ಶಿವಮೊಗ್ಗ: ಹಿಂದಿನ ಸರಕಾರ ಬಿಟ್ಟು ಹೋದ ಕಸವನ್ನು ಗುಡಿಸುವುದೇ ನಮ್ಮ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ 28ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರಕಾರ ಭೂ ಮಾಪಕರನ್ನೇ ನಿಯೋಜನೆ ಮಾಡಿರಲಿಲ್ಲ. ಬಹಳಷ್ಟು ಹುದ್ದೆಗಳು ಖಾಲಿ ಇದ್ದವು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2014ಧಿ-15ರಲ್ಲಿ 1363 ಹುದ್ದೆಗಳನ್ನು ಭರ್ತಿ ಮಾಡಿದೆ. ಲೈಸೆನ್ಸ್ ಹೊಂದಿರುವ ಒಂದು ಸಾವಿರ ಭೂ ಮಾಪಕರನ್ನು ಬಳಸಿಕೊಳ್ಳಲಾಗುತ್ತಿದೆ. ಸರಕಾರಿ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಸಹ ಈಡೇರಿಸುತ್ತೇವೆ ಎಂದರು.
ಇದೀಗ 4000 ಸಾವಿರ ಗ್ರಾಮಗಳನ್ನು ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಅನೇಕ ವ್ಯಾಜ್ಯಗಳನ್ನು ತಪ್ಪಿಸುವ ಸಲುವಾಗಿ ರಾಜ್ಯದ ಎಲ್ಲಾ ಗ್ರಾಮಗಳನ್ನು ಪೋಡಿ ಮುಕ್ತ ಮಾಡಬೇಕು ಎನ್ನುವ ಗುರಿ ಹೊಂದಲಾಗಿದೆ. ಹಾಗಾಗಿ ಭೂ ಮಾಪನ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಸರಕಾರಿ ಅಧಿಕಾರಿಗಳ ಕರ್ತವ್ಯ. ಹಾಗಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಪರಿಣಾಮಕಾರಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು.
ಇತಿಹಾಸ ಮೆಲುಕು : ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜಮಹಾರಾಜರು, ಪಾಳೇಗಾರರ ಮೂಲ ಆದಾಯ ಕಂದಾಯ ಮತ್ತು ಕೃಷಿಯೇ ಆಗಿತ್ತು. ಮುಂದೆ ಮನುಷ್ಯ ಸಂಘ ಜೀವಿ ಆದ ಮೇಲೆ ಗಡಿಗಳನ್ನು ನಿಗಧಿ ಪಡಿಸಿ ಕಂದಾಯ ವಸೂಲಿ ಮಾಡಲು ಪ್ರಾರಂಭಿಸಿದ. ಭೂ ಮಾಪನ ಎನ್ನುವುದು ಮೌರ್ಯರ ಕಾಲದಲ್ಲಿ ಆರಂಭವಾದರೂ ಕೂಡ ವ್ಯವಸ್ಥಿತವಾಗಿ ಪ್ರಾರಂಭವಾಗಿದ್ದು ಪ್ಲಾಸಿ ಕದನದ ನಂತರ. ರಾಬರ್ಟ್ಕ್ಲೈವ್ ಸರ್ವೆ ಆಫ್ ಇಂಡಿಯಾ ಪ್ರಾರಂಭಿಸಿದನು. ಬ್ರಿಟಿಷ್ ಆಡಳಿತವಿದ್ದ 1807 ಏ.10 ರಂದು ಅಂದಿನ ಮದ್ರಾಸ್ನಲ್ಲಿ ಮೊದಲು ಭೂ ಮಾಪನ ದಿನಾಚರಣೆ ಆರಂಭವಾಗಿ ಇಂದಿಗೂ ಅದು ಮುಂದುವರೆದಿದೆ ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಭೂ ಮಾಪನ ಇಲಾಖೆ ಅಧಿಕಾರಿಗಳು ಬರ ಪರಿಹಾರಕ್ಕಾಗಿ ತಮ್ಮ ಒಂದು ದಿನದ ವೇತನ 30 ಲಕ್ಷ ರೂ. ವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಮೂಲಕ ಮುಖ್ಯಮಂತ್ರಿಗಳಿಗೆ ನೀಡಿದರು. ಇದೇ ಸಂದರ್ಭದಲ್ಲಿ ಇಲಾಖಾ ನೌಕರರ ಸ್ವರಚಿತ ಕವನ ಸಂಕಲನ ಹಾಗೂ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗಣೇಶ್ ಪ್ರಕಾಶ್ ಹುಕ್ಕೇರಿ, ಭೂಮಾಪನ ಕಂದಾಯ ವ್ಯವಸ್ಥೆಯ ಆಯುಕ್ತ ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರಾದ ಆರ್.ಪ್ರಸನ್ನಕುಮಾರ್, ಶಾರದಾ ಪೂರಾರಯನಾಯ್ಕ್, ಪ್ರಮುಖರಾದ ಜ್ಯೋತಿ ಎಸ್.ಕುಮಾರ್, ಏಳುಮಲೈ, ಬಿ.ಪಿ.ಮಂಜೇಗೌಡ ಸೇರಿದಂತೆ ಹಲವರಿದ್ದರು.
-----------
ಕಾಗೋಡು ತಿಮ್ಮಪ್ಪರನ್ನು ಹಾಡಿ ಹೊಗಳಿದ ಸಿಎಂ
ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆಗೆ ದೊಡ್ಡ ಇತಿಹಾಸವಿದೆ. ಆದರೆ ಈ ಇಲಾಖೆಗಳಿಗೆ ನಿಜವಾದ ಶಸ್ತ್ರಿ ಚಿಕಿತ್ಸೆ ನೀಡಿದವರು ಕಾಗೋಡು ತಿಮ್ಮಪ್ಪನವರು. ಹಿಂದೆ ದೇವರಾಜು ಅರಸುರವರು ಊಳುವವನೇ ನೆಲದೊಡೆಯ ಎನ್ನುವ ಭೂ ಸುಧಾರಣೆ ಕಾಯಿದೆ ಜಾರಿ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇದೀಗ ಕಾಗೋಡು ತಿಮ್ಮಪ್ಪನವರ ಶ್ರಮದ ಫಲವಾಗಿ ವಾಸಿಸುವವನೇ ಮನೆ ಒಡೆಯ ಎನ್ನುವ ಕಾಯಿದೆ ಜಾರಿ ಮಾಡಲಾಗಿದೆ. ಜನರ ಶ್ರೇಯೋಭಿವೃದ್ಧಿಗಾಗಿ ಎಂತಹುದೇ ಸವಾಲನ್ನು ಸ್ವೀಕರಿಸಲು ತಿಮ್ಮಪ್ಪ ಸಿದ್ದರಿದ್ದಾರೆ. ತಪ್ಪನ್ನು ನೇರವಾಗಿ ಖಂಡಿಸುತ್ತಾರೆ. ಇಂತಹ ನಾಯಕನ ತವರೂರಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ ಆಚರಿಸಿ ಈ ದಿನಕ್ಕೆ ವಿಶೇಷ ಅರ್ಥ ಸಿಗುವಂತೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಿಎಂ ಹಾಡಿ ಹೊಗಳಿದರು.
---------------
ಭೂತದ ಬಾಯಲ್ಲಿ ಭಗವದ್ಗೀತೆ
ರಾಜ್ಯ ಕಾಂಗ್ರೆಸ್ ಸರಕಾರ ಅನೇಕ ಮಾನವೀಯತೆಯ ಮತ್ತು ಕ್ರಾಂತಿಕಾರಕ ಕಾನೂನುಗಳನ್ನು ಮಾಡಿದೆ. ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದೆ. ಆದರೆ ನಾವೆಂದು ಈ ಕಾರ್ಯಕ್ರಮಗಳ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಂಡಿಲ್ಲ. ಇತರರಂತೆ ಸೋಶಿಯಲ್ ಮೀಡಿಯಾ ಬಳಸಿಕೊಂಡು ಸುಳ್ಳು ಪ್ರಚಾರ ಮಾಡಿಲ್ಲ. ಕೆಲವರಿಗೆ ಸುಳ್ಳು ಹೇಳುವುದೇ ಒಂದು ಕಸುಬಾಗಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವ ಪರಿಸ್ಥಿತಿ ದೇಶ ಮತ್ತು ರಾಜ್ಯದ ಜನರಿಗೆ ಬಂದಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ