ಆ್ಯಪ್ನಗರ

ಮೇಕೆದಾಟು ಹೋರಾಟದ ಹೆಗ್ಗಳಿಕೆ ರೈತ ಸಂಘದ್ದು, ಕಾಂಗ್ರೆಸ್‌ನದ್ದಲ್ಲ ; ರೈತ ಮುಖಂಡ ಮಂಜೇಗೌಡ

ರಾಜ್ಯದಲ್ಲಿ ಕೊರೊನಾ ಎಂದು ಹೇಳಿ ರೈತರನ್ನು , ಕೂಲಿ ಕಾರ್ಮಿಕರನ್ನು ಬಡವರನ್ನು ಒಕ್ಕಲೆಬ್ಬಿಸಿದ್ದೀರಿ, ನಾಳೆ ರಾಜ್ಯದಲ್ಲಿ ಕೊರೊನಾ ಮೇರೆ ಮೀರಿದರೆ, ಆಡಳಿತ ನಡೆಸುವ ಸರಕಾರ, ವಿರೋಧ ಪಕ್ಷಗಳೇ ಹೊಣೆ. ನಾಳೆಯಿಂದ ರಾಜ್ಯದಲ್ಲಿ ಯಾರಿಗೂ ಕೇಸು ಮತ್ತು ದಂಡ ಹಾಕುವಂತಿಲ್ಲ. ಯಾರನ್ನು ತಡೆಯುವಂತಿಲ್ಲ. ಇದು ಸರಕಾರ ಮತ್ತು ವಿರೋಧ ಪಕ್ಷದ ಕಣ್ಣುಮುಚ್ಚಾಲೆ ಆಟ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಹೇಳಿದರು.

Vijaya Karnataka 14 Jan 2022, 7:14 am
ಕನಕಪುರ: ಮೇಕೆದಾಟು ಹೋರಾಟ ಇಂದು ನಿನ್ನೆಯದ್ದಲ್ಲ, ಇಂದು ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ನಾಟಕವಾಡುತ್ತಿದೆ. ಬಿಜೆಪಿ ಸಹ ರಾಜಕೀಯ ಮಾಡುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಹೇಳಿದರು.
Vijaya Karnataka Web Karnataka Farmers


ಕನಕಪುರ ನಗರದ ರೂರಲ್‌ ಕಾಲೇಜಿನ ಮುಂಭಾಗ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ, ಅವರು ಮಾತನಾಡಿದರು. ಮೇಕೆದಾಟು ಯೋಜನೆಯನ್ನು ರಾಜ್ಯ ಸ್ವಾಗತಿಸಲಿದೆ. ಕುಡಿಯುವ ನೀರಿಗೆ ಮೇಕೆದಾಟು ಆಗಲೇಬೇಕು. ಅದಕ್ಕಾಗಿ ರೈತ ಸಂಘ ಮತ್ತು ಮೇಕೆದಾಟು ಹೋರಾಟ ಸಮಿತಿ 5 ದಿನಗಳ ಪಾದಯಾತ್ರೆ ಮಾಡಿದ್ದೇವೆ, ಇದು ರೈತರ ಹೋರಾಟವಾಗಿದೆ. ಅಂದು ಕೊರೊನಾದಿಂದ ರೈತರ ಬಂಧನವಾಗಿತ್ತು. ಇದು ಗಂಭೀರ ಸಾಂಕ್ರಾಮಿಕ ರೋಗ, ಗಂಭೀರವಾಗಿ ಪರಿಗಣಿಸಿ ಎಂದರು.

ಅಂದು ರೈತರ ಪಾದಯಾತ್ರೆಯನ್ನು ಕೊರೊನಾ ನೆಪದಲ್ಲಿ ಬಂಧನ ಮಾಡಿದ ಪೊಲೀಸರು ಮತ್ತು ಸರಕಾರಕ್ಕೆ ಇಂದು ಕಣ್ಣು , ಕಿವಿ ಇಲ್ಲವೆ? ಕಿವುಡು, ಕುರುಡು ಬಂದಿದೆಯೇ? ಕಾನೂನು ಎಲ್ಲಿರಿಗೂ ಒಂದೇ ಅಲ್ಲವೇ? ಸಾವಿರಾರು ಮಂದಿ ಮಾಸ್ಕ್‌ ಇಲ್ಲದೆ ಗುಂಪು ಗುಂಪಾಗಿ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಕೊರೊನಾ ಎಂದು ಹೇಳಿ ರೈತರನ್ನು , ಕೂಲಿ ಕಾರ್ಮಿಕರನ್ನು ಬಡವರನ್ನು ಒಕ್ಕಲೆಬ್ಬಿಸಿದ್ದೀರಿ, ನಾಳೆ ರಾಜ್ಯದಲ್ಲಿ ಕೊರೊನಾ ಮೇರೆ ಮೀರಿದರೆ, ಆಡಳಿತ ನಡೆಸುವ ಸರಕಾರ, ವಿರೋಧ ಪಕ್ಷಗಳೇ ಹೊಣೆ. ನಾಳೆಯಿಂದ ರಾಜ್ಯದಲ್ಲಿ ಯಾರಿಗೂ ಕೇಸು ಮತ್ತು ದಂಡ ಹಾಕುವಂತಿಲ್ಲ. ಯಾರನ್ನು ತಡೆಯುವಂತಿಲ್ಲ. ಇದು ಸರಕಾರ ಮತ್ತು ವಿರೋಧ ಪಕ್ಷದ ಕಣ್ಣುಮುಚ್ಚಾಲೆ ಆಟ ಎಂದರು.
ಹಾಸನದಲ್ಲೊಂದು ಅಮಾನವೀಯ ಘಟನೆ; ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ! ವ್ಯಾಪಕ ಆಕ್ರೋಶ
ಸರಕಾರ ರೈತ ಸಂಘಕ್ಕೆ ಕೊಟ್ಟ ಭರವಸೆಯಂತೆ ಕೂಡಲೇ ಮೇಕೆದಾಟು ಯೋಜನೆ ನಿರ್ಮಾಣ ಮಾಡಬೇಕು. ರೈತರಿಗೆ ನೆರವಾಗಬೇಕು, ಕುಡಿಯುವ ನೀರು ಕೊಡಬೇಕು, ವಿದ್ಯುತ್‌ ಸಮಸ್ಯೆ ನೀಗಬೇಕು, ಇದಿಷ್ಟು ಕೂಡಲೆ ಆಗಬೇಕು. ಇದು ಸಾಧ್ಯವಾಗದಿದ್ದರೆ ಸಾವಿರಾರು ರೈತರು ನಮ್ಮೊಂದಿಗೂ ಬರಲಿದ್ದಾರೆ. ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು. ಗೌರವಾಧ್ಯಕ್ಷ ಸಂಪತ್‌ಕುಮಾರ್‌, ನಾಗರತ್ನಮ್ಮ, ಮಾರಮ್ಮ, ಶಿವಕುಮಾರ್‌, ಗಜೇಂದ್ರಸಿಂಗ್‌, ದೇವರಾಜು, ಅಂತೋಣಿ ರಾಜ್‌, ಮಂಗಳಮ್ಮ, ನಾಗೇಶ್‌ಗೌಡ ಸೇರಿದಂತೆ ಜಿಲ್ಲೆಯ 6 ಮುಖಂಡರು ಹಾಜರಿದ್ದರು.

ಮುಂದಿನ ಲೇಖನ