ಶಿಕಾರಿಪುರ: ಬಗರ್ಹುಕುಂ ಸಾಗುವಳಿ ಹಕ್ಕು ಪಡೆದ ರೈತರು ಭೂಮಿ ಪರಭಾರೆ ಮಾಡದೆ ಲಾಭದಾಯಕ ಕೃಷಿ ಕೈಗೊಂಡು ಕುಟುಂಬದ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಂಸದ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಕೃಷಿಕರಿಗೆ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಎಲ್ಲರಿಗೂ ಭೂಮಿ ಹಕ್ಕು ಸಿಗುವುದಕ್ಕೆ ಯತ್ನಿಸಲಾಗುವುದು ಎಂದರು.
ಬಗರ್ಹುಕುಂ ಸಾಗುವಳಿದಾರರ ಪರವಾಗಿ ಜಿಲ್ಲೆಯಲ್ಲಿ ಬಿಜೆಪಿ ನಡೆಸಿದ ಹೋರಾಟದ ಫಲವಾಗಿ ಇಂದು ರಾಜ್ಯದಲ್ಲಿ ಬಗರ್ಹುಕುಂ ರೈತರಿಗೆ ಸಾಗುವಳಿ ಚೀಟಿ ಸಿಗುವುದಕ್ಕೆ ಕಾರಣವಾಗಿದೆ. ಅರ್ಹ ಬಗರ್ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುವುದಕ್ಕೆ ಬಿಡುವುದಿಲ್ಲ ಎಂದರು.
ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ಫಾರಂ ನಂ. 53ರ ಅಡಿಯಲ್ಲಿ 16,830 ಅರ್ಜಿ ತಾಲೂಕಿನಲ್ಲಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 370 ಅರ್ಜಿ ಮಾತ್ರ ವಿಲೇವಾರಿ ಬಾಕಿಯಿದೆ. 94ಸಿ ಅಡಿ 4494 ಅರ್ಜಿ ಬಂದಿವೆ. ಅವುಗಳಲ್ಲಿ 380 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದು 574 ವಿಲೇವಾರಿ ಬಾಕಿಯಿವೆ. 94ಸಿಸಿ ಅಡಿ 322 ಅರ್ಜಿಗಳಲ್ಲಿ 44 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ರಾಜ್ಯದ ಯಾವ ತಾಲೂಕಿನಲ್ಲೂ ಇಷ್ಟು ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಿಲ್ಲ ಎಂದರು.
ತಾ.ಪಂ.ಅಧ್ಯಕ್ಷ ಎ.ಪರಮೇಶ್ವರಪ್ಪ, ಜಿ.ಪಂ.ಸದಸ್ಯೆ ಮಮತಾ ಸಾಲಿ, ಬಗರ್ಹುಕುಂ ಸದಸ್ಯ ಉಮೇಶ್ ಮಾರವಳ್ಳಿ ಮತ್ತಿತರರಿದ್ದರು.