ಶಿವಮೊಗ್ಗ: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಪ್ರಕರಣದಿಂದ ಹಿಂದೆ ಸರಿಯುವುದರ ಜತೆಗೆ ಕೇಂದ್ರ ಸರಕಾರ ಕಾವೇರಿ ಮೇಲುಸ್ತುವಾರಿ ಪ್ರಧಾನ ಕಾರ್ಯದರ್ಶಿ ಶಶಿ ಶೇಖರ್ ಅವರನ್ನು ವರ್ಗಾಯಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಜಯಲಲಿತ ಪರ ವಕೀಲರಾಗಿ ಕಾರ್ಯನಿರ್ವಹಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉದಯ್ಲಲಿತ್ ಅವರ ತೀರ್ಪನ್ನು ಜನಸಮಾನ್ಯರು ಗೌರವಿಸುತ್ತಿಲ್ಲ. ಹೀಗಾಗಿ ಈ ವಿಚಾರಣೆಯಿಂದ ಹಿಂದೆ ಸರಿದು ಬೇರೊಬ್ಬ ನ್ಯಾಯ ಮೂರ್ತಿಗಳಿಂದ ವಿಚಾರಣೆ ನಡೆಸಿ ಜನತೆಗೆ ನ್ಯಾಯಾಂಗದ ಮೇಲೆ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾವೇರಿ ಮೇಲುಸ್ತುವಾರಿ ಪ್ರಧಾನ ಕಾರ್ಯದರ್ಶಿ ಶಶಿಶೇಖರ್ ಅವರು ಸಹ ತಮಿಳುನಾಡಿನ ಅಧಿಕಾರಿ. ಹೀಗಾಗಿ ಕೇಂದ್ರ ಸರಕಾರವು ಶಶಿ ಶೇಖರ್ ಅವರನ್ನು ವರ್ಗಾವಣೆ ಮಾಡಿ ತಟಸ್ಥ ಅಧಿಕಾರಿಯನ್ನು ನೇಮಕ ಮಾಡಿ ರಾಜ್ಯಕ್ಕೆ ಪದೇ ಪದೇ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಮತ್ತು ವಕೀಲರ ಅಸಮರ್ಥ ವಾದದಿಂದಾಗಿ ತಮಿಳುನಾಡಿಗೆ ನೀರು ಹರಿಸುವಂತಾಗಿದೆ. ಸುಪ್ರೀಂ ಕೋರ್ಟ್ಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಸರಕಾರ ವಿಫಲವಾಗಿದೆ. ತಮಿಳುನಾಡಿಗೆ ನೀರು ಹರಿಯಲು ಅವಕಾಶ ಮಾಡಿಕೊಟ್ಟು ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಹೀಗಾಗಿ ಸರಕಾರ ಕೆಆರ್ಎಸ್ ಅಚ್ಚುಕಟ್ಟು ರೈತರಿಗೆ ಎಕರೆ 25 ಸಾವಿರ ರೂ. ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಕಬ್ಬಿನ ಉತ್ಪನ್ನಗಳ ಲಾಭ ಹಂಚಿಕೆಯಲ್ಲಿ ರಾಜ್ಯ ಸರಕಾರ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದೆ. ಲಾಭ ಹಂಚಿಕೆ ಬಗ್ಗೆ ತಿರ್ಮಾನ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ. 2015-16ನೇ ಸಾಲಿನ ಎಸ್ಎಪಿ ಕಾಯಿದೆ ಪ್ರಕಾರ ರಾಜ್ಯದ ರೈತರಿಗೆ 1000ಕೋಟಿ ರೂ.ಗಳಿಗೂ ಹೆಚ್ಚು ಕಬ್ಬಿನ ಉತ್ಪನ್ನಗಳ ಲಾಭವನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಒಗ್ಗಟ್ಟಿನ ತೀರ್ಮಾನದಂತೆ 4ತಿಂಗಳ ಹಿಂದೆ ಕಬ್ಬು ಬೆಳೆ ರಜಾ ವರ್ಷ ಎಂದು ಘೋಷಣೆ ಮಾಡಿದ ಪರಿಣಾಮ ಶೇ.40ರಷ್ಟು ಕಬ್ಬು ಉತ್ಪಾದನೆ ಕಡಿಮೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಕಾರ್ಖಾನೆಗಳು ಕಬ್ಬು ಖರೀದಿಸಲು ಪೈಪೋಟಿ ನಡೆಸುವಂತಾಗಿದೆ. ಸರಕಾರ ಕೂಡಲೇ ಭದ್ರಾವತಿ ಎಂಪಿಎಂ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು. ಅದಕ್ಕಾಗಿ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಎನ್. ಎಚ್.ದೇವಕುಮಾರ್, ಅತ್ತಹಳ್ಳಿ ದೇವರಾಜ್, ಗೊಂದಿ ಜಯರಾಮ್, ದಶರಥಗಿರಿ,ಚಾಮೇಗೌಡ ಮತ್ತಿತರರು ಹಾಜರಿದ್ದರು.