ಆ್ಯಪ್ನಗರ

ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

ಮಾನವ ಹಕ್ಕುಗಳ ಹೋರಾಟಗಾರ ಜನಪರ ಚಳವಳಿಗಳ ಒಡನಾಡಿ ಸ್ವಾಮಿ ಅಗ್ನಿವೇಶ್‌ರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಸಂವಿಧಾನ ಉಳಿವಿಗಾಗಿ ಕರ್ನಾಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

Vijaya Karnataka 21 Jul 2018, 5:00 am
ಶಿವಮೊಗ್ಗ : ಮಾನವ ಹಕ್ಕುಗಳ ಹೋರಾಟಗಾರ ಜನಪರ ಚಳವಳಿಗಳ ಒಡನಾಡಿ ಸ್ವಾಮಿ ಅಗ್ನಿವೇಶ್‌ರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಸಂವಿಧಾನ ಉಳಿವಿಗಾಗಿ ಕರ್ನಾಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
Vijaya Karnataka Web agitation to arrest accused
ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ


ಸ್ವಾಮಿ ಅಗ್ನಿವೇಶ್‌ ಆರ್ಯ ಸಮಾಜದ ಮಹಾನ್‌ ಸಂತ, ಹೋರಾಟಗಾರ. ಅವರಿಗೆ 82 ವರ್ಷ. ಇಂತಹ ವೃದ್ಧರ ಮೇಲೆ ಬಿಜೆಪಿ ಕಾರ್ಯಕರ್ತರೆಂದು ಹೇಳಲಾಗುತ್ತಿರುವ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ಇಂತಹ ದುಷ್ಕರ್ಮಿಗಳನ್ನು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ವಾಮಿ ಅಗ್ನಿವೇಶ್‌ ಹಿಂದು ಧರ್ಮದ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಬಂದಿರುವ ಸನ್ಯಾಸಿ. ಬಡವರ ಆದಿವಾಸಿಗಳ, ದಲಿತರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಪ್ರತಿಭಟನೆ ಮಾಡುತ್ತಾ ಬಂದವರು. ಭೋಪಾಲ್‌ ವಿಷಾನಿಲ ಸಂತ್ರಸ್ತರ ಪರ, ಹರಿಯಾಣದ ಜೀತದಾಳುಗಳ ವಿಮುಕ್ತಿಗಾಗಿ, ಜಾರ್ಖಂಡ್‌ನ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದವರು, ಜತೆಗೆ ನಕಲಿ ಹಿಂದುತ್ವವನ್ನು ಪ್ರಶ್ನಿಸುತ್ತಾ ಬಂದವರು. ಇಂತಹವರ ಮೇಲೆ ಹಲ್ಲೆ ಮಾಡಲಾಗಿದೆ. ಸಮಾನತೆಯ ಪರವಾಗಿ, ಮಾನವೀಯತೆ ಪರವಾಗಿ ಧ್ವನಿ ಎತ್ತಿದವರನ್ನು ಕೊಲ್ಲಲಾಗುತ್ತಿದೆ. ಇಂತಹ ಕೃತ್ಯಗಳ ಹಿಂದೆ ದೇಶ ಆಳುವವರ ಮೌನ ಸಮ್ಮತಿ ರಹಸ್ಯ ಬೆಂಬಲ ಇದ್ದಂತೆ ಕಾಣುತ್ತದೆ ಎಂದು ದೂರಿದರು.

ದಾಬೋಲ್ಕರ್‌, ಗೋವಿಂದ ಪನ್ಸಾರೆ, ಕನ್ನಡದ ಕಲ್ಬುರ್ಗಿ, ಗೌರಿ ಲಂಕೇಶ್‌ ಮುಂತಾದವರನ್ನು ಕೊಲ್ಲಲಾಗಿದೆ. ಹಲವು ಪ್ರಗತಿಪರರ ಮೇಲೆ ಹಲ್ಲೆ ನಡೆದಿದೆ. ಪ್ರಧಾನಿಗಳು ಮೌನವಾಗಿರುವುದು ನೋಡಿದರೆ ಸಂಶಯ ಉಂಟಾಗುತ್ತದೆ ಎಂದರು.

ಬುದ್ಧ, ಬಸವ, ಗಾಂಧಿ, ವಿವೇಕಾನಂದರ ಭಾರತ ಇಂದು ಹಿಟ್ಲರ್‌, ಮುಸಲೋನಿ ಭಾರತವಾಗಿ ಬದಲಾಗುತ್ತಿದೆ. ಸಂವಿಧಾನ ರಕ್ಷ ಕರಾದ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಹಲ್ಲೆಕೋರ ಗೂಂಡಾಗಳನ್ನು ಬಂಧಿಸಿ ಕಾನೂನು ವ್ಯವಸ್ಥೆ ಕಾಪಾಡಲು ಕೇಂದ್ರ ಸರಕಾರಕ್ಕೆ ತಾಕೀತು ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭ ಪ್ರಮುಖರಾದ ಕೆ.ಪಿ. ಶ್ರೀಪಾಲ್‌, ಎನ್‌.ರವಿಕುಮಾರ್‌, ಕೃಷ್ಣಮೂರ್ತಿ, ಆರ್‌.ಕುಮಾರ್‌, ಎಂ.ಗುರುಮೂರ್ತಿ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ