ತೀರ್ಥಹಳ್ಳಿ: ಅಡಕೆ ದರ ಕುಸಿತ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜೂನ್ 27ರಂದು ನವ ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಗೆ ನಿರ್ಧರಿಸಲಾಗಿದೆ. ಅಡಕೆ ದರ ಕುಸಿತ ಸಂಗತಿಯನ್ನು ರಾಜಕೀಯ ದಾಳ ಮಾಡಿಕೊಳ್ಳುವುದು ರೈತರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ರಾಜ್ಯ ಬಿಜೆಪಿ ಅಡಕೆ ಬೆಳೆಗಾರ ರೈತರ ಪ್ರಕೋಷ್ಟ ಸಂಚಾಲಕ, ಮಾಜಿ ಶಾಸಕ ಆರಗಜ್ಞಾನೇಂದ್ರ ಹೇಳಿದರು.
ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಳೆಯುವ ಪ್ರದೇಶದ ಸಂಸದ, ಶಾಸಕರ ತಂಡ ಕೇಂದ್ರ ಹಣಕಾಸು, ವಾಣಿಜ್ಯ, ಕೃಷಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಿದೆ. ಅಡಕೆ ದರ ಕುಸಿತಗೊಂಡಿರುವುದಕ್ಕೆ ಕೇಂದ್ರ ಸರಕಾರದ ಆಮದು ನೀತಿ ಕಾರಣವಲ್ಲ. ಅಡಕೆ ಅಧಿಕ ಉತ್ಪಾದನೆ, ದಾಸ್ತಾನು, ಉತ್ತರ ಭಾರತದಲ್ಲಿ ಬರಗಾಲ ಉದ್ಭವಿಸಿರುವ ಕಾರಣ ಬಳಕೆ ಕಡಿಮೆಗೊಂಡಿರುವುದು ಪ್ರಮುಖ ಕಾರಣ. ರಾಜ್ಯ ಸರಕಾರ ತಕ್ಷಣ ಅಡಕೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.
ಅಡಕೆ ದರ ಕುಸಿದ ಈ ಸಂದರ್ಭ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅಗತ್ಯವಿಲ್ಲ. ಕೇಂದ್ರದ ಯುಪಿಎ ಸರಕಾರದ ಅವಧಿಯಲ್ಲಿ ಅಡಕೆ ದರ ಸಂಪೂರ್ಣ ಕುಸಿತಗೊಂಡಾಗ 2008ರಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅಡಕೆಗೆ ಬೆಂಬಲ ಬೆಲೆ ಘೋಷಿಸಿ 10 ಕೋಟಿ ರೂ. ಬಿಡುಗಡೆ ಮಾಡಿದ್ದರು. ಯುಪಿಎ ಸರಕಾರ ಜಾರಿಗೊಳಿಸಿದ ಆಮದು ನೀತಿಯನ್ನು ಈಗಿನ ಕೇಂದ್ರ ಸರಕಾರ ಮುಂದುವರಿಸಿದೆ. ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಅಡಕೆ ಬೆಲೆ ಕುಸಿತಕ್ಕೆ ಕೇಂದ್ರ ಸರಕಾರ ಕಾರಣ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ. ಅಡಕೆ ಬೆಳೆಗಾರರು ಒಗ್ಗಟ್ಟಿನಿಂದ ಇರುವುದು ಮುಖ್ಯ ಎಂದರು.
ಪ್ರತಿಭಟನೆ ಹೆಸರಲ್ಲಿ ಮಾಜಿ ಸಚಿವ ಕಿಮ್ಮನೆರತ್ನಾಕರ್ ಏಕವಚನದಲ್ಲಿ ತಮ್ಮನ್ನು ನಿಂದಿಸಿದ್ದಾರೆ. ಅಧ್ಯಯನ ಶೀಲ, ಯಾರನ್ನೂ ದ್ವೇಷ ಮಾಡಲ್ಲ ಎಂದು ಹೇಳುವ ಕಿಮ್ಮನೆರತ್ನಾಕರ್ ಬಳಸಿರುವ ಶಬ್ದ ಅವರಿಗೆ ಶೋಭೆ ತರದು. ಕಿಮ್ಮನೆ ದ್ವೇಷಿ ಎನ್ನುವುದರಲ್ಲಿ ಅನುಮಾನವಿಲ್ಲ. ಅಸಮರ್ಥ ಸಚಿವ ಎಂಬುದು ಆರಂಭದಲ್ಲೇ ಜನರಿಗೆ, ಸರಕಾರಕ್ಕೆ ಗೊತ್ತಾಗಿದೆ. ಸಿಎಂ ಸಿದ್ದರಾಮಯ್ಯ ಮೇಲಿರುವ ಸಿಟ್ಟನ್ನು ಕಿಮ್ಮನೆ ತಮ್ಮ ವಿರುದ್ಧ ತೋರಿಸಿದರೆ ನಾನೇನು ಮಾಡಲಿ. ಕ್ಷೇತದಲ್ಲಿ ಬಿಜೆಪಿ ಕಿತ್ತೆಸೆಯಲು ಸಾಧ್ಯವಿಲ್ಲ. ಕ್ಷೇತ್ರದ ಜನರು ಕಿಮ್ಮನೆ ಅವರನ್ನು ವಿಸರ್ಜನೆ ಮಾಡಲಿದ್ದಾರೆ ಎಂದು ಆರಗ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮುಖಂಡ ನಾಗರಾಜಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋಣಂದೂರು ಮೋಹನ್ಶೆಟ್ಟಿ, ಪುರ ಪಂಚಾಯಿತಿ ಸದಸ್ಯ ಸಂದೇಶಜವಳಿ ಇದ್ದರು.
---------------
ಅಡಕೆ ಹಾನಿಕಾರಕ ಎಂದು ಹಿಂದಿನ ಯುಪಿಎ ಸರಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣ ಪತ್ರ ವಾಪಸ್ ಪಡೆಯುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಎಲ್ಲ ಪ್ರಯತ್ನ ಮಾಡಿದೆ. ಕಾಂಗ್ರೆಸ್ ದುರುದ್ದೇಶದಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ರೈತರ ಹಿತ ಕಾಪಾಡುವುದೇ ಬಿಜೆಪಿ ಗುರಿ.
- ಆರಗಜ್ಞಾನೇಂದ್ರ