ಆ್ಯಪ್ನಗರ

ಬೈಕ್‌ಗೆ ಕಾರು ಡಿಕ್ಕಿ ಹೊಡೆಸಿ ದರೋಡೆಗೆ ಯತ್ನ: ಮೂವರ ಸೆರೆ

ತಾಲೂಕಿನ ಸುಳ್ಳೇರಿ ಗ್ರಾಮದ ಕೆರೆ ಏರಿಯ ಮೇಲೆ ಮೈಕ್ರೋ ಫೈನಾನ್ಸ್‌ ಕಂಪನಿಯ ನೌಕರನ ದ್ವಿಚಕ್ರವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಹಣ ದರೋಡೆ ...

Vijaya Karnataka 18 May 2019, 5:00 am
ಚನ್ನಪಟ್ಟಣ: ತಾಲೂಕಿನ ಸುಳ್ಳೇರಿ ಗ್ರಾಮದ ಕೆರೆ ಏರಿಯ ಮೇಲೆ ಮೈಕ್ರೋ ಫೈನಾನ್ಸ್‌ ಕಂಪನಿಯ ನೌಕರನ ದ್ವಿಚಕ್ರವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಹಣ ದರೋಡೆ ಮಾಡಲು ದುಷ್ಕರ್ಮಿಗಳ ಗುಂಪೊಂದು ಯತ್ನಿಸಿದೆ.
Vijaya Karnataka Web three held for attempting robbery
ಬೈಕ್‌ಗೆ ಕಾರು ಡಿಕ್ಕಿ ಹೊಡೆಸಿ ದರೋಡೆಗೆ ಯತ್ನ: ಮೂವರ ಸೆರೆ


ಸಾಲದ ಕಂತಿನ ಹಣವನ್ನು ವಸೂಲಿ ಮಾಡುವ ಬಿಎಸ್‌ಎಸ್‌ ಮೈಕ್ರೋ ಫೈನಾನ್ಸ್‌ ಕಂಪನಿ ನೌಕರ ನಿರಂಜನ್‌, ಅವರು ಹಳ್ಳಿಹಳ್ಳಿ ಸುತ್ತಿ ಸಾಲದ ಕಂತಿನ ಹಣ ಸಂಗ್ರಹಿಸಿ ಪಟ್ಟಣಕ್ಕೆ ಮರಳಿ ಬರುತ್ತಿದ್ದಾಗ ತಮ್ಮ ಕಾರನ್ನು ನಿರಂಜನ್‌ ಬೈಕ್‌ಗೆ ಡಿಕ್ಕಿ ಹೊಡೆಸಿದ ಮೂವರು ದರೋಡೆಕೋರರ ಗುಂಪು, ನಿರಂಜನ್‌ ಬಳಿ ಇದ್ದ ಹಣ ಬ್ಯಾಗ್‌ ಅಪಹರಿಸಲು ಯತ್ನಿಸಿತು. ಅದೃಷ್ಟವಶಾತ್‌, ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ನಿರಂಜನ್‌ ನೆರವಿಗೆ ಬಂದರು. ಜನ ಸೇರುತ್ತಿರುವುದನ್ನು ಗಮನಿಸಿದ ದರೋಡೆಕೋರರು ಕಾರಿನಲ್ಲಿ ಪರಾರಿಯಾದರು.

ಬೆನ್ನಟ್ಟಿ ಹಿಡಿದ ಪೊಲೀಸರು: ದರೋಡೆಕೋರರು ಕಾರಿನಲ್ಲಿ ಪರಾರಿಯಾಗುತ್ತಿರುವ ಮಾಹಿತಿ ಪಡೆದ ಅಕ್ಕೂರು ಪೊಲೀಸ್‌ ಠಾಣೆಯ ಪಿಎಸೈ ಭಾಸ್ಕರ್‌ ಹಾಗೂ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರನ್ನು ಬೆನ್ನಟ್ಟಿ ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್‌(29), ಶಿವಕುಮಾರ್‌ (30), ಮಂಜು(30) ಎಂಬ ದರೋಡೆಕೋರರನ್ನು ಬಂಧಿಸಿ, ಅವರು ದುಷ್ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವರ್ಶಕ್ಕೆ ಪಡೆದಿದ್ದಾರೆ. ದರೋಡೆಕೋರರು ಚನ್ನಪಟ್ಟಣ, ಮಂಡ್ಯ ಹಾಗೂ ಬೆಂಗಳೂರಿನವರೆಂದು ಹೇಳಲಾಗಿದೆ.

ಮಾಜಿ ಉದ್ಯೋಗಿ: ಈ ಪ್ರಕರಣದ ಪ್ರಮುಖ ಆರೋಪಿ ಅರುಣ್‌, ಅದೇ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಂದುವರೆ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಸಾಲಗಾರರಿಂದ ನಿತ್ಯ ಲಕ್ಷಾಂತರ ರೂ. ಹಣ ಸಂಗ್ರಹವಾಗುವುದನ್ನು ಖಚಿತವಾಗಿ ಅರಿತಿದ್ದ ಅರುಣ್‌, ಸುಲಭವಾಗಿ ಹಣ ಸಂಪಾದನೆಯ ಆಸೆಯಿಂದ ಸ್ನೇಹಿತರಾದ ಶಿವಕುಮಾರ್‌ ಹಾಗೂ ಮಂಜು ಜತೆ ಸೇರಿ ದರೋಡೆಗೆ ಯತ್ನಿಸಿದ್ದ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಈ ವಿಷಯ ಬಾಯಿಬಿಟ್ಟಿದ್ದಾರೆ.

60 ಸಾವಿರ ದೋಚಿದ್ದರು: ಬಂಧಿತರಿಗೆ ದರೋಡೆ ಹೊಸದೇನೂ ಅಲ್ಲ. ಇದೇ ಗುಂಪು ಕೆಲ ತಿಂಗಳ ಹಿಂದೆ ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇದೇ ಕಂಪನಿಯ ನೌಕರನನ್ನು ಅಡ್ಡಗಟ್ಟಿ 60 ಸಾವಿರ ರೂ. ಹಣ ದೋಚಿತ್ತು. ಅಲ್ಲದೆ ಕನಕಪುರದಲ್ಲೂ ಈ ಗುಂಪು ಹಲವು ದರೋಡೆ ನಡೆಸಿತ್ತು. ಹಾಡಹಗಲೇ ಅಡ್ಡಗಟ್ಟಿ ದರೋಡೆ ನಡೆಸುವುದು ಈ ಗುಂಪಿನ ಹವ್ಯಾಸವಾಗಿದೆ ಎಂಬುದು ಪೊಲೀಸರ ಸಂದೇಹ.

ಅಕ್ಕೂರು ಪೊಲೀಸ್‌ ಠಾಣೆಯ ಪಿಎಸೈ ಭಾಸ್ಕರ್‌ ಹಾಗೂ ಸಿಬ್ಬಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧಿತ ದರೋಡೆಕೋರರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ