ಆ್ಯಪ್ನಗರ

ಮತ್ತೊಂದು ಚುನಾವಣೆಗೆ ಸಿದ್ದಗೊಂಡ ರೇಷ್ಮೆ ನಗರಿ !

ವಿಧಾನಸಭೆ, ಉಪಚುನಾವಣೆ, ಲೋಕಸಭೆ ಚುನಾವಣೆಗಳ ಬಳಿಕ ಮತ್ತೊಂದು ಚುನಾವಣೆ ಎದುರಾಗಿದ್ದು, ಇಡೀ ಜಿಲ್ಲೆಯೇ ಚುನಾವಣೆ ಕಾವಿನಲ್ಲಿ ಬೇಯುತ್ತಿದೆ. ಬಮೂಲ್‌ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇ.12ರಂದು ಒಟ್ಟು 5 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Vijaya Karnataka 24 Apr 2019, 5:00 am
ರಾಮನಗರ: ವಿಧಾನಸಭೆ, ಉಪಚುನಾವಣೆ, ಲೋಕಸಭೆ ಚುನಾವಣೆಗಳ ಬಳಿಕ ಮತ್ತೊಂದು ಚುನಾವಣೆ ಎದುರಾಗಿದ್ದು, ಇಡೀ ಜಿಲ್ಲೆಯೇ ಚುನಾವಣೆ ಕಾವಿನಲ್ಲಿ ಬೇಯುತ್ತಿದೆ. ಬಮೂಲ್‌ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇ.12ರಂದು ಒಟ್ಟು 5 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Vijaya Karnataka Web silk city ready for another election
ಮತ್ತೊಂದು ಚುನಾವಣೆಗೆ ಸಿದ್ದಗೊಂಡ ರೇಷ್ಮೆ ನಗರಿ !


ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕುದೂರು ಕ್ಷೇತ್ರ ಸೇರಿದಂತೆ ಐದು ಸ್ಥಾನಗಳಲ್ಲಿ ಕನಕಪುರ ಹೊರತುಪಡಿಸಿ ಉಳಿದ ನಾಲ್ಕೂ ಸ್ಥಾನಗಳು ತೀವ್ರ ಪೈಪೋಟಿಯಿಂದ ಕೂಡಿವೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ ನಾಯಕರಿಬ್ಬರ ನಡುವೆ ಸಮರ ಏರ್ಪಟ್ಟಿದ್ದರೆ, ಕೆಎಂಎಫ್‌ ಅಧ್ಯಕ್ಷರಾಗಿದ್ದ ರಾಮನಗರದ ಪಿ. ನಾಗರಾಜು ಅವರಿಗೆ ಈ ಬಾರಿ ಡಿ.ಕೆ.ಶಿವಕುಮಾರ್‌ ಅವರೇ ಪರೋಕ್ಷವಾಗಿ ಎದುರಾಳಿಯಾಗಲಿದ್ದಾರೆ. ಇನ್ನು ಮಾಗಡಿಯಲ್ಲಿ ಮೈತ್ರಿ ಧರ್ಮ ಪಾಲನೆಯಾದರಷ್ಟೇ ಎಲ್ಲವೂ ಸುಗಮ, ಇಲ್ಲವಾದರೆ ಚಿತ್ರಣವೇ ಬೇರೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಬಮೂಲ್‌ ಪ್ರಸ್ತುತ ಸಾಲಿನಿಂದ ಹೆಚ್ಚುವರಿ ಒಂದು ಸ್ಥಾನವನ್ನು ಸೃಷ್ಟಿಸಿದ್ದು, ಇದು ಮಾಗಡಿ ತಾಲೂಕಿಗೆ ಲಭಿಸಿದೆ. 12 ನಿರ್ದೇಶಕ ಸ್ಥಾನಗಳನ್ನು 13ಕ್ಕೆ ಏರಿಕೆ ಮಾಡಿದ್ದರಿಂದ ಮಾಗಡಿ ಜತೆಗೆ ಕುದೂರು ಕ್ಷೇತ್ರವೂ ಜನ್ಮ ತಳೆದಿದೆ.

ತಾಲೂಕಿನಲ್ಲಿ ಮತದಾನ ಮಾಡುವ ಅರ್ಹತೆ ಪಡೆದುಕೊಂಡಿರುವ 124 ಎಂಪಿಸಿಎಸ್‌ನ ಮತಗಳನ್ನು ಪಡೆಯಲು ಹಣದ ಹೊಳೆಯೇ ಹರಿದಿದೆ ಎನ್ನಲಾಗುತ್ತಿದೆ. ಎರಡೂ ಕಡೆಯಲಿಂದಲೂ ಪ್ರತಿ ಮತಕ್ಕೆ ತಲಾ 2 ಲಕ್ಷ ರೂ. ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಈ ಹಣ ಹಂಚಿಕೆ ವಿಚಾರವಾಗಿ ಎಂಪಿಸಿಸ್‌ಗಳಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.

ಏಲ್ಲೆಲ್ಲಿ ಹೇಗಿದೆ ಅಖಾಡ?

ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಅವರು ಬಮೂಲ್‌ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಂತಿದ್ದಾರೆ. ಆದರೆ, ಈ ಬಾರಿ ಇವರಿಗೆ ಡಿ.ಕೆ.ಶಿವಕುಮಾರ್‌ ಸೋಲುಣಿಸುಲು ಸಿದ್ದತೆ ನಡೆಸಿದ್ದಾರೆ. ಕೆಎಂಎಫ್‌ ಅಧ್ಯಕ್ಷ ಸ್ಥಾನವನ್ನು ರವೀಂದ್ರ ಅವರಿಗೆ ಹಸ್ತಾಂತರ ಮಾಡದೆ, ಸರಕಾರಕ್ಕೆ ಸೆಡ್ಡು ಹೊಡೆದಿದ್ದ ಪಿ.ನಾಗರಾಜು ಅವರು ಸಚಿವ ಡಿ.ಕೆ.ಶಿವಕುಮಾರ್‌ ಕೋಪಕ್ಕೆ ತುತ್ತಾಗಿದ್ದಾರೆ. ಈ ಹಿನ್ನಲೆಯಲ್ಲಿ ಇವರ ವಿರುದ್ಧ ಸ್ಪರ್ಧಿಸಲು ಸಬ್ಬಕೆರೆ ಶಿವಲಿಂಗಯ್ಯ ಅವರನ್ನು ಡಿಕೆ ಸಹೋದರರು ಸಿದ್ದಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಶಿವಲಿಂಗಯ್ಯ ಅವರಿಗೆ ಕುಮಾರಸ್ವಾಮಿ ಅವರಿಂದ ಗ್ರೀನ್‌ ಸಿಗ್ನಲ್‌ ಸಿಗಬೇಕಿದೆ. ಇದರ ಜವಾಬ್ದಾರಿಯನ್ನು ಸಹ ಡಿ.ಕೆ.ಶಿ ಸಹೋದರರು ಹೊತ್ತಿದ್ದಾರೆ ಎಂದು ಹೇಳಲಾಗಿದೆ.

ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಲಿಂಗೇಶ್‌ ಕುಮಾರ್‌ ಮತ್ತು ಜಯಮುತ್ತು ನಡುವೆ ತೀವ್ರ ಹಣಾಹಣಿ ಇದೆ. ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ ಇವರಿಬ್ಬರ ಸಂಬಂಧ ಹಾವು-ಮುಂಗುಸಿಯಂತಿದೆ. ಲಿಂಗೇಶ್‌ ಕುಮಾರ್‌ ಅವರಿಗೆ ಅನಿತಾ ಕುಮಾರಸ್ವಾಮಿ ಅವರ ಕೃಪಾಕಟಾಕ್ಷವಿದೆ. ಜಯಮುತ್ತು ಸಹ ಚುನಾವಣೆ ಸ್ಪರ್ಧೆ ವಿಷಯದಲ್ಲಿ ಸಾಕಷ್ಟು ಮುಂದೆ ಕ್ರಮಿಸಿರುವುದರಿಂದ ಇವರಿಬ್ಬರ ನಡುವೆ ತೀವ್ರ ಹೋರಾಟ ಏರ್ಪಟ್ಟಿದೆ.

ಮಾಗಡಿ: ಕುದೂರು, ತಿಪ್ಪಸಂದ್ರ, ಸೋಲೂರು ಹೋಬಳಿಗಳನ್ನು ಒಳಗೊಂಡ ಕುದೂರು ಕ್ಷೇತ್ರ, ಹಾಗೂ ಕಸಬಾ ಮತ್ತು ಮಾಡಬಾಳ್‌ ಹೋಬಳಿಗಳನ್ನು ಒಳಗೊಂಡ ಮಾಗಡಿ ಕ್ಷೇತ್ರವಿದೆ. ಈ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರು ಕಣ್ಣಿಟ್ಟಿದ್ದಾರೆ. ಆದರೆ, ಈ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತದೋ ಅಥವಾ ಚುನಾವಣೆ ಎದುರಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಾಗಡಿ ಕ್ಷೇತ್ರದಿಂದ 5 ನೇ ಬಾರಿಗೆ ಚುನಾವಣೆ ಎದುರಿಸಲು ಹಾಲಿ ಬಮೂಲ್‌ ನಿರ್ದೇಶಕ ನರಸಿಂಹಮೂರ್ತಿ, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ರವರ ಸಹೋದರ ಎಚ್‌.ಎನ್‌.ಅಶೋಕ್‌ ಇವರ ನಡುವೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನಿಂದ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮತ್ತು ಬೋರ್‌ವೆಲ್‌ ನರಸಿಂಹಯ್ಯ ನಡುವೆ ಪೈಪೋಟಿ ಇದೆ. ಬೋರ್‌ವೆಲ್‌ ನರಸಿಂಹಯ್ಯ ಕಳೆದ ಎರಡು ಬಾರಿ ಬಮೂಲ್‌ ನಿರ್ದೇಶಕ ಸ್ಥಾನ ಚುನಾವಣೆಯಲ್ಲಿ ಸೋತಿದ್ದು, ಮೂರನೇ ಬಾರಿಗೆ ಅವಕಾಶ ಸಿಗುವ ವಿಶ್ವಾಸದಲ್ಲಿದ್ದಾರೆ.

ಕುದೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಕೆಇಬಿ ರಾಜಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ್ಯ, ಮತ್ತು ವೀರಶೈವ ಮುಖಂಡ ಶಿವಪ್ರಸಾದ್‌ ಹೆಸರು ಹೇಳಿ ಬರುತ್ತಿದ್ದು, ಕೆಇಬಿ ರಾಜಣ್ಣ ಮತ್ತು ಧನಂಜಯ್ಯ ಇವರ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ. ಜೆಡಿಎಸ್‌ ನಿಂದ ಸೋಲೂರು ಹೋಬಳಿಯ ಸಂತೋಷ್‌, ಬ್ಯಾಡ್ರಹಳ್ಳಿ ರಾಜು ಮತ್ತು ಕನ್ನಸಂದ್ರ ಮಂಜುನಾಥ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ಮೈತ್ರಿ ಧರ್ಮ ಪಾಲನೆಯಾದರೂ ಎರಡರಲ್ಲಿ ಒಂದು ಕಾಂಗ್ರೆಸ್‌ಗೆ ಮತ್ತೊಂದು ಜೆಡಿಎಸ್‌ ಪಾಲಾಗಲಿದೆ. ಇಲ್ಲವೇ ಎರಡೂ ಪಕ್ಷಗಳ ಮುಖಂಡರ ನಡುವೆ ತೀವ್ರ ಹಣಾಹಣಿ ಏರ್ಪಡುವುದು ನಿಶ್ಚಿತ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ