ಶಿವಮೊಗ್ಗ : ಕೇಂದ್ರ ಬಿಜೆಪಿ ಸರಕಾರ ನೋಟ್ ರದ್ಧತಿ ನಿರ್ಧಾರ ಘೋಷಿಸಿದ ನ. 8ರ ದಿನವನ್ನು ಅಕ್ರೋಶ್ ದಿವಸ್ ಎಂದು ಪರಿಗಣಿಸಿ ಭಾರತ್ ಬಂದ್ ಆಚರಿಸಲು ಪ್ರತಿಪಕ್ಷ ಗಳು ನ.28 ರಂದು ದೇಶ ವ್ಯಾಪ್ತಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಬಂದ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಾರಯಲಿ ಆಯೋಜಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪ್ರಮುಖರ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಿರ್ಧರಿಸಿತು. ಈ ಸಂದರ್ಭ ತೀ.ನ.ಶ್ರೀನಿವಾಸ್ ಮಾತನಾಡಿ, ಮೋದಿಯವರು ಯಾವುದೇ ಸಿದ್ಧತೆಯಿಲ್ಲದೆ ನೋಟ್ ರದ್ದುಗೊಳಿಸಿ ಸಾರ್ವಜನಿಕರು ತೊಂದರೆಗೆ ಸಿಲುಕುವಂತೆ ಮಾಡಿದ್ದಾರೆ. ಈ ಏಕಾಏಕಿ ನಿರ್ಧಾರದಿಂದ ಮೋದಿಯವರು ದೇಶದ ಜನರನ್ನು ಕತ್ತಲಲ್ಲಿ ಇರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಕೇಂದ್ರ ಸರಕಾರದ ಈ ಸರ್ವಾಧಿಕಾರಿ ಧೋರಣೆ ವಿರುದ್ಧ ನ.28ರಂದು ಶಿವಮೊಗ್ಗದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ನಾಗರಿಕರು, ಸಂಘ ಸಂಸ್ಥೆಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಐನೂರು ಮತ್ತು ಒಂದು ಸಾವಿರ ನೋಟ್ ರದ್ದತಿಯ ಪೂರ್ವದಲ್ಲಿ ಕೆಲವು ಕೈಗಾರಿಕೋದ್ಯಮಿಗಳಿಗೆ ಹಾಗೂ ಬಿಜೆಪಿಯವರಿಗೆ ಗೊತ್ತಾಗಿದೆ. ಇದೊಂದು ಬೃಹತ್ ಹಗರಣದ ಸಂಗತಿ. ಇದಕ್ಕಾಗಿ ದೇಶದ ಎಲ್ಲ ಶಕ್ತಿಗಳು ಒಂದಾಗಿ ಮೋದಿಗೆ ಪ್ರತ್ಯುತ್ತರ ನೀಡಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಎಲ್.ರಾಮೇಗೌಡ ಮಾತನಾಡಿ, ನೋಟ್ ರದ್ಧತಿಯಿಂದ ಕಾಳಧನಿಕರಿಗಿಂತ ಜನಸಾಮಾನ್ಯರೇ ಹೆಚ್ಚು ಸಂಕಷ್ಟಕೀಡಾಗಿದ್ದಾರೆ. ಈ ನಿರ್ಧಾರದಿಂದ ಶ್ರೀ ಸಾಮಾನ್ಯರ ಬದುಕು ದುರ್ಬಲಗೊಂಡಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಕಾಶಿ, ಬಿ.ನಾಗರಾಜ್, ಎಸ್.ರವಿಕುಮಾರ್, ಎಚ್.ಎಸ್. ಸುಂದರೇಶ್, ನಗರದ ಮಹಾದೇವಪ್ಪ, ಎಸ್.ಪಿ.ದಿನೇಶ್, ವಿಜಯಲಕ್ಷ್ಮಿ ಪಾಟೀಲ್, ಶಕುಂತಲಾ, ಬಲದೇವ್ಕೃಷ್ಣ, ಖಾಜಿ ಮೊಹಮ್ಮದ್ ಉಸ್ಮಾನ್, ಶ್ರೀಧರಮೂರ್ತಿ ನವಲೆ, ಶಬ್ಬಿರ್ ಅಹಮ್ಮದ್, ಎಂ.ಕೆ.ಸುರೇಶ್, ರಘು, ಅಸಿಫ್, ಪಿ.ಪ್ರಕಾಶ್, ಎಸ್.ಪಿ.ಶೇಷಾದ್ರಿ, ಎನ್.ಉಮಾಪತಿ, ವಿನಾಯಕಮೂರ್ತಿ, ಮಮತಾಸಿಂಗ್, ರೇಷ್ಮ, ಸಂಜೀವಪ್ಪ, ಗೋಣಿ ಮಾಲತೇಶ್, ಯು.ಶಿವಾನಂದ್ ಮತ್ತಿತರರಿದ್ದರು.