ಆ್ಯಪ್ನಗರ

ಹಸುಗಳ ಅಕ್ರಮ ಸಾಗಣೆ ಆರೋಪ: ಇಬ್ಬರಿಗೆ ಥಳಿತ

ಗೋವುಗಳನ್ನು ಕಳವು ಮಾಡಿ ಮನೆಯಲ್ಲಿ ಕೂಡಿಹಾಕಿ ಕಡಿತಲೆ ಮಾಡಿ ಬೇರೆಡೆ ಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂಬ ಸಂಶಯದ ಮೇಲೆ ಕೆಲ ಗ್ರಾಮಸ್ಥರು, ಗ್ರಾಮದ ಇಬ್ಬರನ್ನು ಥಳಿಸಿರುವ ವಿದ್ಯಮಾನ ಭಾನುವಾರ ತಡರಾತ್ರಿ ನಡೆದಿದೆ.

Vijaya Karnataka 25 Sep 2017, 5:00 am

ಹೊಸನಗರ : ಗೋವುಗಳನ್ನು ಕಳವು ಮಾಡಿ ಮನೆಯಲ್ಲಿ ಕೂಡಿಹಾಕಿ ಕಡಿತಲೆ ಮಾಡಿ ಬೇರೆಡೆ ಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂಬ ಸಂಶಯದ ಮೇಲೆ ಕೆಲ ಗ್ರಾಮಸ್ಥರು, ಗ್ರಾಮದ ಇಬ್ಬರನ್ನು ಥಳಿಸಿರುವ ವಿದ್ಯಮಾನ ಭಾನುವಾರ ತಡರಾತ್ರಿ ನಡೆದಿದೆ.

ತಾಲೂಕಿನ ಸೊನಲೆ ಗ್ರಾ.ಪಂ. ವ್ಯಾಪ್ತಿಯ ಬಿಳ್ಳೋಡಿ ಗ್ರಾಮ ವಾಸಿ ಈಶ್ವರ ನಾಯ್ಕ ಮತ್ತು ರಬ್ಬರ್‌ ಟ್ಯಾಪಿಂಗ್‌ ಕೆಲಸಕ್ಕೆ ಬಂದಿದ್ದ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪದ ಜೋಬಿ ಜೋಸ್‌ ಹಲ್ಲೆಗೆ ಒಳಗಾದವರು.

ಹಲ್ಲೆಗೆ ಸಂಬಂಧಿಸಿ 22 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಜಗದೀಶ, ಪ್ರಭಾಕರ್‌, ಕಿರಣ್‌, ವಸಿಷ್ಠ, ಅಭಿಲಾಷ, ರಾಘವೇಂದ್ರರಿಗೆ ಅ.8ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ತಮ್ಮ ಜಮೀನಿಗೆ ಸಾಗುವಳಿ ಮಾಡುವ ಕಾರಣಕ್ಕೆ ಹಸುಗಳು ಬೇಕು ಎಂಬ ಉದ್ದೇಶಕ್ಕೆ ತೀರ್ಥಹಳ್ಳಿ ತಾಲೂಕಿನ ಹುಲಿಸರದಿಂದ 3 ಹಸುಗಳನ್ನು ಖರೀದಿ ಮಾಡಿ ಬಿಳ್ಳೋಡಿಯ ಮನೆಯ ಸಮೀಪ ಕಟ್ಟಿ ಹಾಕಿದ್ದರು. ಹಸುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ದಂಧೆ ನಡೆಸಲಾಗುತ್ತಿದೆ ಎಂದು ಅನುಮಾನದ ಮೇರೆಗೆ ಸ್ಥಳೀಯ ಗ್ರಾಮಸ್ಥರ ಗುಂಪು ಶನಿವಾರ ತಡರಾತ್ರಿ ಈಶ್ವರ ನಾಯ್ಕ ಮತ್ತು ಜೋಬಿ ಅವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಈಶ್ವರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ಈಶ್ವರ ನಾಯ್ಕ ಮತ್ತು ಜೋಬಿಯನ್ನು ಪೊಲೀಸರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರತಿದೂರು: ಗುಡ್ಡಕ್ಕೆ ಮೇಯಲು ಬಿಟ್ಟ ಹಸುಗಳನ್ನು ಕಳೆದ ಕೆಲವು ದಿನಗಳಿಂದ ಅಪಹರಿಸಿ ಕಡಿದು ಮಾಂಸ ಮಾಡಿ ಮಾರಾಟ ನಡೆಸಲಾಗುತ್ತಿದೆ. ಬಿಳ್ಳೋಡಿ ಗ್ರಾಮದ ಈಶ್ವರ ನಾಯ್ಕ, ಜೋಬಿ ಜೋಸ್‌ ಎಂಬುವವರು ಹಲವು ಸಮಯದಿಂದಲೂ ಅಕ್ರಮ ಗೋವು ಸಾಗಣೆ ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿದ್ದಾರೆ. ಕಳ್ಳತನವಾಗಿರುವ ಹಸುಗಳ ಬಗ್ಗೆ ಶನಿವಾರ ರಾತ್ರಿ ಕೇಳಲು ಹೋದ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಳ್ಳೋಡಿಯ ಕೆಲ ಗ್ರಾಮಸ್ಥರು ಪ್ರತಿದೂರು ದಾಖಲಿಸಿದ್ದಾರೆ.

ಠಾಣೆ ಎದುರು ಪ್ರತಿಭಟನೆ

Vijaya Karnataka Web
ಹಸುಗಳ ಅಕ್ರಮ ಸಾಗಣೆ ಆರೋಪ: ಇಬ್ಬರಿಗೆ ಥಳಿತ

ಹಸುಗಳ ಅಪಹರಣ, ಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸ್‌ ಇಲಾಖೆ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಗೋಹತ್ಯೆಯಲ್ಲಿ ತೊಡಗಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಬಿಳ್ಳೋಡಿ ಗ್ರಾಮಸ್ಥರು ಪೊಲೀಸ್‌ ಠಾಣೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ