ಆ್ಯಪ್ನಗರ

ರೈತರು ಆರ್ಥಿಕ ಸದೃಢರಾದರೆ ಕೃಷಿ ಉಳಿವು

ದೇಶದ ಬೆನ್ನೆಲುಬಾಗಿರುವ ರೈತರ ಬದುಕು ಶೋಷಿತವಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಿ ಕೃಷಿ ಕ್ಷೇತ್ರ ಉಳಿವಿಗೆ ಸರಕಾರಗಳು ಪೂರಕ ವಾತಾವರಣ ಸೃಷ್ಟಿಸಬೇಕಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.

Vijaya Karnataka 26 Mar 2019, 5:00 am
ಶಿವಮೊಗ್ಗ : ದೇಶದ ಬೆನ್ನೆಲುಬಾಗಿರುವ ರೈತರ ಬದುಕು ಶೋಷಿತವಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಿ ಕೃಷಿ ಕ್ಷೇತ್ರ ಉಳಿವಿಗೆ ಸರಕಾರಗಳು ಪೂರಕ ವಾತಾವರಣ ಸೃಷ್ಟಿಸಬೇಕಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.
Vijaya Karnataka Web SMR-25GANESH3


ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ವಿವಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 'ಕೃಷಿ ಉತ್ಪನ್ನ ಮಾರುಕಟ್ಟೆ ಸಮಸ್ಯೆಗಳು ಮತ್ತು ಪರಿಹಾರ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರ ಮಧ್ಯವರ್ತಿಗಳ ಕಪಿಮುಷ್ಠಿಯಿಂದ ನಲುಗುತ್ತಿದೆ. ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ, ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ ಇಲ್ಲ. ಮಧ್ಯವರ್ತಿಗಳ ಹಾವಳಿಗೆ ಮಿತಿ ಇಲ್ಲ. ಹೀಗಾಗಿ ರೈತರು ಸಮಸ್ಯೆಗಳನ್ನು ಮಡಿಲಲ್ಲೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ನಾನಾ ಸಂಕಷ್ಟಗಳಿಂದ ಬಳಲುತ್ತಿರುವ ರೈತರ ಸಮಸ್ಯೆಗೆ ಪರಿಹಾರ ನೀಡಿ, ನಲುಗುತ್ತಿರುವ ಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸರಕಾರಗಳ ಮೇಲಿದೆ ಎಂದರು.

ದೇಶದಲ್ಲಿ ರೈತರ ಸಂಖ್ಯೆ ಅಧಿಕವಾಗಿದ್ದರೂ, ಕೃಷಿ ಕ್ಷೇತ್ರ ಮಾತ್ರ ಇನ್ನೂ ಅಸಂಘಟಿತ ವಲಯವಾಗಿಯೇ ಉಳಿದಿದೆ. ಹೀಗಾಗಿ ರೈತರು ವಿವಿಧ ಹಂತಗಳಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾರಾಟ ಪ್ರಕ್ರಿಯೆಯ ಸಂಪೂರ್ಣವಾದ ಆರ್ಥಿಕ ಲಾಭ ರೈತರಿಗೆ ತಲುಪುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದರು.

ಬ್ಯಾಂಕು, ಖಾಸಗಿ ಫೈನಾನ್ಷಿಯರುಗಳ ಬಳಿ ಸಾಲ ಮಾಡಿ ಬೆಳೆದ ಉತ್ಪನ್ನಗಳಿಗೆ ಸೂಕ್ತ ಪ್ರತಿಫಲ ಸಿಗದೆ ದಿವಾಳಿಯಾಗುವ ಕೆಲವು ಸಣ್ಣ ಪ್ರಮಾಣದ ರೈತರು ಆತ್ಮಹತ್ಯೆಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಇನ್ನು ವಿವಿಧ ಕೃಷಿ ಉತ್ಪನ್ನಗಳ ದರ ನಿಗದಿ ಮಾಡುವ ಸಮಿತಿಗಳ ಕೆಲವು ಸದಸ್ಯರಿಗೆ ರಾಜ್ಯದ ವಿವಿಧ ಭಾಗಗಳ ಕೃಷಿ ಸಂಕಷ್ಟದ ಸಮಗ್ರವಾದ ತಿಳಿವಳಿಕೆ ಕೊರತೆಯಿದೆ. ಇಂತಹ ಸಮಿತಿಗಳ ಶಿಫಾರಸ್ಸಿನ ಮೇರೆಗೆ ಸರಕಾರ ಬೆಲೆ ನಿಗದಿ ಮಾಡಿದಾಗ ರೈತರಿಗೆ ನಿರಾಶೆಯಾಗುವುದು ಸಹಜ ಎಂದರು.

ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಪ್ರೊ. ಪ್ರಕಾಶ್‌ ಕಾಂಬ್ಳೆ, ಕೃಷಿ ಉತ್ಪನ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವ್ಯಾಪಾರ ನೀತಿ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರೊ. ರವೀಂದ್ರನಾಥ್‌ ಕದಂ, ಪ್ರೊ. ಜಯರಾಮ್‌ ಭಟ್‌, ಪ್ರೊ. ಎಸ್‌.ಎನ್‌.ಯೋಗೀಶ್‌, ವಿವಿಧ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ