ಆ್ಯಪ್ನಗರ

ಯಂತ್ರಕ್ಕೆ ಸಿಲುಕಿ ಕೈ ಕಳೆದುಕೊಂಡ ಕಾರ್ಮಿಕ :ಪ್ರಕರಣ ಗುಟ್ಟಾಗಿಟ್ಟ ಆಡಳಿತ ಮಂಡಳಿ

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟೌ ಕ್ರಾಫ್ಟ್‌ ಕಾರ್ಖಾನೆಯಲ್ಲಿ ಕಳೆದ ತಿಂಗಳು ಗ್ಯಾಸ್‌ ಸೋರಿಕೆಯಿಂದ ಬೆಂಕಿ ಅನಾಹುತ ಮಾಸುವ ಮುನ್ನವೇ ಮತ್ತೊಂದು ಅವಘಢ ಸಂಭವಿಸಿ ಕಾರ್ಖಾನೆಯ ...

Vijaya Karnataka 12 Dec 2018, 5:00 am
ಹಾರೋಹಳ್ಳಿ (ಕನಕಪುರ ತಾ.): ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟೌ ಕ್ರಾಫ್ಟ್‌ ಕಾರ್ಖಾನೆಯಲ್ಲಿ ಕಳೆದ ತಿಂಗಳು ಗ್ಯಾಸ್‌ ಸೋರಿಕೆಯಿಂದ ಬೆಂಕಿ ಅನಾಹುತ ಮಾಸುವ ಮುನ್ನವೇ ಮತ್ತೊಂದು ಅವಘಢ ಸಂಭವಿಸಿ ಕಾರ್ಖಾನೆಯ ಕರ್ತವ್ಯದಲ್ಲಿದ್ದ ಕಾರ್ಮಿಕನ ಕೈ ಕತ್ತರಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web worker who lost his hand to the machine the case is a secret governing body
ಯಂತ್ರಕ್ಕೆ ಸಿಲುಕಿ ಕೈ ಕಳೆದುಕೊಂಡ ಕಾರ್ಮಿಕ :ಪ್ರಕರಣ ಗುಟ್ಟಾಗಿಟ್ಟ ಆಡಳಿತ ಮಂಡಳಿ


ಸ್ಟವ್‌ಕ್ರಾಫ್ಟ್‌ ಕಾರ್ಖಾನೆಯ ಆರ್‌.ಸಿ. ಯೂನಿಟ್‌ನಲ್ಲಿ ಪ್ರೆಸ್ಸಿಂಗ್‌ ಆಪರೇಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ದೊಂಬರದೊಡ್ಡಿ ಗ್ರಾಮದ ಡಿ.ಜಿ.ಅಶೋಕ್‌ (24) ಮುಂಗೈಗೆ ತೀವ್ರ ಗಾಯವಾಗಿ ಕೈ ಕಳೆದುಕೊಂಡಿದ್ದಾರೆ.

ಅವಗಢ ಸಂಭವಿಸಿ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಈತನನ್ನು ಕೂಡಲೇ ಬೆಂಗಳೂರಿನ ವಸಂತನಗರದ ಜೈನ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಆರ್‌.ಸಿ. ಯೂನಿಟ್‌ನಲ್ಲಿ ಯಂತ್ರ ಕೆಟ್ಟಿದ್ದರಿಂದ ಕಾರ್ಮಿಕನ ಕೈ ಮೆಷಿನ್‌ನ ಒಳಭಾಗಕ್ಕೆ ತಗುಲಿ ಮುಂಗೈ ಕತ್ತರಿಸಿಹೋಗಿದೆ. ಈ ಸಂಬಂಧ ಗಾಯಾಳುವಿನ ತಾಯಿ ಸರೋಜಮ್ಮ ಹಾರೋಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಗಾಂಧಿ ಮತ್ತು ಅಲ್ಲಿನ ಸೂಪರ್‌ ವೈಸರ್‌ಗಳಾದ ವಿನೋದ್‌ ಮತ್ತು ಶ್ರೇಯಸ್‌ ರವರ ವಿರುದ್ಧ ಸುರಕ್ಷ ತಾ ವೈಫಲ್ಯ ಮತ್ತು ನಿರ್ವಹಣಾ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತ್ಯುಕೂಪವಾಗುತ್ತಿರುವ ಕಾರ್ಖಾನೆ: ಕಾರ್ಮಿಕರ ಆರೋಪ

ಹಾರೋಹಳ್ಳಿ ಸ್ಟವ್‌ಕ್ರಾಫ್ಟ್‌ ಕಾರ್ಖಾನೆಯಲ್ಲಿ ನ.13 ರಂದು ಯೂನಿಟ್‌ವೊಂದರಲ್ಲಿ 50 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗ್ಯಾಸ್‌ ಸೋರಿಕೆಯ ಒತ್ತಡಕ್ಕೆ ಸಂಭವಿಸಿದ ಬೆಂಕಿ ಅವಘಢದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ದ್ದು 11 ಮಂದಿ ಕಾರ್ಮಿಕರು ಇಂದಿಗೂ ಸುಟ್ಟ ಗಾಯಗಳೊಂದಿಗೆ ಸಾವು-ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ದುರ್ಘಟನೆ ನಡೆದಿದ್ದು ಈ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸರಿಯಾದ ಸುರಕ್ಷ ತೆಯಿಲ್ಲದೆ ಪ್ರತಿವರ್ಷ ಕಾರ್ಮಿಕರ ಸಾವು-ನೋವು ಆಗುವ ಮೂಲಕ ಮೃತ್ಯುಕೂಪವಾಗುತ್ತಿದೆ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.

ನೋಟಿಸ್‌ ಜಾರಿ: ಕಾರ್ಮಿಕರ ಗ್ಯಾಸ್‌ ಸೋರಿಕೆ ಅವಘಢದ ಸ್ಥಳಕ್ಕೆ ರಾಜ್ಯ ಕಾರ್ಮಿಕ ಇಲಾಖೆಯ ಉಪ ಆಯುಕ್ತ ರವಿಕುಮಾರ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್‌ ಆನಂದ್‌ಕಟ್ಟಿ, ಕಾರ್ಖಾನೆಯ ಮತ್ತು ಬಾಯ್ಲರ್‌ಗಳ ಇಲಾಖೆಯ ಉಪನಿರ್ದೇಶಕ ರಮೇಶ್‌, ತಾಲೂಕು ಕಾರ್ಮಿಕ ನಿರೀಕ್ಷ ಕ ಮಂಜುನಾಥ್‌ ಸ್ಥಳ ಪರಿಶೀಲನೆ ಮಾಡಿ ನೋಟಿಸ್‌ ಜಾರಿಮಾಡಿ ಸರಿಪಡಿಸಿಕೊಳ್ಳುವಂತೆ ಹೇಳಿ ಹೋಗಿದ್ದರು.ಕಾರ್ಖಾನೆಯ ಆಡಳಿತ ವೈಫಲ್ಯ ಮತ್ತು ನಿರ್ಲಕ್ಷ್ಯತೆಯ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಅಧಿಕಾರಿಗಳು ಇವರ ವಿರುದ್ಧ ಮೃದುವಾಗಿ ವರ್ತಿಸಿದ್ದುದು ಅನುಮಾನಕ್ಕೆ ಕಾರಣವಾಗಿತ್ತು.

ಕ್ಯಾರೇ ಎನ್ನದ ಆಡಳಿತ ಮಂಡಳಿ: ಇಷ್ಟೆಲ್ಲಾ ದುರಂತಗಳು ಸಂಭವಿಸಿದ್ದರೂ ಠಾಣೆಯಲ್ಲಿ ಈಗಾಗಲೇ ಎರಡು-ಮೂರು ಪ್ರಕರಣಗಳು ದಾಖಲಾಗಿ ಕಾರ್ಮಿಕ ಇಲಾಖೆಯಿಂದ ನೋಟಿಸ್‌ ಜಾರಿಯಾಗಿದ್ದರೂ ಸಹ ಕಾರ್ಮಿಕರಿಗೆ ಸುರಕ್ಷ ತೆ ನೀಡಲು ಆಡಳಿತ ಮಂಡಳಿ ವಿಫಲರಾಗಿದ್ದಾರೆ. ಇವರು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಕಾರ್ಮಿಕರ ಜೀವಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಇವರು ಕಾನೂನಿಗೆ ಕ್ಯಾರೇ ಎನ್ನದೇ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಿದ್ದಾರೆಂದು ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಹಿತಿಗೆ ನಿರಾಕರಣೆ: ಈ ಕಾರ್ಖಾನೆಯಲ್ಲಿ ಯಾವುದೇ ದುರಂತಗಳು ಸಂಭವಿಸಿದರೂ ಘಟನೆಯನ್ನು ಮುಚ್ಚಿಹಾಕುವ ಹಿನ್ನೆಲೆಯಲ್ಲಿ ಅಸಡ್ಡೆಯಿಂದ ವರ್ತಿಸುವುದು ಕಂಡುಬರುತ್ತದೆ. ಈ ಬಾರಿಯೂ ಅದೇರೀತಿ ಕಳೆದ ಎರಡು-ಮೂರು ದಿನಗಳಿಂದ ಮಾಹಿತಿ ನೀಡಿರಲಿಲ್ಲ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಕ್ರಮಕ್ಕೆ ಒತ್ತಾಯ: ಘಟನೆಗೆ ಸಂಭವಿಸಿದಂತೆ ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕಸ್ತೂರಿ ಕರ್ನಾಟಕ ರಕ್ಷ ಣಾ ಸೇನೆ ರಾಜ್ಯಾಧ್ಯಕ್ಷ ಆಂಜನಪ್ಪ ಹಾಗು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ