ಆ್ಯಪ್ನಗರ

ತೋಟಗಾರಿಕೆ ಇಲಾಖೆ ಕಟ್ಟಡ ಧ್ವಂಸ, ವರ್ತಕರ ಆಕ್ರೋಶ

ಹೈಕೋರ್ಟ್‌ ಕೆಂಗಣ್ಣಿನಿಂದ ಪಾರಾಗಲು 40 ವರ್ಷಗಳಷ್ಟು ಹಳೆಯದಾದ ತೋಟಗಾರಿಕೆ ಇಲಾಖೆ ಕಟ್ಟಡ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನೆಲಸಮ ಮಾಡಿದ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕ್ರಮದ ವಿರುದ್ಧ ವರ್ತಕರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 19 Jul 2019, 5:00 am
ಕನಕಪುರ: ಹೈಕೋರ್ಟ್‌ ಕೆಂಗಣ್ಣಿನಿಂದ ಪಾರಾಗಲು 40 ವರ್ಷಗಳಷ್ಟು ಹಳೆಯದಾದ ತೋಟಗಾರಿಕೆ ಇಲಾಖೆ ಕಟ್ಟಡ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನೆಲಸಮ ಮಾಡಿದ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕ್ರಮದ ವಿರುದ್ಧ ವರ್ತಕರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web the horticulture department building wreck the outrage of the workers
ತೋಟಗಾರಿಕೆ ಇಲಾಖೆ ಕಟ್ಟಡ ಧ್ವಂಸ, ವರ್ತಕರ ಆಕ್ರೋಶ


ಏನಿದು ಪ್ರಕರಣ?

ಕನಕಪುರ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 32 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದ ಪೇಟೆಕೆರೆಯನ್ನು ಮುಚ್ಚಿ, ಇತರ ಉದ್ದೇಶಗಳಿಗೆ ಬಳಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಜಲಮೂಲವಾಗಬೇಕಿದ್ದ ಪೇಟೆಕೆರೆ ಮುಚ್ಚುವುದರ ವಿರುದ್ಧ ರೈತಸಂಘದ ಸಂಪತ್‌ ಕುಮಾರ್‌ ಎಂಬವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 20 ಎಕರೆಯಷ್ಟು ಜಾಗವನ್ನು ಕೆರೆಯಾಗಿ ಉಳಿಸಿಕೊಳ್ಳಬೇಕು ಎಂದು ಆದೇಶಿಸಿ, ಉಳಿದ 12 ಎಕರೆ ಜಾಗವನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಆದೇಶ ಮಾಡಿತ್ತು. ಹೈಕೋರ್ಟ್‌ ಆದೇಶವನ್ನು ತನಗೆ ಅನುಕೂಲ ಬಂದಂತೆ ಬಳಸಿಕೊಂಡ ತಾಲೂಕು ಆಡಳಿತ, ಹೈಕೋರ್ಟ್‌ ನಿರ್ದೇಶನ ನೀಡಿದ್ದಕ್ಕಿಂತಲೂ ಹೆಚ್ಚು ಜಾಗವನ್ನು ನಾನಾ ಉದ್ದೇಶಗಳಿಗೆ ಬಳಸಿಕೊಂಡಿತ್ತು.

ಕೆರೆ ಜಾಗದಲ್ಲಿ ನಿವೇಶನ:

ಸರಕಾರಿ ಇಲಾಖೆಗಳ ಉದ್ದೇಶಕ್ಕೆ ಭೂಮಿ ನೀಡುವ ಬದಲು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ 9 ಎಕರೆ ಜಾಗವನ್ನು ನಗರಸಭೆಗೆ ಹಸ್ತಾಂತರಿಸಿ, ಅಲ್ಲಿ ನಿವೇಶನ ರಚಿಸಿ, ರಸ್ತೆ ಅಗಲೀಕರಣದಲ್ಲಿ ಜಾಗ ಕಳೆದುಕೊಂಡವರಿಗೆ ಹಂಚಲಾಗಿತ್ತು.

ಇದರಿಂದ ಸಿಟ್ಟಿಗೆದ್ದ ರೈತ ಸಂಘ, ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಕೆರೆ ಇದ್ದ ಜಾಗದಲ್ಲಿ 20 ಎಕರೆ ಜಾಗವನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ. ಅದರಂತೆ ಸರಕಾರಿ ಇಲಾಖೆಗಳ ಉದ್ದೇಶದ ಹೊರತಾಗಿ ಬಳಸಿದ ಜಾಗವನ್ನು ತೆರವುಗೊಳಿಸುವ ಬದಲಿಗೆ, ತೋಟಗಾರಿಕೆ ಇಲಾಖೆಯ ಉದ್ದೇಶಗಳಿಗೆ ಬಳಸಿದ ಜಾಗವನ್ನೇ ತೆರವುಗೊಳಿಸುತ್ತಿದೆ. ಇದರಿಂದ 40 ವರ್ಷಗಳಿಂದ ರೈತರು ಮತ್ತು ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದ ಕಟ್ಟಡ ಮತ್ತು ಮಾರುಕಟ್ಟೆ ನೆಲಸಮಗೊಂಡಿದೆ.

ದೇಗುಲ ತೆರವಿಗೆ ಮೀನಾಮೇಷ:

ಜನರ ಉಪಯೋಗಕ್ಕೆ ಬರುತ್ತಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ತೆರವಿಗೆ ಹಿಂದೆ ಮುಂದೆ ನೋಡದ ತಾಲೂಕು ಆಡಳಿತ, ಕೆರೆ ಅಂಗಳದಲ್ಲಿ ನಿರ್ಮಾಣಗೊಂಡಿರುವ ಅಯ್ಯಪ್ಪಸ್ವಾಮಿ ದೇಗುಲ ತೆರವು ಮಾಡಲು ಮೀನಮೇಷ ಎಣಿಸುತ್ತಿದೆ. ದೇಗುಲಕ್ಕೆ ಹೊಸ ಜಾಗ ಗುರುತಿಸಿ ಅಲ್ಲಿಗೆ ಸ್ಥಳಾಂತರಿಸಿದ ಬಳಿ ಈ ದೇಗುಲ ತೆರವುಗೊಳಿಸಲು ನಿರ್ಧರಿಸಲಾಗಿದೆ.

ವರ್ತಕರ ವಾದವೇನು?

ಕೆರೆ ಅಂಗಳದಲ್ಲಿ 12 ಎಕರೆ ಭೂಮಿಯನ್ನು ಸರಕಾರಿ ಇಲಾಖೆಗಳ ಅಗತ್ಯಕ್ಕೆ ಬಳಸಿಕೊಳ್ಳಬೇಕು ಎಂಬ ಸ್ಪಷ್ಟ ಸೂಚನೆಯನ್ನು ಹೈಕೋರ್ಟ್‌ ನೀಡಿತ್ತು. ಅಲ್ಲಿ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಲು ಅವಕಾಶ ಇರಲಿಲ್ಲ. ಆದೇಶವನ್ನು ಸರಿಯಾಗಿ ಪಾಲಿಸುವ ಬದಲು, ಬೇಕಾಬಿಟ್ಟಿಯಾಗಿ ವರ್ತಿಸಿ, ಈಗ ಸಾರ್ವಜನಿಕರಿಗೆ ಉಪಯೋಗವಾಗುತ್ತಿದ್ದ ಸೌಲಭ್ಯವನ್ನು ಧ್ವಂಸಗೊಳಿಸಿರುವುದು ರೈತರು ಮತ್ತು ವರ್ತಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣದ ಸಂತ್ರಸ್ತರಿಗೆ ನಿವೇಶನವನ್ನು ಬೇರೆ ಕಡೆ ನೀಡಬಹುದಿತ್ತು. ಅದೇ ರೀತಿ ದೇಗುಲ ನಿರ್ಮಾಣಕ್ಕೂ ಬೇರೆ ಕಡೆ ಜಾಗ ನೀಡಬಹುದಿತ್ತು. ಆ ಮೂಲಕ ತೋಟಗಾರಿಕೆ ಇಲಾಖೆ ಕಟ್ಟಡ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಬಹುದಿತ್ತು. ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಬೇಕಾಬಿಟ್ಟಿ ವರ್ತನೆಗೆ ಈಗ ಕೃಷಿ ಉತ್ಪನ್ನ ಮಾರುಕಟ್ಟೆ ಬಲಿಯಾಗಿದೆ ಎಂಬುದು ವರ್ತಕರ ವಾದ.

ಕೋರ್ಟ್‌ ಆದೇಶದಂತೆ ಯಾರಿಗೆ ಸೇರಬೇಕಿತ್ತು ಜಾಗ?

ಶಿಶು ಕಲ್ಯಾಣ ಇಲಾಖೆ, ಪೊಲೀಸ್‌ ಠಾಣೆ, ನ್ಯಾಯಾಧೀಶರ ವಸತಿಗೃಹ ಮೊದಲಾದ ಸರಕಾರದ ಉದ್ದೇಶಗಳಿಗೆ ಈ ಭೂಮಿ ಬಳಕೆಯಾಗಬೇಕಿತ್ತು.

ಯಾರಿಗೆ ಸೇರಿದೆ?:

ರಸ್ತೆ ಅಗಲೀಕರಣದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ಎಂಬ ಹೆಸರಿನಲ್ಲಿ ಸುಮಾರು 300 ಮಂದಿ ಪ್ರಭಾವಿ ಮತ್ತು ಖಾಸಗಿ ವ್ಯಕ್ತಿಗಳಿಗೆ ನಿವೇಶನ ರೂಪದಲ್ಲಿ ಜಾಗ ಹಂಚಿಕೆ ಆಗಿದೆ.

ತೋಟಗಾರಿಕೆ ಇಲಾಖೆ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ತೆರವಿಗೆ ಜಿಲ್ಲಾಧಿಕಾರಿಗಳ ಆದೇಶವಿದೆ. ಅದರಂತೆ ನಾವು ಅವುಗಳನ್ನು ತೆರವುಗೊಳಿಸುತ್ತಿದ್ದೇವೆ. ಇದರ ಬಗ್ಗೆ ತಕರಾರು ಇದ್ದರೆ, ಹೈಕೋರ್ಟ್‌ಗೆ ದೂರು ನೀಡಲಿ. ಜಿಲ್ಲಾಧಿಕಾರಿಗಳ ಆದೇಶ ಪಾಲಿಸುವುದಷ್ಟೇ ನಮ್ಮ ಕೆಲಸ.
ಆನಂದಯ್ಯ ತಹಸೀಲ್ದಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ