ಆ್ಯಪ್ನಗರ

ಮನೆ ಪರಿಸರ ಸುಂದರವಾಗಿಡುವುದೇ ರಂಗೋಲಿ

ಮನೆಯ ಪರಿಸರವನ್ನು ಸುಂದರವಾಗಿ ಸ್ವಚ್ಛವಾಗಿಡುವುದೇ ರಂಗೋಲಿ ಬಿಡುವ ಪ್ರಧಾನ ಉದ್ದೇಶವಾಗಿದೆ ಎಂದು ಸಾಹಿತಿ ಹೊಂಬಾಳಮ್ಮನ ಪೇಟೆ ರಾಮಚಂದ್ರು ತಿಳಿಸಿದರು...

Vijaya Karnataka 15 Jan 2019, 5:00 am
ಮಾಗಡಿ: ಮನೆಯ ಪರಿಸರವನ್ನು ಸುಂದರವಾಗಿ ಸ್ವಚ್ಛವಾಗಿಡುವುದೇ ರಂಗೋಲಿ ಬಿಡುವ ಪ್ರಧಾನ ಉದ್ದೇಶವಾಗಿದೆ ಎಂದು ಸಾಹಿತಿ ಹೊಂಬಾಳಮ್ಮನ ಪೇಟೆ ರಾಮಚಂದ್ರು ತಿಳಿಸಿದರು.
Vijaya Karnataka Web the home environment is beautiful and beautiful
ಮನೆ ಪರಿಸರ ಸುಂದರವಾಗಿಡುವುದೇ ರಂಗೋಲಿ


ಶ್ರೀ ರಂಗನಾಥಸ್ವಾಮಿ ಕೋಠಾರೋತ್ಸವದ ಪ್ರಯುಕ್ತ ಪಟ್ಟಣದ ತಿರುಮಲೆ ತೇರುಬೀದಿಯಲ್ಲಿ ಕರ್ನಾಟಕ ಪ್ರತಿಭಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ರಂಗವಲ್ಲಿ ಅಥವಾ ರಂಗೋಲಿ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಜಾನಪದ ಕಲೆ. 64 ಕಲೆಗಳಲ್ಲಿ ಚಿತ್ರಕಲೆಯೂ ಪ್ರಧಾನವಾದದ್ದು. ಇದರ ಒಂದು ಭಾಗವೇ ರಂಗೋಲಿ. ಮಹಿಳೆಯರು ತಮ್ಮ ಕಲಾ ನೈಪುಣ್ಯ, ಕಲ್ಪನಾ ಶಕ್ತಿಯ ಅಭಿವ್ಯಕ್ತಿಯಾಗಿ ಬೆರಳುಗಳ ಸಹಾಯದಿಂದ ಮೂಡಿಸುವ ಕಲೆಯಾಗಿ ಹೆಚ್ಚು ಪ್ರಚಲಿತ. ಹುಡಿ ಮಣ್ಣು, ಸುಣ್ಣ, ಬಣ್ಣದ ನಾನಾ ಹುಡಿಗಳನ್ನು ಬಳಸಿ ರಚಿಸುವ ಚಿತ್ರವೇ ರಂಗೋಲಿ ಎಂದು ಹೇಳಿದರು.

ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ. ರಂಗಾವಳಿ ಎಂದರೆ ಬಣ್ಣಗಳ ಸಮೂಹ, ರಂಗ ಎಂದರೆ ಕೃಷ್ಣ, ಭಗವಂತ ಎಂದೂ ಅರ್ಥವಿದೆ. ಒಲಿ ಎಂದರೆ ಆನಂದಿಸು, ಅನುಗ್ರಹಿಸು ಎಂದೂ ಅರ್ಥವಿದೆ. ಭಗವಂತನ ಅನುಗ್ರಹಕ್ಕಾಗಿ ರೂಪತಾಳಿದ ಕಲೆಯೇ ರಂಗವಲ್ಲಿ. ಸ್ತ್ರೀಯರ ದೃಷ್ಟಿಯಲ್ಲಿ ಕಲಾರಾಧನೆ ಎಂದರೆ ಭಗವಂತನ ಆರಾಧನೆ. ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಭಗವಂತನಿಗೆ ನಿವೇದಿಸಿಕೊಳ್ಳುವ ಬಿನ್ನಪವಾಗಿ ಕೂಡ ರಂಗೋಲಿಯನ್ನು ಬಿಡಿಸುತ್ತಾರೆ. ರಂಗವಲ್ಲಿ ಭಕ್ತ ಹಾಗೂ ಭಗವಂತನ ನಡುವಣ ಸಂವಹನ ಮಾಧ್ಯಮವೆಂದು ಭಾವಿಸಲಾಗುತ್ತದೆ ಎಂದು ವಿವರಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಪಟ್ಟಣದ ಹೊಸಪೇಟೆ, ತಿರುಮಲೆ, ಸೇರಿದಂತೆ ಮಂಡ್ಯ, ಮದ್ದೂರಿನಿಂದಲೂ ಸ್ಪರ್ಧಿಗಳು ಆಗಮಿಸಿದ್ದು, ಸುಮಾರು 35 ಕ್ಕೂ ಹೆಚ್ಚು ಸ್ಪರ್ಧಿಗಳು ನಾನಾ ಬಗೆಯ ರಂಗೋಲಿಗಳನ್ನು ಸಾಂಪ್ರದಾಯಿಕವಾಗಿ ಬಿಡಿಸಿದರು.

ಹೊಸಪೇಟೆಯ ಶಶಿಕಲಾ (ಪ್ರಥಮ), ಹೊನ್ನಮ್ಮ (ದ್ವಿತೀಯ), ಇಂದ್ರಾಣಿ(ತೃತೀಯ) ಹಾಗೂ ಎರಡು ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಗೋವಿಂದರಾಜು, ಸುನೀಲ್‌, ಪ್ರತಿಭಾ ಕೇಂದ್ರದ ಪದ್ಮನಾಭ, ರಂಗನ ದೇವಾಲಯದ ಆರ್ಚಕರಾದ ವೆಂಕಟೇಶಾಯ್ಯಂಗಾರ್‌, ಕಾರ್ತಿಕ್‌,ಕೃಷ್ಣ, ಶ್ರೀ ಶೈಲ, ಸಂತೋಷ್‌, ವಿಠಲಮೂರ್ತಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ