೆಯಲ್ಲಿ 95,600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಇರಿಸಿಕೊಳ್ಳುತ್ತಿತ್ತು. ನಾನಾ ಕಾರಣಗಳಿಂದ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ವರ್ಷ ಉತ್ತಮ ಮಳೆ ಹಾಗೂ ಕೊರೊನಾದಿಂದ ಹಳ್ಳಿ ಸೇರಿರುವ ಯುವ ಸಮೂಹ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ 95 ಸಾವಿರಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಈ ವರ್ಷ ಬಿತ್ತನೆ ಆಗಿದೆ.
ಯೂರಿಯಾ ಕೊರತೆಗೆ ಕಾರಣವೇನು: ಅತಿಯಾದ ಯೂರಿಯಾ ಬಳಕೆಯಿಂದ ಸಮಸ್ಯೆ?

9 ಮಂದಿಗೆ ನೋಟಿಸ್‌

ಜಿಲ್ಲೆಯಲ್ಲಿ ಗೊಬ್ಬರನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದವರಿಗೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 9 ಮಂದಿಗೆ ನೋಟಿಸ್‌ ನೀಡಿದ್ದಾರೆ.

ಜಿಲ್ಲೆಯಲ್ಲಿ ಯೂರಿಯಾದ ಕೊರತೆ ಉಂಟಾಗಿದೆ. ಹಾಗಾಗಿ ನಿತ್ಯ ಬರುತ್ತಿರುವ ಗೊಬ್ಬರನ್ನು ಅಂದೇ ಹಂಚಿಕೆ ಮಾಡುತ್ತಿದ್ದೇವೆ.
ಸೋಮ ಸುಂದರ್‌, ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ