ಆ್ಯಪ್ನಗರ

ವಿಧಾನ ಪರಿಷತ್‌ ಹಾಲಿ ಸದಸ್ಯರಾಗಿದ್ದ ಸಯ್ಯದ್‌ ಮುದೀರ್‌ ಆಗಾ ನಿಧನ

ರಾಜ್ಯ ವಿಧಾನ ಪರಿಷತ್‌ ಹಾಲಿ ಸದಸ್ಯರಾಗಿದ್ದ ಸಯ್ಯದ್‌ ಮುದೀರ್‌ ಆಗಾ(ಅಪ್ಸರ್‌ ಆಗಾ) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Vijaya Karnataka Web 10 Jun 2018, 5:00 am
ರಾಮನಗರ(ಗ್ರಾ) : ರಾಜ್ಯ ವಿಧಾನ ಪರಿಷತ್‌ ಹಾಲಿ ಸದಸ್ಯರಾಗಿದ್ದ ಸಯ್ಯದ್‌ ಮುದೀರ್‌ ಆಗಾ(ಅಪ್ಸರ್‌ ಆಗಾ) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Vijaya Karnataka Web mlc


ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಶುಕ್ರವಾರ ಮಧ್ಯ ರಾತ್ರಿ 12 ಗಂಟೆಯ ಸಮಯದಲ್ಲಿ ಸಯ್ಯದ್‌ ಮುದೀರ್‌ ಆಗಾ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಅವರ ಕುಟುಂಬದ ಸದಸ್ಯರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಾಘಾತ ಆಗಿದೆ ಎಂದು ಖಚಿತ ಪಡಿಸಿ, ಚಿಕಿತ್ಸೆಗೆ ಪ್ರಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ರಾತ್ರಿ 1.30ಕ್ಕೆ ಸಯ್ಯದ್‌ ಮುದೀರ್‌ ಕೊನೆಯುಸಿರು ಎಳೆದಿದ್ದಾರೆ. ಅವರ ಮೃತದೇಹವನ್ನು ಶನಿವಾರ ಮುಂಜಾನೆ ರಾಮನಗರದ ಮಸೀದಿ ಮೊಹಲ್ಲಾದಲ್ಲಿರುವ ಅವರ ಸ್ವಗೃಹಕ್ಕೆ ತರಲಾಗಿದೆ.

ರಾಜಕೀಯ ಬಳುವಳಿ: ಸಯ್ಯದ್‌ ಮುದೀರ್‌ ಮೂಲತಃ ಮಾವು ಮತ್ತು ರೇಷ್ಮೆ ವ್ಯಾಪಾರಿ. ಬಡಾವಣೆಗಳ ನಿರ್ಮಾಣ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಇವರ ತಂದೆ ಸಯ್ಯದ್‌ ಅಹಮದ್‌ ಆಗಾ ಅವರು ಕೂಡ ವ್ಯಾಪಾರಿಗಳಾಗಿದ್ದರು.1994ರಲ್ಲಿ ದೇವೇಗೌಡರು ಪ್ರಥಮ ಬಾರಿಗೆ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ತಂದೆ ಮತ್ತು ಮಗ ಇಬ್ಬರೂ ಗೌಡರ ಜತೆಯಾಗಿ ನಿಂತು ಗೆಲ್ಲಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು. ದೇವೇಗೌಡರ ವಿಶ್ವಾಸಗಳಿಸಿ, ಅಪ್ಪನ ಹಾದಿಯಲ್ಲೇ ನಡೆದು ಜನಸೇವೆಗೆ ತೊಡಗಿಸಿಕೊಂಡ ಆಗಾ, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ರೈಲ್ವೆ ನೇಮಕಾತಿ ಮಂಡಳಿ ಸದಸ್ಯ ಸೇರಿ ವಿವಿಧ ಹುದ್ದೆ ಅಲಂಕರಿಸಿದ್ದರು.

ಎಂಎಲ್‌ಸಿ ಅವಧಿ 8 ದಿನ ಬಾಕಿ: 2012ರ ಜೂ. 18 ರಂದು ಜೆಡಿಎಸ್‌ ಪಕ್ಷ ದ ಶಾಸಕರ ವಿಶ್ವಾಸಗಳಿಸಿ ರಾಜ್ಯ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ ಸಯ್ಯದ್‌ ಮುದೀರ್‌ ಅವರ ಅವಧಿ ಇದೇ ಜೂನ್‌ 17ಕ್ಕೆ 6 ವರ್ಷ ಪೂರ್ಣವಾಗಲಿತ್ತು. ಅವಧಿ ಅಂತ್ಯವಾಗಲು ಕೇವಲ 8 ದಿನ ಮಾತ್ರ ಬಾಕಿ ಉಳಿದಿತ್ತು. ಅಷ್ಟರಲ್ಲಿ ವಿಧಿ ಅವರನ್ನು ಕರೆದುಕೊಂಡಿದೆ.

ಗಣ್ಯರಿಂದ ಅಂತಿಮ ನಮನ: ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಚಿವ ಜಮೀರ್‌ ಅಹಮದ್‌, ಡಿ.ಸಿ.ತಮ್ಮಣ್ಣ, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ನಿಸಾರ್‌ ಅಹಮದ್‌, ಎಂ.ಎಲ್‌. ಸಿ.ಎಂ.ಲಿಂಗಪ್ಪ, ಎಸ್‌.ರವಿ, ಸಿ.ಎಂ.ಇಬ್ರಾಹಿಂ, ಮಾಜಿ ಎಂ.ಎಲ್‌.ಸಿ ಅಬ್ದುಲ್‌ ಅಜೀಂ, ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಅನಿತಾಕುಮಾರಸ್ವಾಮಿ, ಕೆ.ರಾಜು ಮುಂತಾದವರು ಭೇಟಿ ಕೊಟ್ಟು ಮೃತರ ಅಂತಿಮ ದರ್ಶನ ಪಡೆದು, ಆಗಾ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸರಕಾರಿ ಗೌರವ: ಸೈಯದ್‌ ಮುದೀರ್‌ ಆಗಾ ಅವರ ಪಾರ್ಥಿವ ಶರೀರವಿರಿಸಿದ್ದ ಪೆಟ್ಟಿಗೆ ಮೇಲೆ ಜಿಲ್ಲಾಡಳಿತದ ವತಿಯಿಂದ ಮೊದಲಿಗೆ ತ್ರಿವರ್ಣ ದ್ವಜವನ್ನು ಹೊದಿಸಿ, ಪುಷ್ಪಗುಚ್ಚವನ್ನಿಟ್ಟು ಗೌರವಿಸಲಾಯಿತು, ಪೊಲೀಸರು ಮೂರು ಸುತ್ತು ಕುಶಲತೋಪು ಹಾರಿಸುವ ಮೂಲಕ ಅರ್ಶುತಾರ್ಪಣೆ ಸಲ್ಲಿಸಿ ಸಕಲ ಸರಕಾರಿ ಗೌರವವನ್ನು ಮೃತರಿಗೆ ಅರ್ಪಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ