ಆ್ಯಪ್ನಗರ

ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಿ: ಡಿಎಚ್‌ಎಸ್‌

ಈಗಿನ ಶಾಲಾ ಪಠ್ಯ ಪುಸ್ತಕ ಕ್ರಮ ಸರಿಇಲ್ಲ . ಮಕ್ಕಳಿಗೆ ಸುಳ್ಳು ಕಲಿಸುವ ಪ್ರಯತ್ನ ಆಗುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕಲ್ಪಿಸುವ ಕಡೆಗೆ ಸರಕಾರ ಆದ್ಯತೆ ನೀಡಬೇಕಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಭಿಪ್ರಾಯಪಟ್ಟರು.

ವಿಕ ಸುದ್ದಿಲೋಕ 16 Oct 2016, 10:54 pm

ತೀರ್ಥಹಳ್ಳಿ: ಈಗಿನ ಶಾಲಾ ಪಠ್ಯ ಪುಸ್ತಕ ಕ್ರಮ ಸರಿಇಲ್ಲ . ಮಕ್ಕಳಿಗೆ ಸುಳ್ಳು ಕಲಿಸುವ ಪ್ರಯತ್ನ ಆಗುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕಲ್ಪಿಸುವ ಕಡೆಗೆ ಸರಕಾರ ಆದ್ಯತೆ ನೀಡಬೇಕಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಭಿಪ್ರಾಯಪಟ್ಟರು.

ಶನಿವಾರ ತಾಲೂಕಿನ ಹೇರಂಬಾಪುರದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಏನು ಕಲಿಸ ಬೇಕು, ಬೇಡ ಎಂಬ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಹಿಂದಿನ ಅನೇಕ ಸುಳ್ಳು ಸಂಗತಿಗಳನ್ನ ಪಠ್ಯ ಪುಸ್ತಕದಲ್ಲಿ ದಾಖಲಿಸಿ ಮಕ್ಕಳಿಗೆ ಕಲಿಸಲಾಗುತ್ತಿದೆ. ಆರ‍್ಯರು, ದ್ರಾವಿಡರ ನಡುವೆ ಏನು ವ್ಯತ್ಯಾಸ ಇದೆ. ಆರ‍್ಯರು ಎಲ್ಲಿಂದ ಬಂದರು ಎಂಬ ವಿಷಯವಾಗಿ ನಿಖರ ಮಾಹಿತಿ ಇಲ್ಲ. ಸುಳ್ಳು ವಿಷಯಗಳನ್ನು ಹೇಳುವ ಮೂಲಕ ಸತ್ಯ ಮಾಡಲಾಗುತ್ತಿದೆ ಎಂದು ಶಂಕರಮೂರ್ತಿ ಹೇಳಿದರು.

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟೀಷರು ದುರುದ್ದೇಶದಿಂದ ಹಾಳು ಮಾಡಿದ್ದಾರೆ. ಭಾರತೀಯರು ಶಿಕ್ಷಣ ಕಲಿತರೆ ಸಾಮರ್ಥ್ಯ‌ ಹೆಚ್ಚಿಸಿಕೊಳ್ಳುತ್ತಾರೆ ಎಂಬ ಆತಂಕದಲ್ಲಿ ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಒದಗಿಸಿದರು. ಮಹಾತ್ಮ ಗಾಂಧಿ ಪ್ರತಿಪಾದಿಸಿದ ಶಿಕ್ಷಣ ಇಂದು ಅಗತ್ಯವಿದೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್‌ ಮಾತನಾಡಿ, ಸರಕಾರಿ, ಖಾಸಗಿ ಶಾಲೆಗಳ ನಡುವಿನ ಶಿಕ್ಷಣ ಕಲಿಕೆಯಲ್ಲಿ ವ್ಯತ್ಯಾಸ ಸರಿಪಡಿಸಬೇಕಿದೆ. ಶಿಕ್ಷಣ ಕುರಿತು ಪೂರ್ವಾಲೋಚನೆ ಮಾಡಿ ಪುನಶ್ಚೇತನ ನೀಡಬೇಕು. ಪ್ರತಿಭೆ, ಸಾಮರ್ಥ್ಯ‌ ಅರಳಿಸುವ ಶಿಕ್ಷಣ ಮಕ್ಕಳಿಗೆ ಸಿಕ್ಕರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರ ಸುಧಾರಿಸುವಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳು, ಪೋಷಕರ ಪಾತ್ರ ಮಹತ್ವದಾಗಿದೆ ಎಂದರು.

ಶಾಸಕ ಕಿಮ್ಮನೆರತ್ನಾಕರ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌ ಮಾತನಾಡಿದರು. ನಿವೃತ್ತ ಶಿಕ್ಷಕರು, ಶಾಲೆ ಅಭಿವೃದ್ಧಿಗೆ ಶ್ರಮಿಸಿದ ಅನೇಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ನವಮಣಿ, ಜಿ.ಪಂ.ಸದಸ್ಯೆ ಕಲ್ಪನಾ, ಸಾಲ್ಗಡಿ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಸುಮಿತ್ರ, ಬಿಇಓ ಕೃಷ್ಣಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರುತೇಶ್‌, ಸಿಆರ್‌ಪಿ ರಮೇಶ್‌, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಚ್‌.ವಿ.ಸುಬ್ರಮಣ್ಯ ಮತ್ತಿತರರು ಇದ್ದರು.

-----------

Vijaya Karnataka Web
ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಿ: ಡಿಎಚ್‌ಎಸ್‌

ಸಮಾನ ಶಿಕ್ಷಣ ಜಾರಿ ಆಗಬೇಕು- ಕಿಮ್ಮನೆ

ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಮಾತ್ರ ವಿಫಲ ಆಗಿಲ್ಲ. ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದ್ದೇವೆ. ಉತ್ಕೃಷ್ಟ ಭಾಷಣದಿಂದ ಶಿಕ್ಷಣ ಸುಧಾರಣೆ ಸಾಧ್ಯವಿಲ್ಲ. ಸಂಸತ್‌, ಶಾಸನಸಭೆಯಲ್ಲಿ ಏನು ಕೆಲಸ ಮಾಡಿದ್ದೀರಿ ಎಂದು ಜನಪ್ರತಿನಿಧಿಗಳನ್ನು ಜನರು ಪ್ರಶ್ನೆ ಮಾಡಲ್ಲ. ರಾಜ್ಯದ ಬಜೆಟ್‌ನ ಆದಾಯ ಎಷ್ಟು ಎಂಬ ಮಾಹಿತಿ ಶಿಕ್ಷಣ ಪಡೆದವರ ಬಳಿ ಇರುವುದಿಲ್ಲ. ಸಮಾನಜ್ಞಾನ ನೀಡುವ ಶಿಕ್ಷಣ ನೀತಿ ದೇಶದಲ್ಲಿ ಜಾರಿಗೊಳ್ಳಬೇಕು. ವಿವಿಧ ಹಂತದ ಪಠ್ಯಕ್ರಮ ಅಭ್ಯಾಸ ಮಕ್ಕಳಲ್ಲಿ ಅಂತರ ಸೃಷ್ಟಿಸುತ್ತದೆ .

-ಕಿಮ್ಮನೆರತ್ನಾಕರ್‌, ಶಾಸಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ