ಕುವೆಂಪು ವಿವಿ ಪರೀಕ್ಷೆ ದಿಢೀರ್ ರದ್ದು: ವರದಿ ಕೇಳಿದ ಕುಲಪತಿ
ಪ್ರಾಧ್ಯಾಪಕರ ನಡುವಿನ ತಿಕ್ಕಾಟ, ವೈಮನಸ್ಸು ಮತ್ತು ಪ್ರತಿಷ್ಠೆ ರಾಜ್ಯಶಾಸ್ತ್ರ ವಿಭಾಗದ ಪಿಎಚ್ಡಿ ಕೋರ್ಸ್ ವರ್ಕ್ ಪರೀಕ್ಷೆ ಅವಾಂತರಕ್ಕೆ ಕಾರಣವಾಗಿದೆ.
ಶಿವಮೊಗ್ಗ: ಪ್ರಾಧ್ಯಾಪಕರ ನಡುವಿನ ತಿಕ್ಕಾಟ, ವೈಮನಸ್ಸು ಮತ್ತು ಪ್ರತಿಷ್ಠೆ ರಾಜ್ಯಶಾಸ್ತ್ರ ವಿಭಾಗದ ಪಿಎಚ್ಡಿ ಕೋರ್ಸ್ ವರ್ಕ್ ಪರೀಕ್ಷೆ ಅವಾಂತರಕ್ಕೆ ಕಾರಣವಾಗಿದೆ.
ಪ್ರಶ್ನೆ ಪತ್ರಿಕೆ ಸಿದ್ಧವಾಗದೆ ಬುಧವಾರ ನಡೆಯಬೇಕಿದ್ದ ಕೋರ್ಸ್ ವರ್ಕ್ ಪರೀಕ್ಷೆ ರದ್ದು ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಪ್ರೊ.ಜೋಗನ್ ಶಂಕರ್ ಅವರು ಪರೀಕ್ಷಾಂಗ ಕುಲಸಚಿವ ಪ್ರೊ. ರಾಜಾನಾಯ್ಕ್ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ರಾಜಾನಾಯ್ಕ್ ಅವರು ಪ್ರಕರಣದ ವಿಚಾರಣೆ ಕೈಗೊಂಡಿದ್ದು ಪರೀಕ್ಷಾ ಮಂಡಳಿ(ಬಿಒಇ) ಅಧ್ಯಕ್ಷ ಪ್ರೊ.ಚಂದ್ರಶೇಖರ್ ಮತ್ತು ವಿಭಾಗದ ಅಧ್ಯಕ್ಷ ಪ್ರೊ.ಷಣ್ಮುಖ ಅವರಿಗೆ ಶೋಕಾಸ್ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾನಿಲಯ ಮೂಲಗಳು ತಿಳಿಸಿವೆ.
ಪರೀಕ್ಷಾ ಮಂಡಳಿ ಅಲ್ಲದೆ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರೂ ಆಗಿದ್ದ ಪ್ರೊ.ಚಂದ್ರಶೇಖರ್ ಅವರು ವಿಭಾಗಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಿಎಚ್ಡಿ ಸಂಶೋಧನಾ ಅಭ್ಯರ್ಥಿಗಳಿಗೆ ನಡೆಸಬೇಕಾದ ಕೋರ್ಸ್ ವರ್ಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾದ ಜವಾಬ್ದಾರಿ ಇವರ ಮೇಲಿತ್ತು.
ಇದೇ ಹೊತ್ತಿಗೆ ಪರೀಕ್ಷೆ ನಡೆಸುವ ಜವಾಬ್ದಾರಿ ಇದ್ದ ಪ್ರೊ.ಷಣ್ಮುಖ ಅವರಿಗೆ ಪ್ರಶ್ನೆಪತ್ರಿಕೆ ಬಂದಿಲ್ಲ ಎಂಬ ಮಾಹಿತಿ ಇದ್ದರೂ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದರು. ಕೊನೆ ಕ್ಷಣದಲ್ಲಾದರೂ ಪ್ರಶ್ನೆ ಪತ್ರಿಕೆ ಬರದ ಬಗ್ಗೆ ಪರೀಕ್ಷಾಂಗ ಕುಲಸಚಿವರು, ಕುಲಪತಿಗಳ ಗಮನ ಸೆಳೆಯಬಹುದಾಗಿತ್ತು. ಆ ಕ್ಷಣವೆ ಪರೀಕ್ಷೆಯನ್ನು ಮುಂದಕ್ಕೆ ಹಾಕುವ ತೀರ್ಮಾನ ಕೈಗೊಳ್ಳಬಹುದಿತ್ತು. ಕಡೇ ಪಕ್ಷ ಸಂಶೋಧನಾ ಅಭ್ಯರ್ಥಿಗಳು ಕೇವಲ 18 ಮಂದಿ ಇದ್ದ ಕಾರಣ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಪರೀಕ್ಷೆ ಮುಂದೂಡಿರುವ ಮಾಹಿತಿ ತಿಳಿಸಬಹುದಿತ್ತು.
ಈ ಎಲ್ಲ ಸಂಗತಿಗಳು ಈ ಇಬ್ಬರೂ ಪ್ರಾಧ್ಯಾಪಕರ ಗಮನದಲ್ಲಿದ್ದರೂ ವಿಶ್ವವಿದ್ಯಾನಿಲಯದ ಗಮನಕ್ಕೆ ತರದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಆ ಮೂಲಕ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಎಂಬ ಮಾತುಗಳು ಕ್ಯಾಂಪಸ್ನಲ್ಲಿ ಚರ್ಚೆಯಾಗುತ್ತಿವೆ.
ಕುವೆಂಪು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಲಾಗಿದ್ದ ಕೋರ್ಸ್ ವರ್ಕ್ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಬರದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು.